ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇರಳದಲ್ಲಿ ಪ್ರದರ್ಶಿಸಲಾಗುವುದು: ಸಿಪಿಎಂ ಯುವ ಘಟಕ
ಕೇರಳದ ಆಡಳಿತಾರೂಢ ಸಿಪಿಐಎಂನ ಯುವ ಘಟಕವಾದ ಡಿವೈಎಫ್ಐ ಮಂಗಳವಾರ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಅನ್ನು ರಾಜ್ಯದಲ್ಲಿ ಪ್ರದರ್ಶಿಸಲಾಗುವುದು ಎಂದು ಘೋಷಿಸಿದೆ.
Published: 24th January 2023 11:27 AM | Last Updated: 27th January 2023 04:24 PM | A+A A-

ಪಿಎಂ ನರೇಂದ್ರ ಮೋದಿ
ತಿರುವನಂತಪುರಂ: ಕೇರಳದ ಆಡಳಿತಾರೂಢ ಸಿಪಿಐಎಂನ ಯುವ ಘಟಕವಾದ ಡಿವೈಎಫ್ಐ ಮಂಗಳವಾರ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಅನ್ನು ರಾಜ್ಯದಲ್ಲಿ ಪ್ರದರ್ಶಿಸಲಾಗುವುದು ಎಂದು ಘೋಷಿಸಿದೆ.
ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಮೋದಿ ಕುರಿತಾದ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸುವ ಕೇಂದ್ರದ ನಿರ್ದೇಶನಗಳ ಬೆನ್ನಲ್ಲೇ, ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್ಐ) ತನ್ನ ಫೇಸ್ಬುಕ್ ಪುಟದಲ್ಲಿ ಈ ಪ್ರಕಟಣೆಯನ್ನು ಹಂಚಿಕೊಂಡಿದ್ದು, ಯೂಟ್ಯೂಬ್ ವೀಡಿಯೊಗಳು ಮತ್ತು ಸಾಕ್ಷ್ಯಚಿತ್ರಕ್ಕೆ ಲಿಂಕ್ಗಳನ್ನು ಹಂಚಿಕೊಂಡಿದೆ.
2002ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದಿದ್ದ ಗೋಧ್ರೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತಹ ಕೆಲವು ವಿಷಯಗಳ ತನಿಖೆಯ ವಿಷಯವಿದು ಎಂದು ಎರಡು ಕಂತಿನ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ಆದರೆ, ಇದನ್ನು ತಳ್ಳಿಹಾಕಿರುವ ವಿದೇಶಾಂಗ ಸಚಿವಾಲಯವು, ಇದೊಂದು ಅಪಪ್ರಚಾರದ ಉದ್ದೇಶ ಹೊಂದಿರುವ ಸಾಕ್ಷ್ಯಚಿತ್ರ ಮತ್ತು ವಸ್ತುನಿಷ್ಠವಲ್ಲದ ಹಾಗೂ ವಸಾಹತುಶಾಹಿ ಮನಸ್ಥಿತಿಯ ಪ್ರತಿಬಿಂಬವಾಗಿದೆ ಎಂದಿದೆ.
ಇದನ್ನೂ ಓದಿ: ಜೆಎನ್ಯುಎಸ್ಯು ಕಚೇರಿಯಲ್ಲಿ ಇಂದು ರಾತ್ರಿ 9 ಗಂಟೆಗೆ ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ
ಜೊತೆಗೆ, ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಹಲವು ಯೂಟ್ಯೂಬ್ ವಿಡಿಯೊಗಳು ಮತ್ತು ಲಿಂಕ್ಗಳನ್ನು ಹಂಚಿಕೊಂಡಿರುವ ಟ್ವೀಟ್ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಐಟಿ ನಿಯಮಾವಳಿ 2021ರ ಅನ್ವಯ ತುರ್ತು ಅಧಿಕಾರವನ್ನು ಬಳಸಿಕೊಂಡು ಸಾಕ್ಷ್ಯಚಿತ್ರದ ವಿಡಿಯೊ ಮತ್ತು ಪೋಸ್ಟ್ಗಳನ್ನು ನಿರ್ಬಂಧಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಶುಕ್ರವಾರ ನಿರ್ದೇಶನಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಈ ಕ್ರಮವು ಕಾಂಗ್ರೆಸ್ ಮತ್ತು ಟಿಎಂಸಿಯಂತಹ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಇದೇ ವೇಳೆ, ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಹಾಗೂ ಮುತ್ಸದ್ಧಿಗಳು ಸೇರಿದಂತೆ 303 ಮಂದಿ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ್ದು, 'ನಮ್ಮ ನಾಯಕ, ಸಹ ಭಾರತೀಯ ಮತ್ತು ದೇಶಭಕ್ತರ ವಿರುದ್ಧದ ಪ್ರೇರಿತ ಚಾರ್ಜ್ ಶೀಟ್' ಮತ್ತು ಪೂರ್ವಾಗ್ರಹಪೀಡಿತವಾಗಿದೆ' ಎಂದು ಟೀಕಿಸಿದೆ.