ಒಡಿಶಾ: ಅಭಿವೃದ್ದಿ ವಲಯದಿಂದ ಹೊರಗುಳಿದ 200 ಬುಡಕಟ್ಟು ಕುಟುಂಬಗಳ ಗ್ರಾಮ

ಬಾಣಗಿರಿಪೋಸಿ ಬ್ಲಾಕ್‌ನ ಬ್ರಹ್ಮನಾಗಾಂವ್ ಗ್ರಾಮ ಪಂಚಾಯಿತಿಯ ದಾಂಟಿಯಾಕಚ ಗ್ರಾಮದ ನಿವಾಸಿಗಳಿಗೆ ರಸ್ತೆ, ವಿದ್ಯುತ್, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲ ಸೌಕರ್ಯಗಳು ದೂರದ ಕನಸಾಗಿ ಉಳಿದಿವೆ.
ದಾಂಟಿಯಾಕಚ ಗ್ರಾಮದ ನಿವಾಸಿಗಳು
ದಾಂಟಿಯಾಕಚ ಗ್ರಾಮದ ನಿವಾಸಿಗಳು

ಅರಿಪಾದಾ: ಬಾಣಗಿರಿಪೋಸಿ ಬ್ಲಾಕ್‌ನ ಬ್ರಹ್ಮನಾಗಾಂವ್ ಗ್ರಾಮ ಪಂಚಾಯಿತಿಯ ದಾಂಟಿಯಾಕಚ ಗ್ರಾಮದ ನಿವಾಸಿಗಳಿಗೆ ರಸ್ತೆ, ವಿದ್ಯುತ್, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲ ಸೌಕರ್ಯಗಳು ದೂರದ ಕನಸಾಗಿ ಉಳಿದಿವೆ.

ಸುಮಾರು 200 ಬುಡಕಟ್ಟು ಕುಟುಂಬಗಳು ವಾಸಿಸುವ ಗ್ರಾಮಕ್ಕೆ ಇನ್ನೂ ವಿದ್ಯುತ್ ಮತ್ತು ರಸ್ತೆ ಸಿಕ್ಕಿಲ್ಲ. ಸರ್ಕಾರದ ಯೋಜನೆಯಡಿ ಯಾವುದೇ ಮನೆ ಮಂಜೂರು ಕಾಣದ ಗ್ರಾಮಸ್ಥರು, ಸಮೀಪದ ಅರಣ್ಯದಿಂದ ಸಾಲ್ ಎಲೆಗಳನ್ನು ಸಂಗ್ರಹಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿ ನೀರಾವರಿ ಸೌಲಭ್ಯ ಇಲ್ಲದ ಕಾರಣ ಭತ್ತದ ಕೃಷಿ ಕೂಡ ಸಾಧ್ಯವಾಗುತ್ತಿಲ್ಲ.

ಸ್ಥಳೀಯರು ಗ್ರಾಮದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಬಾಣಗಿರಿಪೋಸಿ ಸಮುದಾಯ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಇಲ್ಲಿ ಅಂಗನವಾಡಿ ಕೇಂದ್ರ ಕೂಡ ಇಲ್ಲ. ರಸ್ತೆ ಇಲ್ಲದ ಕಾರಣ ಹತ್ತಿರದ ಚುರಬಂದ್‌ನಲ್ಲಿರುವ ಪ್ರಾಥಮಿಕ ಶಾಲೆ ತಲುಪಲು ಸಾಧ್ಯವಾಗದೆ ಗ್ರಾಮದ ಮಕ್ಕಳು ಅನಕ್ಷರಸ್ಥರಾಗಿದ್ದಾರೆ.

ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಗ್ರಾಮ ಕತ್ತಲಲ್ಲಿಯೇ ಉಳಿದಿದೆ. ಮೊಬೈಲ್ ಫೋನ್‌ಗಳನ್ನು ಹೊಂದಿರುವ ಮತ್ತು ಬಳಸುವ ಕೆಲವು ಸ್ಥಳೀಯರು ತಮ್ಮ ಸಾಧನಗಳನ್ನು ಇತರ ಹಳ್ಳಿಗಳಲ್ಲಿ ಚಾರ್ಜ್ ಮಾಡುತ್ತಾರೆ. ಸೀಮೆಎಣ್ಣೆಯ ಹೆಚ್ಚುತ್ತಿರುವ ಬೆಲೆಯು ಗ್ರಾಮಸ್ಥರನ್ನು ಬೇಗ ಮಲಗುವಂತೆ ಮಾಡುತ್ತದೆ. ಇದರಿಂದ ಸಮೀಪದ ಗ್ರಾಮಗಳ ಶಾಲೆಗಳಿಗೆ ದಾಖಲಾದ ಬೆರಳೆಣಿಕೆಯಷ್ಟು ಮಕ್ಕಳು ಮನೆಯಲ್ಲಿ ಓದಲು ಸಾಧ್ಯವಾಗುತ್ತಿಲ್ಲ'  ಎನ್ನುತ್ತಾರೆ ಇಲ್ಲಿನ ನಿವಾಸಿ ರಾಮಚಂದ್ರ ಹೆಂಬರಂ.

ದಾಂಟಿಯಾಕಚ ಗ್ರಾಮವು  ಬಾಣಗಿರಿಪೋಸಿಯೊಂದಿಗೆ ದುರ್ಗಮ ರಸ್ತೆ ಸಂಪರ್ಕವನ್ನು ಹೊಂದಿದೆ. ಈ ಮಾರ್ಗದಲ್ಲಿ ಜುಮುರಿ ಹೊಳೆಗೆ ಸೇತುವೆ ನಿರ್ಮಾಣವಾಗಬೇಕಿದೆ.

ಮಯೂರಭಂಜ್ ಜಿಲ್ಲಾಧಿಕಾರಿ ವಿನೀತ್ ಭಾರದ್ವಾಜ್ ಮಾತನಾಡಿ, ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕರು ಮತ್ತು ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು. ತಂಡವು ತನ್ನ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com