ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರ ದೇಶದ ರೈತರಿಗೆ ಸುಳ್ಳು ಭರವಸೆಗಳನ್ನು ನೀಡಿದೆ ಎಂದು ಆರೋಪಿಸಿದರು.
ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ಅವರು, 'ಮೋದಿ ಸರ್ಕಾರ ದೇಶದ ರೈತರಿಗೆ ಎರಡು ಭರವಸೆಗಳನ್ನು ನೀಡಿತ್ತು. ಕನಿಷ್ಠ ಬೆಂಬಲ ಬೆಲೆಯನ್ನು 'ವೆಚ್ಚ + 50 ಪ್ರತಿಶತ ಲಾಭ'ಕ್ಕೆ ನಿಗದಿಪಡಿಸುವುದು ಮತ್ತು 2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವುದು. ಇದೀಗ ಈ ಎರಡೂ ಭರವಸೆಗಳು ಸುಳ್ಳಾಗಿವೆ' ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಬುಧವಾರ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಏರಿಕೆ ಮಾಡಲು ಅನುಮತಿ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಖರ್ಗೆ, 'ಪಿಆರ್ ಹಸಿವಿನಿಂದ ಕಂಗೆಟ್ಟಿರುವ ಮೋದಿ ಸರ್ಕಾರವು ಖಾರಿಫ್ ಬೆಳೆಗೆ ಎಂಎಸ್ಪಿ ಹೆಚ್ಚಿಸುತ್ತೇವೆ ಎಂದು ಬಿಂಬಿಸಿದೆ. ಆದರೆ, ಎಂಎಸ್ಪಿ ದರದಲ್ಲಿ ರೈತರಿಂದ ಬೆಳೆಗಳನ್ನು ಖರೀದಿಸುತ್ತಿಲ್ಲ. ಕೃಷಿಗೆ ಬಜೆಟ್ ಕಡಿತಗೊಳಿಸಲಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ಗಳಲ್ಲಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂಬತ್ತು ವರ್ಷ ಪೂರೈಸಿದ್ದು, ಈ ಒಂಬತ್ತು ವರ್ಷವು ಸರ್ಕಾರ 62 ಕೋಟಿ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಕೃಷಿ ಬಜೆಟ್ನಲ್ಲಿ ಕಡಿತ ಮಾಡಲಾಗಿದೆ. 1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿಯ ಭರವಸೆಯ ಹೊರತಾಗಿಯೂ ಮೂರು ವರ್ಷಗಳಲ್ಲಿ ಕೇವಲ 12,000 ಕೋಟಿ ರೂ. ಮೀಸಲಿಡಲಾಗಿದೆ ಎಂದು ದೂರಿದ್ದಾರೆ.
'ಕೃಷಿಗೆ ಬಜೆಟ್ ಕಡಿತ! ಕಿಸಾನ್ ಸಮ್ಮಾನ್ ನಿಧಿಯಿಂದ 2 ಕೋಟಿ ರೈತರ ಹೆಸರನ್ನು ತೆಗೆದುಹಾಕಲಾಗಿದೆ! ಕೃಷಿ ಬಜೆಟ್ನಲ್ಲಿ ಕಡಿತಗೊಳಿಸಲಾಗಿದೆ ಮತ್ತು 1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿಯ ಭರವಸೆಯ ಹೊರತಾಗಿಯೂ ಮೂರು ವರ್ಷಗಳಲ್ಲಿ ಕೇವಲ 12,000 ಕೋಟಿ ರೂ. ನೀಡಲಾಗಿದೆ. ಮೋದಿ ಸರ್ಕಾರದ 9 ವರ್ಷಗಳು ದೇಶದ 62 ಕೋಟಿ ರೈತರಿಗೆ ಶಾಪವಾಗಿ ಪರಿಣಮಿಸಿದೆ' ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
Advertisement