ನವದೆಹಲಿ: ನ್ಯೂಯಾರ್ಕ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಉದ್ಯಮಿ ಶಂಕರ್ ಮಿಶ್ರಾ ಅವರ ಜಾಮೀನು ಅರ್ಜಿಯ ತೀರ್ಪನ್ನು ದೆಹಲಿ ನ್ಯಾಯಾಲಯ ಸೋಮವಾರ ಜನವರಿ 31ಕ್ಕೆ ಕಾಯ್ದಿರಿಸಿದೆ.
ಶಂಕರ್ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿರುವ ಪೊಲೀಸರು, ಘಟನೆಯಿಂದಾಗಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನಹಾನಿಯಾಗಿದೆ ಎಂದು ವಾದಿಸಿದ್ದಾರೆ. ಅಲ್ಲದೆ ಆರೋಪಿ ದೂರುದಾರರಿಗೆ ಬೆದರಿಕೆ ಹಾಕಿದ್ದಾರೆ ಎಂದೂ ಪೊಲೀಸರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, "ಇದು ಅಸಹ್ಯಕರವಾಗಿರಬಹುದು ಆದರೆ ಅದು ಇನ್ನೊಂದು ವಿಷಯ, ಅದರೊಳಗೆ ಹೋಗಬಾರದು. ಕಾನೂನು ಅದನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ನೋಡೋಣ" ಎಂದು ನ್ಯಾಯಾಧೀಶರು ಹೇಳಿದರು.
ಅಂತೆಯೇ ಪ್ರಾಸಿಕ್ಯೂಷನ್ ಹೆಸರಿಸಿದ ಸಾಕ್ಷಿಗಳು "ನಿಮ್ಮ (ಪೊಲೀಸ್) ಪರವಾಗಿ ಹೇಳಿಕೆ ನೀಡುತ್ತಿಲ್ಲ" ಎಂದು ನ್ಯಾಯಾಧೀಶರು ಹೇಳಿದರು.
ಮಿಶ್ರಾ ಪರ ವಕೀಲರು ಮಾತನಾಡಿ, ಮಿಶ್ರಾ ಜಾಮೀನು ಕೋರಿದ್ದು, ತನಿಖೆ ಬಾಕಿ ಇರುವ ಕಾರಣ ಆರಂಭದಲ್ಲಿ ಜಾಮೀನನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ ಎಂದು ಹೇಳಿದ್ದಾರೆ. "ಈಗ ಅದು ಮುಗಿದಿದೆ ಮತ್ತು ಅವರು ಇತರ ಸಿಬ್ಬಂದಿ ಮತ್ತು ಸಾಕ್ಷಿಗಳನ್ನು ಪರೀಕ್ಷಿಸಿದ್ದಾರೆ. ಅಲ್ಲದೆ, ಅವರು ಟಿಕೆಟ್ ಮರುಪಾವತಿಯನ್ನು ಕೇಳಿದ್ದಾರೆ ಮತ್ತು ನನ್ನ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ಕೋರಿದ್ದಾರೆ," ಎಂದು ವಕೀಲರು ಹೇಳಿದರು.
Advertisement