ಹೈದರಾಬಾದ್: ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯ (ಬಿಆರ್ಎಸ್) ಶಾಸಕರೊಬ್ಬರ ವಿರುದ್ಧ ಅನುಚಿತ ಟೀಕೆ ಮಾಡಿದ್ದಕ್ಕಾಗಿ ತೆಲಂಗಾಣ ಪೊಲೀಸರು ಭಾನುವಾರ ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರನ್ನು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿಯಾಗಿರುವ ಶರ್ಮಿಳಾ ಅವರನ್ನು ಮಹಬೂಬಾಬಾದ್ ಪಟ್ಟಣದಲ್ಲಿ ನಡೆಯುತ್ತಿರುವ ಪಾದಯಾತ್ರೆಯ ವೇಳೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗದಂತೆ ತಡೆಯಲು ಪೊಲೀಸರು ಅವರನ್ನು ಪಾದಯಾತ್ರೆಯ ರಾತ್ರಿ ಬಿಡುವಿನ ವೇಳೆಯಲ್ಲಿ ಬಂಧಿಸಿ ಹೈದರಾಬಾದ್ಗೆ ಕರೆದೊಯ್ದಿದ್ದಾರೆ.
ಶನಿವಾರ ಸಂಜೆ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಹಬೂಬಾಬಾದ್ನ ಶಾಸಕ ಬಿ.ಶಂಕರ್ ನಾಯ್ಕ್ ವಿರುದ್ಧ ಶರ್ಮಿಳಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
ಶರ್ಮಿಳಾ ವಿರುದ್ಧ ಮಹಬೂಬಾಬಾದ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 504 ಎ (ಶಾಂತಿಗೆ ಭಂಗ ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3 (1) ಆರ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಬಿಆರ್ಎಸ್ ಮುಖಂಡರೊಬ್ಬರು ಶರ್ಮಿಳಾ ವಿರುದ್ಧ ದೂರು ನೀಡಿದ್ದರು.
ಎರಡು ತಿಂಗಳ ವಿರಾಮದ ನಂತರ, ಶರ್ಮಿಳಾ ಈ ತಿಂಗಳ ಆರಂಭದಲ್ಲಿ ತಮ್ಮ ಪ್ರಜಾ ಪ್ರಸ್ಥಾನಂ ಪಾದಯಾತ್ರೆಯನ್ನು ಪುನರಾರಂಭಿಸಿದ್ದರು. ಕಳೆದ ವರ್ಷ ನವೆಂಬರ್ನಲ್ಲಿ ಪಾದಯಾತ್ರೆಯನ್ನು ನಿಲ್ಲಿಸಿದ ಸ್ಥಳದಿಂದ ಅವರು ಪುನರಾರಂಭಿಸಿದ್ದರು.
ನವೆಂಬರ್ 28 ರಂದು ವಾರಂಗಲ್ ಜಿಲ್ಲೆಯಲ್ಲಿ ಬಿಆರ್ಎಸ್ ಕಾರ್ಯಕರ್ತರು ಆಕೆಯ ಬಸ್ಗೆ ಬೆಂಕಿ ಹಚ್ಚಿದರು ಮತ್ತು ಇತರ ವಾಹನಗಳ ಮೇಲೆ ಕಲ್ಲು ತೂರಿದರು. ನಂತರ, ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿಯ ದೃಷ್ಟಿಯಿಂದ ಪಾದಯಾತ್ರೆಯನ್ನು ಹಿಂತೆಗೆದುಕೊಳ್ಳಲು ಶರ್ಮಿಳಾ ನಿರಾಕರಿಸಿದ್ದರಿಂದ ಪೊಲೀಸರು ಶರ್ಮಿಳಾ ಅವರನ್ನು ಬಂಧಿಸಿದ್ದರು.
ಬಳಿಕ ಶರ್ಮಿಳಾ ಅವರನ್ನು ಹೈದರಾಬಾದ್ಗೆ ಸ್ಥಳಾಂತರಿಸಲಾಗಿತ್ತು. ಮರುದಿನ, ಮುಖ್ಯಮಂತ್ರಿಯವರ ಅಧಿಕೃತ ನಿವಾಸದ ಕಡೆಗೆ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿರುವಾಗ ಮತ್ತೆ ಅವರನ್ನು ಬಂಧಿಸಲಾಯಿತು. ದಾಳಿಯಲ್ಲಿ ಹಾನಿಗೊಳಗಾದ ಕಾರನ್ನು ಓಡಿಸುತ್ತಿದ್ದ ಅವರು ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಲು ಬಯಸಿದ್ದರು. ಆದರೆ ಪೊಲೀಸರು ಆಕೆಯನ್ನು ದಾರಿ ಮಧ್ಯೆ ತಡೆದರು. ಆಕೆ ಕಾರಿನಿಂದ ಹೊರಬರಲು ನಿರಾಕರಿಸಿದಾಗ, ಪೊಲೀಸರು ಅದರ ಸಮೇತ ಠಾಣೆಗೆ ಎಳೆದೊಯ್ದಿದ್ದರು.
ಆದರೆ, ಪೊಲೀಸರು ಅನುಮತಿ ನೀಡದ ಕಾರಣ ಪಾದಯಾತ್ರೆ ಪುನರಾರಂಭಿಸಲು ಸಾಧ್ಯವಾಗಿರಲಿಲ್ಲ.
ವೈಎಸ್ಆರ್ಟಿಪಿ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದು, ಶರ್ಮಿಳಾ ಅವರಿಗೆ ಪಾದಯಾತ್ರೆ ಪುನರಾರಂಭಿಸಲು ಅವಕಾಶ ನೀಡುವಾಗ ಈ ಹಿಂದೆ ವಿಧಿಸಿದ್ದ ಷರತ್ತುಗಳನ್ನು ಪಾಲಿಸುವಂತೆ ಹೈಕೋರ್ಟ್ ಹೇಳಿದೆ.
Advertisement