ಉಕ್ರೇನ್ ಯುದ್ಧದ ಬಗ್ಗೆ ಒಮ್ಮತ ಮೂಡದೆ G20 ಉನ್ನತ ರಾಜತಾಂತ್ರಿಕರ ಸಭೆ ಅಂತ್ಯ!

ನವದೆಹಲಿಯಲ್ಲಿ ನಡೆದ G20 ದೇಶಗಳ ಉನ್ನತ ರಾಜತಾಂತ್ರಿಕರ ಸಭೆ ಉಕ್ರೇನ್ ಯುದ್ಧದ ಕುರಿತು ಒಮ್ಮತ ಮೂಡದೆ ಮುಕ್ತಾಯಗೊಂಡಿದೆ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಹೇಳಿದರು.
ಜೈ ಶಂಕರ್
ಜೈ ಶಂಕರ್

ದೆಹಲಿ: ನವದೆಹಲಿಯಲ್ಲಿ ನಡೆದ G20 ದೇಶಗಳ ಉನ್ನತ ರಾಜತಾಂತ್ರಿಕರ ಸಭೆ ಉಕ್ರೇನ್ ಯುದ್ಧದ ಕುರಿತು ಒಮ್ಮತ ಮೂಡದೆ ಮುಕ್ತಾಯಗೊಂಡಿದೆ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಹೇಳಿದರು.

ವಿಶ್ವದ ಪ್ರಮುಖ ಆರ್ಥಿಕತೆಯ ರಾಷ್ಟ್ರಗಳ ನಡುವೆ ಒಮ್ಮತ ಮೂಡಿಸಲು ಭಾರತದ ನಿರಂತರ ಪ್ರಯತ್ನದ ಹೊರತಾಗಿಯೂ ಉಕ್ರೇನ್ ಸಂಘರ್ಷದ ಬಗೆಗಿನ ತೀವ್ರ ಭಿನ್ನಾಭಿಪ್ರಾಯಗಳಿಂದಾಗಿ ಜಿ 20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯು ಜಂಟಿ ಘೋಷಣೆಗೆ ಒಪ್ಪಲು ವಿಫಲವಾಯಿತು. ಉಕ್ರೇನ್‌ನಲ್ಲಿನ ಯುದ್ಧದ ವಿಷಯದ ಬಗ್ಗೆ 'ವಿಭಿನ್ನ ಅಭಿಪ್ರಾಯಗಳು' ಇವೆ. 'ವಿವಿಧ ಪಕ್ಷಗಳು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವುದರಿಂದ ನಾವು ಅದನ್ನು ಸಮನ್ವಯಗೊಳಿಸಲು ಸಾಧ್ಯವಾಗಲಿಲ್ಲ' ಎಂದು ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರು ಹೇಳಿದರು.

'ನಾವು ಎಲ್ಲಾ ವಿಷಯಗಳ ಬಗ್ಗೆ ಏಕಾಭಿಪ್ರಾಯ ಹೊಂದಿದ್ದರೆ, ಆಗ ಸಾಮೂಹಿಕ ಹೇಳಿಕೆಯಾಗುತ್ತಿತ್ತು ಎಂದು ಜೈಶಂಕರ್ ಹೇಳಿದರು. 'ಬಹುಪಕ್ಷೀಯತೆಯನ್ನು ಬಲಪಡಿಸುವುದು, ಆಹಾರ ಮತ್ತು ಇಂಧನ ಭದ್ರತೆ, ಹವಾಮಾನ ಬದಲಾವಣೆ, ಲಿಂಗ ಸಮಸ್ಯೆಗಳು ಮತ್ತು ಭಯೋತ್ಪಾದನೆ ನಿಗ್ರ. ಕಡಿಮೆ-ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಕಾಳಜಿಯನ್ನು ಒಳಗೊಂಡಿರುವ ಹೆಚ್ಚಿನ ವಿಷಯಗಳ ಬಗ್ಗೆ ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಜಿ20 ದೇಶಗಳ ವಿದೇಶಾಂಗ ಸಚಿವರನ್ನುದ್ದೇಶಿಸಿ ವಿಡಿಯೋ ಭಾಷಣ ಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, 'ಕಳೆದ ಕೆಲವು ವರ್ಷಗಳ ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ಸಾಂಕ್ರಾಮಿಕ, ಭಯೋತ್ಪಾದನೆ ಮತ್ತು ಯುದ್ಧಗಳನ್ನು ನೋಡಿದಾಗ ಜಾಗತಿಕ ಆಡಳಿತವು ವಿಫಲವಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ನಾವು ಆಳವಾದ ಜಾಗತಿಕ ವಿಭಜನೆಯ ಸಮಯದಲ್ಲಿ ಭೇಟಿಯಾಗುತ್ತಿದ್ದೇವೆ. ಈ ಉದ್ವಿಗ್ನತೆಗಳನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ನಾವೆಲ್ಲರೂ ನಮ್ಮ ನಿಲುವುಗಳನ್ನು ಮತ್ತು ನಮ್ಮ ದೃಷ್ಟಿಕೋನಗಳನ್ನು ಹೊಂದಿದ್ದೇವೆ. ಆದಾಗ್ಯೂ, ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರಗಳಾಗಿ ನಾವು ಸಹ ಜವಾಬ್ದಾರಿಯನ್ನು ಹೊಂದಿದ್ದೇವೆ ಎಂದು ಹೇಳಿದರು. 

ಭಾರತವು ಈ ವರ್ಷ ತನ್ನ G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು ಬಡತನವನ್ನು ನಿವಾರಿಸುವುದು ಮತ್ತು ಹವಾಮಾನ ಹಣಕಾಸು ಮುಂತಾದ ವಿಷಯಗಳ ಮೇಲೆ ಕೇಂದ್ರೀಕರಿಸಲು ಬಯಸಿದೆ. ಆದರೆ ಉಕ್ರೇನ್ ಯುದ್ಧವು ಇಂತಹ ಅಜೆಂಡಾಗಳಿಂದ ದೂರವಿರುವಂತೆ ಮಾಡಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com