ಕಾಂಜಾವಾಲಾ ಹಿಟ್ ಆ್ಯಂಡ್ ರನ್ ಕೇಸ್: ಮೃತ ಯುವತಿ ಸ್ನೇಹಿತೆ ನಿಧಿ ಬಂಧನವಾಗಿಲ್ಲ, ವಿಚಾರಣೆಗಷ್ಟೇ ಕರೆಯಲಾಗಿದೆ- ಪೊಲೀಸರ ಸ್ಪಷ್ಟನೆ
ನವದೆಹಲಿ: ಕಾಂಜಾವಾಲಾ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸ್ನೇಹಿತೆ ನಿಧಿ ಬಂಧನವಾಗಿಲ್ಲ, ವಿಚಾರಣೆಗೆ ಕರೆಯಲಾಗಿದೆ ಅಷ್ಟೆ ಎಂದು ದೆಹಲಿ ಪೊಲೀಸರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿನಿ ನಿಧಿ ಬಂಧನವಾಗಿದೆ ಎಂಬ ಸುದ್ದಿ ಮಾಧ್ಯಮಗಳ ವರದಿ ಕುರಿತು ಸ್ಪಷ್ಟನೆ ನೀಡಿರುವ ಅವರು, ಪ್ರಕರಣ ಸಂಬಂಧ ನಿಧಿಯವರ ವಿಚಾರಣೆ ಮಾಡುವ ಅಗತ್ಯವಿದ್ದು, ತನಿಖೆ ಭಾಗವಾಗಿ ಅವರನ್ನು ವಿಚಾರಣೆಗೆ ಕರೆಯಲಾಗಿದೆ. ಆಕೆಯನ್ನು ಬಂಧನಕ್ಕೊಳಪಡಿಸಿಲ್ಲ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿದ್ದ ನಿಧಿಯವರು, ಕಾರಿನಡಿ ಅಂಜಲಿ ಸಿಲುಕಿರುವುದು ಅವರಿಗೆ ತಿಳಿದಿತ್ತು. ಆಕೆಯನ್ನು ತೊಡೆದುಹಾಕಲು ಹಿಂದೆ-ಮುಂದೆ ಕಾರು ಚಲಾಯಿಸಿದ್ದರು. ಆದರೆ, ಅಂಜಲಿಯವರ ದೇಹದ ಭಾಗ ಕಾರಿನ ಭಾಗಗಳಲ್ಲಿ ಸಿಲುಕಿಕೊಂಡಿತ್ತು. ಅಂಜಲಿಯವರು ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದರು, ಆದರೆ, ಅವರು ಈ ಬಗ್ಗೆ ಗಮನಕೊಡದಂತೆ ಕಾರು ಚಲಾಯಿಸಿದ್ದರು.
ಅಪಘಾತ ನೋಡಿದ ಬಳಿಕ ನಾನು ಆಘಾತಕ್ಕೊಳಗಾಗಿದ್ದೆ. ಮಾತನಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಸಂಪೂರ್ಣ ನಿಸ್ಸಾಹಕ ಹಾಗೂ ಭಯಭೀತಳಾಗಿದ್ದೆ. ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆಘಾತಕ್ಕೊಳಗಾಗಿದ್ದ ನಾನು ನೇರವಾಗಿ ಮನೆಗೆ ಹೋಗಿದ್ದೆ, ಅಪಘಾತದ ಬಗ್ಗೆ ಅಂಜಲಿ ಮನೆಯವರಿಗೆ ತಿಳಿಸಿದ್ದೆ. ಆದರೆ, ಅವರು ನನ್ನ ಮೇಲೆ ಆರೋಪ ಮಾಡುತ್ತಿದ್ದರು ಎಂದು ಹೇಳಿದ್ದರು.
ದೆಹಲಿಯ ಹೊರಭಾಗದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಹಲವು ಕಿಲೋಮೀಟರ್ಗಳವರೆಗೆ ಮಹಿಳೆಯ ದೇಹ ಎಳೆದೊಯ್ದು ಹತ್ಯೆಗೀಡಾದ 20ರ ಹರೆಯದ ಮಹಿಳೆಯ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ