ಉತ್ತರಾಖಂಡ ಭೂಕುಸಿತ: ಜ್ಯೋತಿರ್ಮಠ ಬೆನ್ನಲ್ಲೇ ಶಂಕರಾಚಾರ್ಯ ಮಠಕ್ಕೂ ಅಪಾಯ, ಬಿರುಕು ಬಿಟ್ಟ ಶಿವಲಿಂಗ, ಇಡೀ ಆಶ್ರಮವೇ ಕುಸಿಯುವ ಭೀತಿ!

ಈ ಹಿಂದೆ ಕಂಡುಕೇಳರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಉತ್ತರಾಖಂಡದಲ್ಲಿ ಈಗ ಬೀಕರ ಭೂ ಕುಸಿತ ಸಮಸ್ಯೆ ತಲೆದೋರಿದ್ದು, ಬೆಟ್ಟ-ಗುಡ್ಡಗಳಲ್ಲ.. ಇಡೀ ಊರಿಗೆ ಊರೇ ಕುಸಿಯುವ ಭೀತಿ ಎದುರಾಗಿದೆ.
ಬಿರುಕು ಬಿಟ್ಟ ಶಂಕರಾಚಾರ್ಯ ಮಠ ಮತ್ತು ಶಿವಲಿಂಗ
ಬಿರುಕು ಬಿಟ್ಟ ಶಂಕರಾಚಾರ್ಯ ಮಠ ಮತ್ತು ಶಿವಲಿಂಗ

ಚಮೋಲಿ: ಈ ಹಿಂದೆ ಕಂಡುಕೇಳರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಉತ್ತರಾಖಂಡದಲ್ಲಿ ಈಗ ಬೀಕರ ಭೂ ಕುಸಿತ ಸಮಸ್ಯೆ ತಲೆದೋರಿದ್ದು, ಬೆಟ್ಟ-ಗುಡ್ಡಗಳಲ್ಲ.. ಇಡೀ ಊರಿಗೆ ಊರೇ ಕುಸಿಯುವ ಭೀತಿ ಎದುರಾಗಿದೆ.

ಹೌದು.. ಉತ್ತರಾಖಂಡದ ಹಿಂದೂ ಮಠಗಳಲ್ಲಿ ಒಂದಾದ ಜೋಶಿಮಠದ ಪರಿಸ್ಥಿತಿಯು ಘೋರವಾಗಿದ್ದು, ಜ್ಯೋತಿರ್ಮಠದ ಶಂಕರಾಚಾರ್ಯ ಮಠವು ಕಳೆದ 15 ದಿನಗಳಿಂದ ಹಲವೆಡೆ ಬಿರುಕು ಬಿಟ್ಟಿದ್ದು, ಇಡೀ ಮಠ ಕುಸಿಯ ಭೀತಿ ಎದುರಾಗಿದೆ.  ಕಳೆದ 15 ದಿನಗಳಿಂದ ಈ ಬಿರುಕುಗಳು ಹೆಚ್ಚಾಗ ತೊಡಹಿದ್ದು, ಯಾವಾಗ ಬೇಕಾದರೂ ಮಠ ಕುಸಿಯುವ ಸಾಧ್ಯತೆ ಇದೆ ಎಂದು ಜ್ಯೋತಿರ್ಮಠದ ಆಡಳಿತ ಮಂಡಳಿ ತಿಳಿಸಿದೆ.

ಏತನ್ಮಧ್ಯೆ, ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಮನೆಗಳಲ್ಲಿ ಬಿರುಕು ಕಾಣಿಸಿಕೊಂಡ ನಂತರ, ಒಟ್ಟು 66 ಕುಟುಂಬಗಳು ಜೋಶಿಮಠದಿಂದ ವಲಸೆ ಹೋಗಿವೆ. ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಸುರಕ್ಷಿತ ಪರಿಹಾರ ಶಿಬಿರಗಳಲ್ಲಿ ಇರಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ ಎಂದು ಆಡಳಿತ ಭಾನುವಾರ ತಿಳಿಸಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಅವರು ನಿನ್ನೆ ರಾತ್ರಿ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಯಾವುದಾದರೂ ಅವಶ್ಯಕತೆ ಇದ್ದಲ್ಲಿ ತಕ್ಷಣ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದರು. ಉತ್ತರಾಖಂಡದ ಪವಿತ್ರ ಪಟ್ಟಣ ಜೋಶಿಮಠದ ನಿವಾಸಿಗಳು ಪಟ್ಟಣದ ಮನೆಗಳು ಮತ್ತು ರಸ್ತೆಗಳಲ್ಲಿ ಬಿರುಕುಗಳನ್ನು ಗಮನಿಸಿದ ನಂತರ ಆತಂಕಕ್ಕೊಳಗಾಗಿದ್ದಾರೆ ಮತ್ತು ಆಡಳಿತದಿಂದ ಸ್ಥಳಾಂತರಿಸಿ ಪುರಸಭೆಯ ರಾತ್ರಿ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಜೋಶಿಮಠದಲ್ಲಿ ನಿರಂತರ ಭೂಮಿ ಕುಸಿತದ ಪರಿಣಾಮವಾಗಿ 561 ಮನೆಗಳಲ್ಲಿ ಬಿರುಕುಗಳು ಉಂಟಾಗಿವೆ ಎಂದು ವರದಿಯಾಗಿದೆ.

ಸಂತ್ರಸ್ತ ಜನರು, ಅವರ ಕುಟುಂಬಗಳು ಮತ್ತು ಮಕ್ಕಳು ಪ್ರಸ್ತುತ ರಾತ್ರಿ ಆಶ್ರಯದಲ್ಲಿ ವಾಸಿಸುತ್ತಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಲು ರಾಜ್ಯ ಸರ್ಕಾರ ತಜ್ಞರ ತಂಡವನ್ನು ಪ್ರದೇಶಕ್ಕೆ ಕಳುಹಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಕೂಡ ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಚಮೋಲಿ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಲಲಿತ್ ನಾರಾಯಣ ಮಿಶ್ರಾ ಶುಕ್ರವಾರ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಠದ ಮುಖ್ಯಸ್ಥ ಸ್ವಾಮಿ ವಿಶ್ವಪ್ರಿಯಾನಂದ ಅವರು, 'ದೈವನಾಡಿನಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಅಭಿವೃದ್ಧಿ’ಯೇ ದುರಂತಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಅಭಿವೃದ್ಧಿಯು ಈಗ ಜಲವಿದ್ಯುತ್ ಯೋಜನೆಗಳಿಂದ ನಾಶಕ್ಕೆ ಕಾರಣವಾಗಿದೆ, ಮತ್ತು ಸುರಂಗಗಳು ನಮ್ಮ ಊರಿನ ಮೇಲೆ ಪರಿಣಾಮ ಬೀರಿವೆ. 15 ದಿನಗಳ ಹಿಂದೆ ಯಾವುದೇ ಬಿರುಕುಗಳು ಇರಲಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಮಠದಲ್ಲಿ ಬಿರುಕುಗಳು ನಿರಂತರವಾಗಿ ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.

ಜೋಶಿಮಠ ಪಟ್ಟಣವನ್ನು ಜ್ಯೋತಿರ್ಮಠ ಎಂದೂ ಕರೆಯುತ್ತಾರೆ, ಇದು ಭಗವಾನ್ ಬದರಿನಾಥನ ಚಳಿಗಾಲದ ಆಸನವಾಗಿದೆ, ಅವರ ವಿಗ್ರಹವನ್ನು ಮುಖ್ಯ ಬದರಿನಾಥ ದೇವಾಲಯದಿಂದ ಜೋಶಿಮಠದ ವಾಸುದೇವ ದೇವಾಲಯಕ್ಕೆ ಪ್ರತಿ ಚಳಿಗಾಲದಲ್ಲಿ ತರಲಾಗುತ್ತದೆ. ಜೋಶಿಮಠದ ಪವಿತ್ರ ಪಟ್ಟಣವನ್ನು ಹಿಂದೂಗಳು ದೇಶದ ಪ್ರಮುಖ ಯಾತ್ರಾ ಕೇಂದ್ರವೆಂದು ಪೂಜಿಸುತ್ತಾರೆ.

ಶಿವಲಿಂಗದಲ್ಲೇ ಬಿರುಕು
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಸಂಭವಿಸುತ್ತಿರುವ ಭೂಕುಸಿತ ಇದೀಗ ಭೀಕರ ಸ್ವರೂಪ ಪಡೆದುಕೊಂಡಿದ್ದು, ಜೋಶಿಮಠದ ಮಾ ಭಗವತಿ ದೇವಸ್ಥಾನದಲ್ಲಿ ಭೂಕುಸಿತ ಸಂಭವಿಸಿದ ನಂತರ ಇದೀಗ ಶಂಕರಾಚಾರ್ಯ ಮಾಧವ ಆಶ್ರಮದ ಸ್ಫಟಿಕದ ಶಿವಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಲಕ್ಷ್ಮೀ ನಾರಾಯಣ ದೇವಸ್ಥಾನದ ಸುತ್ತಲೂ ಸಂಕೀರ್ಣದ ಕಟ್ಟಡಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ಮಠದ ಪ್ರವೇಶ ದ್ವಾರ, ಲಕ್ಷ್ಮೀನಾರಾಯಣ ದೇವಸ್ಥಾನ ಹಾಗೂ ಸಭಾಂಗಣದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಜ್ಯೋತಿರ್ ಮಠದ ಪ್ರಭಾರಿ ಬ್ರಹ್ಮಚಾರಿ ಮುಕುಂದಾನಂದ ತಿಳಿಸಿದ್ದಾರೆ. 

ಈ ಸಂಕೀರ್ಣದಲ್ಲಿ, ತೋಟಕಾಚಾರ್ಯ ಗುಹೆ, ತ್ರಿಪುರ ಸುಂದರಿ ರಾಜರಾಜೇಶ್ವರಿ ದೇವಸ್ಥಾನ ಮತ್ತು ಜ್ಯೋತಿಷ್ ಪೀಠದ ಶಂಕರಾಚಾರ್ಯರ ಸ್ಥಾನವಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com