ಮೂತ್ರ ವಿಸರ್ಜನೆಯ ಘಟನೆಯಿಂದ ಬಿಜೆಪಿಯ ದಲಿತ, ಬುಡಕಟ್ಟು ವಿರೋಧಿ ಮುಖ ಬಯಲಾಗಿದೆ: ರಾಹುಲ್ ಗಾಂಧಿ

ಬಿಜೆಪಿ ಆಡಳಿತದಲ್ಲಿ ಆದಿವಾಸಿಗಳು ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದವರ ಮೇಲೆ ಬಿಜೆಪಿ ನಾಯಕನೆಂದು ಆರೋಪಿಸಲಾದ ವ್ಯಕ್ತಿಯು ಮೂತ್ರ ವಿಸರ್ಜನೆ ಮಾಡಿದ ಘಟನೆಯನ್ನು ಖಂಡಿಸಿದರು.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ನವದೆಹಲಿ: ಬಿಜೆಪಿ ಆಡಳಿತದಲ್ಲಿ ಆದಿವಾಸಿಗಳು ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದವರ ಮೇಲೆ ಬಿಜೆಪಿ ನಾಯಕನೆಂದು ಆರೋಪಿಸಲಾದ ವ್ಯಕ್ತಿಯು ಮೂತ್ರ ವಿಸರ್ಜನೆ ಮಾಡಿದ ಘಟನೆಯನ್ನು ಖಂಡಿಸಿದರು.

ಆದಿವಾಸಿಗಳು ಮತ್ತು ದಲಿತರ ಮೇಲಿನ ಬಿಜೆಪಿಯು ದ್ವೇಷ ಸಾಧಿಸುವ ನಿಜವಾದ ಮುಖ ಇದೀಗ 'ಅಮಾನವೀಯ ಕೃತ್ಯ'ದಿಂದ ಬಯಲಾಗಿದೆ ಎಂದು ಅವರು ಹೇಳಿದರು. 

ಮಧ್ಯಪ್ರದೇಶದ ಸ್ಥಳೀಯ ಬಿಜೆಪಿ ಮುಖಂಡನೆಂದು ಹೇಳಲಾದ ವ್ಯಕ್ತಿಯೊಬ್ಬ, ರಾಜ್ಯದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ತೋರಿಸುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆತನ ಬಂಧನಕ್ಕೆ ವ್ಯಾಪಕ ಒತ್ತಾಯಗಳು ಕೇಳಿಬಂದಿದ್ದವು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರವೇಶ್ ಶುಕ್ಲಾ ಎಂದು ಗುರುತಿಸಲಾದ ವ್ಯಕ್ತಿಯನ್ನು ತಕ್ಷಣ ಬಂಧಿಸುವಂತೆ ಕರೆ ನೀಡಿದ ನಂತರ ಬುಧವಾರ ಆತನನ್ನು ಬಂಧಿಸಲಾಗಿದೆ.

'ಬಿಜೆಪಿ ಆಡಳಿತದಲ್ಲಿ ಆದಿವಾಸಿ ಸಹೋದರ-ಸಹೋದರಿಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಮಧ್ಯಪ್ರದೇಶದ ಬಿಜೆಪಿ ನಾಯಕನ ಅಮಾನವೀಯ ಕೃತ್ಯದಿಂದ ಇಡೀ ಮಾನವೀಯತೆ ನಾಚಿಕೆಪಡುವಂತೆ ಆಗಿದೆ. ಇದು ಬುಡಕಟ್ಟು ಮತ್ತು ದಲಿತರ ಮೇಲಿನ ಬಿಜೆಪಿಯ ದ್ವೇಷದ ಅಸಹ್ಯಕರ ಮುಖ ಮತ್ತು ನೈಜತೆಯನ್ನು ಬಯಲು ಮಾಡಿದೆ' ರಾಹುಲ್ ಗಾಂಧಿ ಬುಧವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. 

ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಈ ವ್ಯಕ್ತಿಯ ಕೃತ್ಯವು 'ಘೋರ, ಖಂಡನೀಯ ಮತ್ತು ಮಾನವೀಯತೆಯ ಮೇಲೆ ಕಳಂಕ' ತರುವಂತದ್ದಾಗಿದೆ ಎಂದು ಹೇಳಿದರು. 

ಆರೋಪಿಗಳ ವಿರುದ್ಧ ಬುಲ್ಡೋಜರ್ ಕ್ರಮಕ್ಕೆ ಕಾಂಗ್ರೆಸ್ ಬೇಡಿಕೆಯ ಬಗ್ಗೆ ಕೇಳಿದಾಗ, 'ಕಾಂಗ್ರೆಸ್ ಬೇಡಿಕೆಯ ಮೇರೆಗೆ ಬುಲ್ಡೋಜರ್ ಕ್ರಮ ತೆಗೆದುಕೊಳ್ಳುವುದಿಲ್ಲ. ಅತಿಕ್ರಮಣ ಉಂಟಾದಾಗ ಮಾತ್ರ ಬುಲ್ಡೋಜರ್ ಅನ್ನು ಬಳಸಲಾಗುತ್ತದೆ' ಎಂದರು.

ಮಂಗಳವಾರ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ಶುಕ್ಲಾ ವಿರುದ್ಧ ಭಾರತೀಯ ದಂಡ ಸಂಹಿತೆಯ 294 (ಅಶ್ಲೀಲ ಕೃತ್ಯಗಳು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ಆತನ ವಿರುದ್ಧ ಕಟ್ಟುನಿಟ್ಟಿನ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಸಹ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com