ಉದ್ಯೋಗಕ್ಕಾಗಿ ಭೂ ಹಗರಣ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಿಬಿಐ ಮುಂದೆ ವಿಚಾರಣೆಗೆ ಹಾಜರು
ಈ ಹಿಂದೆ ಮೂರು ವಿಚಾರಣೆ ದಿನಾಂಕಗಳಿಂದ ದೂರವುಳಿದಿದ್ದ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಶನಿವಾರ ಇಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂದೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 25th March 2023 12:18 PM | Last Updated: 25th March 2023 05:02 PM | A+A A-

ತೇಜಸ್ವಿ ಯಾದವ್
ನವದೆಹಲಿ: ಈ ಹಿಂದೆ ಮೂರು ವಿಚಾರಣೆ ದಿನಾಂಕಗಳಿಂದ ದೂರವುಳಿದಿದ್ದ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಶನಿವಾರ ಇಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂದೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 10.30ರ ಸುಮಾರಿಗೆ ದೆಹಲಿಯ ಸಿಬಿಐ ಪ್ರಧಾನ ಕಛೇರಿಗೆ ಆಗಮಿಸಿದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕನನ್ನು ಅಗತ್ಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ತನಿಖಾ ತಂಡದ ಎದುರು ಕರೆದೊಯ್ಯಲಾಯಿತು. ಈ ತಿಂಗಳು ಯಾದವ್ ಅವರನ್ನು ಬಂಧಿಸುವುದಿಲ್ಲ ಎಂದು ಸಿಬಿಐ ಕಳೆದ ವಾರ ದೆಹಲಿ ಹೈಕೋರ್ಟ್ಗೆ ಭರವಸೆ ನೀಡಿತ್ತು.
ಆರ್ಜೆಡಿ ನಾಯಕನ ಪರ ವಕೀಲ ಮಣಿಂದರ್ ಸಿಂಗ್ ಪ್ರಕಾರ, ಈಗ ನಡೆಯುತ್ತಿರುವ ಬಿಹಾರ ವಿಧಾನಸಭೆ ಅಧಿವೇಶನವು ಏಪ್ರಿಲ್ 5 ರಂದು ಮುಕ್ತಾಯಗೊಳ್ಳಲಿರುವುದರಿಂದ ವಿಚಾರಣೆಗೆ ಹಾಜರಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಯಾದವ್ ಅವರು ತನಿಖಾ ಸಂಸ್ಥೆಗೆ ತಿಳಿಸಿದ್ದರು. ಸಿಂಗ್ ಅವರು ಈ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಿದ್ದರು.
ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂ ಹಗರಣ: ಸಿಬಿಐ ವಿಚಾರಣೆಗೆ ತೇಜಸ್ವಿ ಯಾದವ್ ಗೈರು, ಹೊಸ ದಿನಾಂಕ ಕೇಳಿದ ಬಿಹಾರ ಡಿಸಿಎಂ
ಶನಿವಾರದಂದು ವಿಧಾನಸಭೆಯ ಅಧಿವೇಶನವನ್ನು ಕರೆಯಲಾಗುವುದಿಲ್ಲ. ಹೀಗಾಗಿ, ಯಾದವ್ ಅವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಮಾರ್ಚ್ನಲ್ಲಿ ಯಾವುದೇ ಶನಿವಾರದಂದು ಏಜೆನ್ಸಿಯ ಮುಂದೆ ವಿಚಾರಣೆಗೆ ಹಾಜರಾಗಬಹುದು ಎಂದು ಸಿಬಿಐ ಪರ ವಕೀಲ ಡಿಪಿ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ಆರ್ಜೆಡಿ ನಾಯಕ ತನ್ನ ವಿರುದ್ಧ ಫೆಬ್ರುವರಿ 28, ಮಾರ್ಚ್ 4 ಮತ್ತು ಮಾರ್ಚ್ 11 ರಂದು ನೀಡಲಾದ ಸಮನ್ಸ್ಗಳನ್ನು ರದ್ದುಗೊಳಿಸುವಂತೆ ಕೋರಿದ್ದರು.
ಮಾರ್ಚ್ 15 ರಂದು ಸಿಬಿಐ ವಿಶೇಷ ನ್ಯಾಯಾಲಯವು ಯಾದವ್ ಅವರ ತಂದೆ ಲಾಲು ಪ್ರಸಾದ್, ತಾಯಿ ರಾಬ್ರಿ ದೇವಿ, ಸಹೋದರಿ ಮಿಸಾ ಭಾರತಿ ಮತ್ತು ಇತರರಿಗೆ ಉದ್ಯೋಗಕ್ಕಾಗಿ ಭೂ ಹಗರಣದ ಪ್ರಕರಣದಲ್ಲಿ ಜಾಮೀನು ನೀಡಿತು.
ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂ ಹಗರಣ: ಲಾಲು ಪ್ರಸಾದ್, ರಾಬ್ರಿ ಮತ್ತು ಪುತ್ರಿ ಮಿಸಾ ಭಾರತಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು
ಅಧಿಕಾರಿಗಳ ಪ್ರಕಾರ, ಯಾದವ್ ಕುಟುಂಬ ಮತ್ತು ಇತರರ ವಿರುದ್ಧ ನಡೆಯುತ್ತಿರುವ ತನಿಖೆಯು ಸಿಬಿಐ ಮೊದಲ ಚಾರ್ಜ್ಶೀಟ್ ಸಲ್ಲಿಸಿದ ನಂತರ ಹೊರಬಿದ್ದ ದಾಖಲೆಗಳು ಮತ್ತು ಪುರಾವೆಗಳ ಭಾಗವಾಗಿದೆ ಮತ್ತು ಆರಂಭಿಕ ವರದಿಯನ್ನು ಸಲ್ಲಿಸುವ ವೇಳೆಗೆ ಆರೋಪಿಗಳ ಆಪಾದಿತ ಪಾತ್ರಗಳ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರಿಂದಲೂ ತನಿಖೆ ನಡೆಯುತ್ತಿದೆ.
ತನಿಖಾ ಸಂಸ್ಥೆಯು ನಡೆಸುತ್ತಿರುವ ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಹೊಸ ಮಾಹಿತಿಯ ಆಧಾರದ ಮೇಲೆ 'ಹೆಚ್ಚಿನ ತನಿಖೆ'ಯ ಭಾಗವಾಗಿ ಆರೋಪಿಗಳ ಹೊಸ ಸುತ್ತಿನ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2004 ರಿಂದ 2009ರ ಯುಪಿಎ ಸರ್ಕಾರದಲ್ಲಿ ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಯಾವುದೇ ಜಾಹೀರಾತು ಅಥವಾ ಸಾರ್ವಜನಿಕ ಸೂಚನೆ ಇಲ್ಲದೆ, ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಿ ನೆಚ್ಚಿನ ಅಭ್ಯರ್ಥಿಗಳನ್ನು ರೈಲ್ವೆಯಲ್ಲಿ ನೇಮಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ. ಮುಂಬೈ, ಜಬಲ್ಪುರ್, ಕೋಲ್ಕತ್ತಾ, ಜೈಪುರ ಮತ್ತು ಹಾಜಿಪುರದಲ್ಲಿರುವ ವಿವಿಧ ವಲಯ ರೈಲ್ವೆಗಳಲ್ಲಿ ಪಾಟ್ನಾದಿಂದ ಬದಲಿಗಳನ್ನು ನೇಮಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂ ಹಗರಣ: ಲಾಲು ಪ್ರಸಾದ್ ಕುಟುಂಬ, ಆರ್ಜೆಡಿ ನಾಯಕರಿಗೆ ಸೇರಿದ ಜಾಗದಲ್ಲಿ ಇ.ಡಿ ಶೋಧ
ಅಭ್ಯರ್ಥಿಗಳು ನೇರವಾಗಿ ಅಥವಾ ಅವರ ಹತ್ತಿರದ ಕುಟುಂಬದ ಸದಸ್ಯರ ಮೂಲಕ ಪ್ರಸಾದ್ ಅವರ ಕುಟುಂಬ ಸದಸ್ಯರಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಭೂಮಿಯನ್ನು ಮಾರಾಟ ಮಾಡಿದ್ದಾರೆ.