ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಮಂಗಳವಾರ ಲೋಕಸಭೆಯಲ್ಲಿ ಅದಾನಿ ಕಂಪನಿಯು ಸ್ಟಾಕ್ ಮ್ಯಾನಿಪುಲೇಷನ್ ಮಾಡಿರುವ ಕುರಿತು ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ವರದಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಸುದೀರ್ಘ ಭಾರತ್ ಜೋಡೋ ಯಾತ್ರೆಯ ನಂತರ ಸಂಸತ್ ಅಧಿವೇಶನಕ್ಕೆ ಹಾಜರಾಗಿರುವ ರಾಹುಲ್ ಗಾಂಧಿ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಪಾದಯಾತ್ರೆಯಲ್ಲಿ ಒಬ್ಬ ಉದ್ಯಮಿಯ ಹೆಸರನ್ನು ಮಾತ್ರ ಕೇಳಿದ್ದೇನೆ - ಅದು ಗೌತಮ್ ಅದಾನಿ. “ತಮಿಳುನಾಡಿನಿಂದ ಕೇರಳ ಹಿಮಾಚಲ ಪ್ರದೇಶದವರೆಗೆ ನಾವು ಎಲ್ಲೆಲ್ಲೂ ‘ಅದಾನಿ’ ಎಂಬ ಹೆಸರನ್ನು ಕೇಳುತ್ತಿದ್ದೇವೆ. ಇಡೀ ದೇಶದಾದ್ಯಂತ ಕೇವಲ 'ಅದಾನಿ', 'ಅದಾನಿ', 'ಅದಾನಿ'... ಎಂಬಂತಾಗಿದೆ. ಅದಾನಿ ಯಾವ ವ್ಯವಹಾರಕ್ಕೆ ಕಾಲಿಟ್ಟರೂ ವಿಫಲವೇ ಆಗುವುದಿಲ್ಲವಲ್ಲ ಎಂದು ಜನರು ನನ್ನನ್ನು ಕೇಳುತ್ತಿದ್ದರು” ಎಂದರು.
2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅದಾನಿ ಗ್ರೂಪ್ ಪರವಾಗಿ ಕೆಲಸ ಮಾಡುತ್ತಿದೆ. "2014 ರಲ್ಲಿ, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 609ನೇ ಸ್ಥಾನದಲ್ಲಿದ್ದರು. ಈಗ ಅವರು ಬರೀ ಮ್ಯಾಜಿಕ್ ನಿಂದ ವಿಶ್ವದ ಎರಡನೇ ಶ್ರೀಮಂತನ ಸ್ಥಾನದಲ್ಲಿದ್ದಾರೆ" ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
"ಅದಾನಿ ವೈಬ್ರಂಟ್ ಗುಜರಾತ್ನ ಬೆನ್ನೆಲುಬು" ಎಂದು ಆರೋಪಿಸಿದ ರಾಹುಲ್ ಗಾಂಧಿ, ನಂತರ ದೇಶದ ವಿಮಾನ ನಿಲ್ದಾಣಗಳನ್ನು ಸ್ವಾಧೀನಪಡಿಸಿಕೊಳ್ಳಲು ಅದಾನಿಗೆ ಸಹಾಯ ಮಾಡಲು ಮೋದಿ ಸರ್ಕಾರ ನಿಯಮಗಳನ್ನು ಬದಲಾಯಿಸಿದೆ ಎಂದು ದೂರಿದರು.
ಭಾರತದ ಅತ್ಯಂತ ಲಾಭದಾಯಕ ವಿಮಾನ ನಿಲ್ದಾಣ 'ಮುಂಬೈ ಏರ್ಪೋರ್ಟ್’ನ್ನು ಸಿಬಿಐ, ಇಡಿನಂತಹ ಏಜೆನ್ಸಿಗಳನ್ನು ಬಳಸಿಕೊಂಡು ಜಿವಿಕೆಯಿಂದ ಕಸಿದುಕೊಳ್ಳಲಾಯಿತು. ಇದನ್ನು ಮೋದಿ ಸರ್ಕಾರ ಅದಾನಿಗೆ ನೀಡಿತು” ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಮತ್ತು ಅದಾನಿ ವಿಮಾನದಲ್ಲಿ ಒಟ್ಟಿಗೆ ಇರುವ ಫೋಟೋವನ್ನು ಪ್ರದರ್ಶಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಇಬ್ಬರೂ ಒಟ್ಟಿಗೆ ಎಷ್ಟು ಪ್ರವಾಸ ಕೈಗೊಂಡಿದ್ದಾರೆ ಮತ್ತು ಕಳೆದ 20 ವರ್ಷಗಳಲ್ಲಿ ಅದಾನಿ ಬಿಜೆಪಿಗೆ ಎಷ್ಟು ಹಣ ನೀಡಿದ್ದಾರೆ ಎಂದು ತಿಳಿಯಲು ಬಯಸುವುದಾಗಿ ಹೇಳಿದರು.
Advertisement