ಎನ್ ಸಿಪಿ ಚಿಹ್ನೆಗಾಗಿ ಆಯೋಗದ ಮೊರೆ ಹೋದ ಅಜಿತ್; ಚಿಹ್ನೆ ಕಸಿದುಕೊಳ್ಳಲು ಅವಕಾಶ ನೀಡಲ್ಲ ಎಂದ ಶರದ್ ಪವಾರ್

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದಲ್ಲಿನ ಬಣ ಹೋರಾಟ ಈಗ ಚುನಾವಣಾ ಆಯೋಗದ ಕದ ತಟ್ಟಿದ್ದು, ಪಕ್ಷದ ಹೆಸರು ಮತ್ತು ಚಿಹ್ನೆ ತಮಗೆ ನೀಡುವಂತೆ ಕೋರಿ ಅಜಿತ್ ಪವಾರ್ ನೇತೃತ್ವದ ಬಣ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ
ಶರದ್ ಪವಾರ್ ಪೋಸ್ಟರ್
ಶರದ್ ಪವಾರ್ ಪೋಸ್ಟರ್

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದಲ್ಲಿನ ಬಣ ಹೋರಾಟ ಈಗ ಚುನಾವಣಾ ಆಯೋಗದ ಕದ ತಟ್ಟಿದ್ದು, ಪಕ್ಷದ ಹೆಸರು ಮತ್ತು ಚಿಹ್ನೆ ತಮಗೆ ನೀಡುವಂತೆ ಕೋರಿ ಅಜಿತ್ ಪವಾರ್ ನೇತೃತ್ವದ ಬಣ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.

ತಮಗೆ 40ಕ್ಕೂ ಹೆಚ್ಚು ಶಾಸಕರು ಮತ್ತು ಸಂಸದರ ಬೆಂಬಲ ಇದೆ ಎಂದು ಅಜಿತ್ ಪವಾರ್ ಬಣ ಚುನಾವಣಾ ಆಯೋಗಕ್ಕೆ ಅಫಿಡವಿಟ್‌ಗಳನ್ನು ಸಲ್ಲಿಸಿದೆ.

ಇದನ್ನು ವಿರೋಧಿಸಿ ಶರದ್ ಪವಾರ್ ಪಾಳಯ, ಚುನಾವಣಾ ಆಯೋಗಕ್ಕೆ ಕೇವಿಯಟ್ ಸಲ್ಲಿಸಿದ್ದು, ಬಣ ಜಗಳಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನವನ್ನು ನೀಡುವ ಮುನ್ನ ತಮ್ಮ ವಾದವನ್ನು ಆಲಿಸುವಂತೆ ಒತ್ತಾಯಿಸಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಚುನಾವಣಾ ಆಯೋಗವು ಮುಂದಿನ ದಿನಗಳಲ್ಲಿ ಉಭಯ ಬಣಗಳ ಅರ್ಜಿಗಳನ್ನು ಪರಿಗಣಿಸಿ, ತನ್ನ ಮುಂದೆ ಸಲ್ಲಿಸಿದ ಆಯಾ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳಲು ಎರಡೂ ಕಡೆಯವರಿಗೂ ಸೂಚಿಸುವ ಸಾಧ್ಯತೆಯಿದೆ.

ಈ ಮಧ್ಯೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಪಕ್ಷದ ಚಿಹ್ನೆ ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಅಜಿತ್ ಪವಾರ್ ಬಣ ತಮ್ಮ ಫೋಟೋ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಮುಂಬೈನ ಚವಾನ್ ಸೆಂಟರ್‌ನಲ್ಲಿ ಸುಮಾರು 13 ಎನ್‌ಸಿಪಿ ಶಾಸಕರು ಹಾಜರಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ 83 ವರ್ಷದ ಪವಾರ್, ಪ್ರಧಾನಿ ನರೇಂದ್ರ ಮೋದಿ ಎನ್‌ಸಿಪಿಯನ್ನು ಭ್ರಷ್ಟ ಪಕ್ಷ ಎಂದು ಕರೆದರೂ ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಹೋಗುತ್ತಿದ್ದಾರೆ ಎಂದು ಅಜಿತ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದರು.

"ಕೆಲವು ದಿನಗಳ ಹಿಂದೆ, ಅವರು(ಅಜಿತ್ ಪವಾರ್) ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅವಹೇಳನ ಮಾಡಿದರು. ತಾವು ಇಷ್ಟು ವರ್ಷಗಳಲ್ಲಿ ಅಂತಹ ಸಿಎಂ ಅನ್ನು ನೋಡಿಲ್ಲ ಟೀಕಿಸಿದ್ದರು. ಈಗ ಅವರೊಂದಿಗೆ ಸೇರಿಕೊಂಡಿದ್ದಾರೆ" ಎಂದು ಶರದ್ ಪವಾರ್ ತಿರುಗೇಟು ನೀಡಿದರು.

1999 ರಲ್ಲಿ ಎನ್‌ಸಿಪಿ ಸ್ಥಾಪಿಸಿದಾಗ ಜನಸಾಮಾನ್ಯರೊಂದಿಗಿನ ತಮ್ಮ ಸಂಪರ್ಕವನ್ನು ನೆನಪಿಸಿಕೊಂಡ ಪವಾರ್, "ಇಂದು ನಾವು ಅಧಿಕಾರದಲ್ಲಿ ಇಲ್ಲದಿರಬಹುದು, ಆದರೆ ನಾವು ಜನರ ಹೃದಯದಲ್ಲಿದ್ದೇವೆ" ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com