ದೇಶಾದ್ಯಂತ ಗಗನಕ್ಕೇರಿದ ಈರುಳ್ಳಿ ಬೆಲೆ, ಗ್ರಾಹಕರ ಕಣ್ಣಲ್ಲಿ ನೀರು!
ನವದೆಹಲಿ: ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಹೌದು. ಕಳೆದ ವಾರ ಕೆಜಿ 40-50 ರೂ. ಇದ್ದ ಈರುಳ್ಳಿ ಈಗ ರೂ. 100 ಅಸುಪಾಸಿನಲ್ಲಿದ್ದು, ಬಡ ಹಾಗೂ ಮಧ್ಯಮ ವರ್ಗದವರ ಕೈ ಸುಡುತ್ತಿದೆ. ಅತಿವೃಷ್ಟಿ ಮತ್ತು ಪ್ರವಾಹದಿಂದ ಉತ್ವಾದನೆ ಕುಂಠಿತ ಹಾಗೂ ಪೂರೈಕೆಯ ಕೊರತೆಯಿಂದಾಗಿ ಬೆಲೆಗಳು ಗಗನಕ್ಕೇರಿದೆ.
ಕರ್ನಾಟಕದಲ್ಲಿಯೂ ಕೂಡಾ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಈರುಳ್ಳಿ ಬೆಲೆ ಹೆಚ್ಚಳಕ್ಕೆ ಉತ್ತರ ಕರ್ನಾಟಕ ಪ್ರದೇಶದಲ್ಲಿನ ತೀವ್ರ ಬರ-ತರಹದ ಪರಿಸ್ಥಿತಿಗಳು ಕಾರಣವೆಂದು ಹೇಳಲಾಗುತ್ತಿದೆ. ಹಾಪ್ಕಾಮ್ಸ್ನಲ್ಲಿ ಕಳೆದ ವಾರ ರೂ.50-60ಗೆ ಕೆಜಿ ಈರುಳ್ಳಿ ಸಿಗುತ್ತಿತ್ತು. ಈಗ 90 ರೂ. ಆಗಿದೆ. ದುಬಾರಿ ಬೆಲೆಯಿಂದಾಗಿ ತರಕಾರಿ ಅಂಗಡಿಗಳಲ್ಲಿ ಈರುಳ್ಳಿ ದೊರೆಯದಂತಾಗಿದ್ದು, ಈರುಳ್ಳಿಗೆ ಬೇಡಿಕೆ ಹೆಚ್ಚಿರುವುದರಿಂದ ಇನ್ನೂ ಕೆಲವು ದಿನಗಳ ಕಾಲ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಂಗಡಿಯವರು ಹೇಳುತ್ತಾರೆ.
ಮುಂಬೈಯಲ್ಲಿ ಕೆಜಿ ಈರುಳ್ಳಿ ಬೆಲೆ ರೂ.80 ತಲುಪಿದೆ. ಸರ್ಕಾರವು ಇತ್ತೀಚೆಗೆ ಈರುಳ್ಳಿಗೆ ಕನಿಷ್ಠ ರಫ್ತು ಬೆಲೆಯನ್ನು ವಿಧಿಸಿತು ಮತ್ತು ಬಫರ್ ದಾಸ್ತಾನುಗಳಿಗಾಗಿ ಹೆಚ್ಚುವರಿಯಾಗಿ 2 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಿತು. ಮುಂಬೈನಲ್ಲಿ ಈರುಳ್ಳಿ ಬೆಲೆ ತುಂಬಾ ಹೆಚ್ಚಾಗಿದ್ದು, ಬಡ, ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ ಎಂದು ಗ್ರಾಹಕರೊಬ್ಬರು ತಿಳಿಸಿದರು.
ಉತ್ತರ ಪ್ರದೇಶದ ಆಗ್ರಾದಂತಹ ದೇಶದ ಇತರ ಭಾಗಗಳಲ್ಲಿ ಪೂರೈಕೆಯ ಕೊರತೆಯಿಂದಾಗಿ ಬೆಲೆಗಳು ಗಗನಕ್ಕೇರಿವೆ ಎಂದು ತರಕಾರಿ ಮಾರಾಟಗಾರ ಮನೋಜ್ ಹೇಳಿದರು. ಮಂಡಿಯಿಂದ 60 ರಿಂದ 65 ರೂ.ಗೆ ಈರುಳ್ಳಿ ಸಿಗುತ್ತಿದೆ. ಆದರೆ, ಬೆಲೆ ಏರಿಕೆಯಿಂದ ಗ್ರಾಹಕರು ಈರುಳ್ಳಿ ಖರೀದಿಸುತ್ತಿಲ್ಲ, ಪೂರೈಕೆಯ ಕೊರತೆಯೂ ಇದೆ ಎಂದರು.
ಕಾನ್ಪುರದಲ್ಲಿಯೂ ಈರುಳ್ಳಿ ಬೆಲೆ ಹೆಚ್ಚಾಗಿದ್ದು, ಸರ್ಕಾರ ಮಧ್ಯ ಪ್ರವೇಶಿಸಬೇಕು, ಇಲ್ಲವಾದರೆ ಮತ್ತಷ್ಟು ಬೆಲೆ ಹಚ್ಚಾಗಬಹುದು ಎಂದು ಗ್ರಾಹಕ ರಾಹುಲ್ ಹೇಳಿದರು. ಈರುಳ್ಳಿ ಬೆಲೆ ಹೆಚ್ಚಳ ಕುರಿತು ಪ್ರತಿಕ್ರಿಯಿಸಿದ ತರಕಾರಿ ಮಾರಾಟಗಾರ ಮನೋಜ್ ಸೊನ್ ಕಾರ್, ಈ ಹಿಂದೆ ರೂ. 3ರಿಂದ 4 ಲಾಭ ಸಿಗುತಿತ್ತು. ಇದೀಗ ರೂ.1 ಅಥವಾ 1.5 ರೂಪಾಯಿ ಲಾಭ ಬರುತ್ತಿದೆ. ಗೋದಾಮುಗಳಲ್ಲಿ ದಾಸ್ತಾನು ಸಂಗ್ರಹವಾಗಿದ್ದು, ನಂತರ ಕೊರತೆ ಉಂಟಾಗಿದೆ. ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗಬಹುದು ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ