ಬಿಹಾರ ಸರ್ಕಾರದ ಜಾತಿ ಸಮೀಕ್ಷೆಗೆ ಪಾಟ್ನಾ ಹೈಕೋರ್ಟ್ ತಡೆ; ಜನಗಣತಿ ನಡೆಸಲು ರಾಜ್ಯಕ್ಕೆ ಅಧಿಕಾರವಿಲ್ಲ ಎಂದ ನ್ಯಾಯಾಲಯ

ಪಾಟ್ನಾ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಗೆ ತಡೆಯಾಜ್ಞೆ ನೀಡಿದೆ. ಅಲ್ಲದೆ, ಜಾತಿ ಸಮೀಕ್ಷೆ ನಡೆಸಲು ರಾಜ್ಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದೆ.
ನಿತೀಶ್ ಕುಮಾರ್
ನಿತೀಶ್ ಕುಮಾರ್
Updated on

ಪಾಟ್ನಾ: ಪಾಟ್ನಾ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಗೆ ತಡೆಯಾಜ್ಞೆ ನೀಡಿದೆ. ಅಲ್ಲದೆ, ಜಾತಿ ಸಮೀಕ್ಷೆ ನಡೆಸಲು ರಾಜ್ಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದೆ.

ಈ ಸಂಬಂಧ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಮಧುರೇಶ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠವು, ಜಾತಿವಾರು ಸಮೀಕ್ಷೆಯನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಈಗಾಗಲೇ ಸಂಗ್ರಹಿಸಿದ ದತ್ತಾಂಶವನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಅಂತಿಮ ಆದೇಶಗಳನ್ನು ಹೊರಡಿಸುವವರೆಗೆ ದತ್ತಾಂಶವನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.
ಮುಂದಿನ ವಿಚಾರಣೆಯನ್ನು ಜುಲೈ 7ಕ್ಕೆ ನ್ಯಾಯಾಲಯ ಮುಂದೂಡಿದೆ. 

ಜಾತಿ ಆಧಾರಿತ ಸಮೀಕ್ಷೆಯನ್ನು ಮುಂದುವರಿಸಬಾರದು ಎಂದು ಅರ್ಜಿದಾರರು ವಾದ ಮಂಡಿಸಿದ್ದಾರೆ. ಅರ್ಜಿದಾರರು ಸಲ್ಲಿಸಿದ ಸಾಕ್ಷ್ಯವು ಸಮೀಕ್ಷೆಯ ವಿರುದ್ಧ ಅವರ ವಾದವನ್ನು ಬೆಂಬಲಿಸುವಷ್ಟು ಪ್ರಬಲವಾಗಿದೆ. ಬಿಹಾರದಲ್ಲಿ ಜಾತಿ ಆಧಾರಿತ ಸಮೀಕ್ಷೆಗೆ ಅನುಮತಿ ನೀಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನ್ಯಾಯಾಲಯ ಇದನ್ನು ಪರಿಗಣಿಸಬೇಕಾಗುತ್ತದೆ. ದತ್ತಾಂಶ ಸಮಗ್ರತೆ ಮತ್ತು ಭದ್ರತೆಯ ಪ್ರಶ್ನೆಯೂ ಇದೆ. ಇದನ್ನು ರಾಜ್ಯವು ಹೆಚ್ಚು ವಿವರವಾಗಿ ತಿಳಿಸಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಜಾತಿ ಆಧಾರಿತ ಸಮೀಕ್ಷೆಯನ್ನು ನಡೆಸಲು ರಾಜ್ಯಕ್ಕೆ ಅಧಿಕಾರವಿಲ್ಲ ಎಂದು ನ್ಯಾಯಾಲಯ ಮೇಲ್ನೋಟಕ್ಕೆ ಅಭಿಪ್ರಾಯವನ್ನು ಹೊಂದಿದೆ. ಇದು ಜನಗಣತಿಗೆ ಸಮಾನವಾಗಿರುತ್ತದೆ. ಹೀಗಾಗಿ, ಇದು ಕೇಂದ್ರ ಸಂಸತ್ತಿನ ಶಾಸಕಾಂಗ ಅಧಿಕಾರದ ಮೇಲೆ ಪರಿಣಾಮ ಬೀರುತ್ತದೆ. ಈ ವಿಷಯದ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನ್ಯಾಯಾಲಯವು ಸಮಸ್ಯೆಯನ್ನು ಮತ್ತಷ್ಟು ಪರಿಶೀಲಿಸುವ ಅಗತ್ಯವಿದೆ ಎಂದಿದೆ.

ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಈ ಸಮೀಕ್ಷೆಯ ಮಾಹಿತಿಯನ್ನು ರಾಜ್ಯ ವಿಧಾನಸಭೆಯಲ್ಲಿ ವಿವಿಧ ಪಕ್ಷಗಳ ನಾಯಕರೊಂದಿಗೆ ಹಂಚಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಈ ವೇಳೆ ಖಾಸಗಿತನದ ಹಕ್ಕಿನ ದೊಡ್ಡ ಪ್ರಶ್ನೆಯು ಖಂಡಿತವಾಗಿಯೂ ಉದ್ಭವಿಸುತ್ತದೆ. ಸುಪ್ರೀಂ ಕೋರ್ಟ್ ಇದನ್ನು ಜೀವಿಸುವ ಹಕ್ಕಿನ ಒಂದು ಪ್ರಮುಖ ಭಾಗವಾಗಿ ಪರಿಗಣಿಸಿದೆ ಎಂದು ಅದು ಹೇಳಿದೆ. 

ಬಿಹಾರದಲ್ಲಿ ಮೊದಲ ಸುತ್ತಿನ ಜಾತಿ ಸಮೀಕ್ಷೆಯನ್ನು ಜನವರಿ 7 ಮತ್ತು 21 ರ ನಡುವೆ ನಡೆಸಲಾಯಿತು. ಎರಡನೇ ಸುತ್ತು ಏಪ್ರಿಲ್ 15 ರಂದು ಪ್ರಾರಂಭವಾಯಿತು ಮತ್ತು ಮೇ 15ರವರೆಗೆ ಮುಂದುವರೆಯಬೇಕಿತ್ತು.

ಸಮೀಕ್ಷೆಗೆ ತಡೆ ನೀಡುವಂತೆ ಕೋರಿ ಸಾಮಾಜಿಕ ಸಂಘಟನೆ ಮತ್ತು ಕೆಲವು ವ್ಯಕ್ತಿಗಳು ಹೈಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸಮೀಕ್ಷೆಗೆ ಮಧ್ಯಂತರ ತಡೆ ನೀಡಬೇಕು ಎಂದು ಮಾಡಿದ್ದ ಮನವಿಯನ್ನು ತಿರಸ್ಕರಿಸಿದ ನಂತರ ಕಳೆದ ತಿಂಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿತು ಮತ್ತು ಅವರ ಅರ್ಜಿಯನ್ನು ತ್ವರಿತವಾಗಿ ತೀರ್ಮಾನಿಸುವಂತೆ ನಿರ್ದೇಶನಗಳೊಂದಿಗೆ ಅವರನ್ನು ಮತ್ತೆ ಹೈಕೋರ್ಟ್‌ಗೆ ಕಳುಹಿಸಿತು. 

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ರಾಜ್ಯದಲ್ಲಿ ಜಾತಿ ಗಣತಿಯನ್ನು ನಡೆಸುತ್ತಿಲ್ಲ. ಆದರೆ, ಜನರ ಆರ್ಥಿಕ ಸ್ಥಿತಿ ಮತ್ತು ಅವರ ಜಾತಿಗೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ಸಂಗ್ರಹಿಸುತ್ತಿದ್ದೇವೆ. ಇದರಿಂದಾಗಿ ಅವರಿಗೆ ಉತ್ತಮ ಸೇವೆ ನೀಡಲು ಸರ್ಕಾರವು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com