ಮಹದಾಯಿ ವಿವಾದ: ಕಾನೂನು, ರಾಜಕೀಯ ಯಾವುದೇ ಮಾರ್ಗದಲ್ಲಿ ಹೋರಾಡಲು ನಾವು ಸಿದ್ಧ; ಗೋವಾ ಸಿಎಂ
ಯಾರು ಏನೇ ಹೇಳಲಿ, ಮಹದಾಯಿಗಾಗಿ ಯಾವುದೇ ಮಾರ್ಗದಲ್ಲಿಯಾದರೂ ಹೋರಾಡಲು ನಾವು ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಂಗಳವಾರ ಹೇಳಿದ್ದಾರೆ.
Published: 25th January 2023 09:54 AM | Last Updated: 25th January 2023 11:59 AM | A+A A-

ಗೋವಾ ಸಿಎಂ ಪ್ರಮೋದ್ ಸಾವಂತ್
ಪಣಜಿ: ಯಾರು ಏನೇ ಹೇಳಲಿ, ಮಹದಾಯಿಗಾಗಿ ಯಾವುದೇ ಮಾರ್ಗದಲ್ಲಿಯಾದರೂ ಹೋರಾಡಲು ನಾವು ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನೇ ಹೇಳಲಿ, ನಮ್ಮ ನಿರ್ಧಾರದಲ್ಲಿ ನಾವು ದೃಢವಾಗಿದ್ದೇವೆ. ಮಹದಾಯಿಗಾಗಿ ಕಾನೂನಾತ್ಮಕವಾಗಿ, ರಾಜಕೀಯವಾಗಿ ಮತ್ತು ತಾಂತ್ರಿಕವಾಗಿ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ನಾವು ಕೈಗೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ.
ಇದನ್ನೂ ಓದಿ: ಗೋವಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದರ ಬಗ್ಗೆ ಕರ್ನಾಟಕಕ್ಕೇನೂ ಚಿಂತೆಯಿಲ್ಲ: ಸಿಎಂ ಬೊಮ್ಮಾಯಿ
ಕೆಲ ದಿನಗಳ ಹಿಂದಷ್ಟೇ ಮಹದಾಯಿ ಯೋಜನೆ ಕುರಿತು ಹೇಳಿಕೆ ನೀಡಿದ್ದ ಸಿಎಂ ಬೊಮ್ಮಾಯಿಯವರು, ಕಳಸಾ ಬಂಡೂರಿ ವಿಷಯದಲ್ಲಿ ಗೋವಾ ಸರಕಾರ ತೆಗೆದುಕೊಂಡಿರುವ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಈಗಾಗಲೇ ಯೋಜನೆಯ ಸಮಗ್ರ ಪರಿಷ್ಕೃತ ವರದಿ ಗೆ ಅನುಮೋದನೆ ಸಿಕ್ಕಿದೆ. ಅರಣ್ಯ ಇಲಾಖೆಯ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿಯನ್ನು ಕೈಗೊಳ್ಳಲಾಗುವದು ಎಂದು ಹೇಳಿದ್ದರು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಹದಾಯಿ ನ್ಯಾಯಾಧೀಕರಣ ರಚನೆಯಾಗಿದೆ. 10 ವರ್ಷ ನ್ಯಾಯಾಧೀಕರಣದ ವಿಚಾರಣೆ ನಡೆದು ಆದೇಶ ಬಂದಿದೆ. ನ್ಯಾಯಾಧೀಕರಣದ ಆದೇಶ ಎಂದರೆ ಅದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಇದ್ದಂತೆ. ಈ ಆದೇಶದ ಆಧಾರದ ಮೇಲೆ ನಾವು ಡಿಪಿಅರ್ ಮಾಡಿದ್ದೇವೆ. ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದರು.