ಹೈದರಾಬಾದ್: ಸಹಪಾಠಿಗೆ ಕಪಾಳಮೋಕ್ಷ ಮಾಡಿದ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕರೀಂನಗರ ಸಂಸದ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ ಅವರು, ಶ್ರೀರಾಮ್ ಎಂಬ ಸಹಪಾಠಿಗೆ ಅಶ್ಲೀಲ ಭಾಷೆ ಬಳಸಿ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಶ್ರೀರಾಮ್, ಭಗೀರಥನ ಸ್ನೇಹಿತನ ಸಹೋದರಿಗೆ ಸಂದೇಶ ಮತ್ತು ಕರೆಗಳ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕಪಾಳಮೋಕ್ಷ ಮಾಡಿದ್ದ ಎಂದು ಹೇಳಿಕೊಂಡಿದ್ದಾನೆ.
ಈ ನಡುವೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ದುಂಡಿಗಲ್ ಪೊಲೀಸರು ಬಂಡಿ ಭಗೀರಥನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಶ್ವವಿದ್ಯಾನಿಲಯದ ಅಧಿಕಾರಿಗಳು ನೀಿಕುವ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ 34 ನೇ ಸೆಕ್ಷನ್ 341, 323, 504, 506 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
2 ತಿಂಗಳ ಹಿಂದೆ ಈ ಘಟನೆ ನಡೆಸಿದ್ದು, ಮಂಗಳವಾರ ವಿಡಿಯೋ ವೈರಲ್ ಆಗಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವವಿದ್ಯಾನಿಲಯಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಭಗೀರಥ ಅವರ ಸ್ನೇಹಿತರು ಹೇಳಿಕೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಬೆಯಲ್ಲಿ ಸಂಜಯ್ ಅವರು ಪಾಲ್ಗೊಂಡಿದ್ದರು. ಈ ನಡುವಲ್ಲೇ ವಿಡಿಯೋ ವೈರಲ್ ಆಗಿದ್ದು, ತೆಲಂಗಾಣ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಜಯ್ ಕುಮಾರ್ ಅವರು, ಪುತ್ರನ ಈ ಕೃತ್ಯ ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಸಹ ವಿದ್ಯಾರ್ಥಿನಿಯರ ಘನತೆ ಕಾಪಾಡುವ ಸಲುವಾಗಿ ಪುತ್ರ ಈ ರೀತಿ ಮಾಡಿದ್ದಾನೆ. ಅಗತ್ಯಬಿದ್ದರೆ ಪುತ್ರನನ್ನು ಜೈಲಿಗೆ ಕಳುಹಿಸಲು ಸಿದ್ಧ ಎಂದು ಹೇಳಿದ್ದಾರೆ.
ಬಳಿಕ ಈ ಬೆಳವಣಿಗೆಯನ್ನು ಸೇಡಿನ ರಾಜಕಾರಣ ಎಂದು ಬಣ್ಣಿಸಿದ ಅವರು, ತೆಲಂಗಾಣ ರಾಜ್ಯ ಮುಖ್ಯಮಂತ್ರಿ ಮತ್ತು ಭಾರತ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರ ವಿರುದ್ಧ ಕಿಡಿಕಾರಿದರು.
ರಾಜಕೀಯವಾಗಿ ಬಿಜೆಪಿಯೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗದ ಕಾರಣ ಆಡಳಿತ ಪಕ್ಷವು ನನ್ನ ಪುತ್ರನನ್ನು ಇಂತಹ ಪ್ರಕರಣಗಳಲ್ಲಿ ಸಿಲುಕಿಸಲು ಮುಂದಾಗಿರುವುದು ಖಂಡನೀಯ ಎಂದು ತಿಳಿಸಿದರು.
ಪುತ್ರನ ವಿರುದ್ಧ ಜಾಮೀನು ರಹಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳ ದಾಖಲಿಸಲು ಹಳೆಯ ವೀಡಿಯೋವನ್ನು ಇದೀಗ ವೈರಲ್ ಮಾಡಲಾಗಿದೆ. ಮಕ್ಕಳನ್ನು ರಾಜಕೀಯಕ್ಕೆ ಎಳೆದು ತರಬೇಡಿ. ಧೈರ್ಯವಿದ್ದರೆ ನನ್ನೊಂದಿಗೆ ನೇರವಾಗಿ ಸೆಣಸಾಡಿ ಎಂದು ಸವಾಲು ಹಾಕಿದ್ದಾರೆ.
ನನ್ನ ಮಗ ತಪ್ಪು ಮಾಡಿದ್ದಾನೆ, ಪೊಲೀಸರಿಗೆ ಶರಣಾಗುವಂತೆ ನಾನು ಅವನನ್ನು ಕೇಳುತ್ತೇನೆ. ಕಾನೂನಿನ ಪ್ರಕಾರ ಜೈಲಿಗೆ ಕಳುಹಿಸುತ್ತೇನೆ. ಆತನ ವಿರುದ್ಧ ಥರ್ಡ್ ಡಿಗ್ರಿ ಬಳಸಲಿ, ನಮಗೆ ಭಯವಿಲ್ಲ. ಇಂತಹ ಪೊಲೀಸ್ ಪ್ರಕರಣಗಳು ದಾಖಲಾಗುವುದರಿಂದ ನನ್ನ ಮಗ ರಕ್ಷಿಸಲು ಯತ್ನಿಸಿದ ಯುವತಿ ಸೇರಿ ಮೂವರು ವಿದ್ಯಾರ್ಥಿಗಳ ಜೀವನ ನಾಶವಾಗುತ್ತದೆ ಎಂದಿದ್ದಾರೆ.
Advertisement