
ಉದ್ಧವ್ ಠಾಕ್ರೆ ಜೊತೆಗೆ ರಜನಿಕಾಂತ್
ಮುಂಬೈ: ಸೂಪರ್ಸ್ಟಾರ್ ರಜನಿಕಾಂತ್ ಶನಿವಾರ ಶಿವಸೇನೆ-ಯುಬಿಟಿ ನಾಯಕ ಉದ್ಧವ್ ಠಾಕ್ರೆ ಅವರನ್ನು ಮುಂಬೈಯಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು. ಹಿರಿಯ ನಟ ರಜನಿಕಾಂತ್ ಶಿವಸೇನೆ ಸಂಸ್ಥಾಪಕ ದಿವಂಗತ ಬಾಳ್ ಠಾಕ್ರೆ ಅವರ ಕಟ್ಟಾ ಬೆಂಬಲಿಗರಾಗಿರುವ ಕಾರಣ ಇದು ಅವರ ಸೌಜನ್ಯದ ಭೇಟಿಯಾಗಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ಇದು ರಜನಿಕಾಂತ್ ಮತ್ತು ಉದ್ಧವ್ ಠಾಕ್ರೆ ನಡುವಿನ ರಾಜಕೀಯೇತರ ಸಭೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಪನಗರ ಬಾಂದ್ರಾದಲ್ಲಿರುವ ನಿವಾಸ 'ಮಾತೋಶ್ರೀ'ಯಲ್ಲಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಮತ್ತು ಪುತ್ರರಾದ ಆದಿತ್ಯ ಮತ್ತು ತೇಜಸ್, ರಜನಿಕಾಂತ್ ಅವರನ್ನು ಸ್ವಾಗತಿಸಿದರು. ರಜನಿ ಅವರಿಗೆ ಹೂಗುಚ್ಛ ಮತ್ತು ಶಾಲು ಹೊದಿಸಿ ಸ್ವಾಗತಿಸುತ್ತಿರುವ ಫೋಟೋವನ್ನು ಶಾಸಕ ಆದಿತ್ಯ ಠಾಕ್ರೆ ಟ್ವೀಟ್ ಮಾಡಿದ್ದಾರೆ. ರಜನಿಕಾಂತ್ ಅವರನ್ನು ಮತ್ತೊಮ್ಮೆ ಭೇಟಿಯಾಗಲು ಅತೀವ ಸಂತೋಷವಾಗಿದೆ ಎಂದು ಆದಿತ್ಯ ಟ್ವೀಟ್ ಮಾಡಿದ್ದಾರೆ.
An absolute delight to have Shri Rajnikant ji at Matoshri once again. pic.twitter.com/94MV7m0Rb9
— Aaditya Thackeray (@AUThackeray) March 18, 2023
ರಜನಿಕಾಂತ್ ಅಕ್ಟೋಬರ್ 2010 ರಲ್ಲಿ ಮಾತೋಶ್ರೀಯಲ್ಲಿ ಬಾಳಾ ಠಾಕ್ರೆ ಅವರನ್ನು ಭೇಟಿಯಾಗಿದ್ದರು. 2021ರಲ್ಲಿ ತಮ್ಮ ರಾಜಕೀಯ ಎಂಟ್ರಿಗಾಗಿ ಆರಂಭಿಸಲಾಗಿದ್ದ ರಜಿನಿ ಮಕ್ಕಳ್ ಮಂಡ್ರಂ ವಿಸರ್ಜಿಸುವುದಾಗಿ ಘೋಷಿಸಿದ್ದ ರಜನಿಕಾಂತ್, ಭವಿಷ್ಯದಲ್ಲಿ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಉದ್ದೇಶವಿಲ್ಲ ಎಂದು ಪುನರುಚ್ಚರಿಸಿದರು. ಠಾಕ್ರೆ ನೇತೃತ್ವದ ಶಿವಸೇನಾ ಬಣ ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷವನ್ನೊಳಗೊಂಡ ಮಹಾ ವಿಕಾಸ್ ಅಘಾಡಿ (MVA) ಯ ಒಂದು ಘಟಕವಾಗಿದೆ.