ಜಾಗತಿಕ ವಿಶ್ವಾಸ ಕೊರತೆ ನಿವಾರಣೆಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಬದಲಾವಣೆಯ ಮಂತ್ರವಾಗಬಹುದು: ಪ್ರಧಾನಿ ಮೋದಿ

ಇಂದು ಶನಿವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ವೋಲ್ಟೇಜ್ ಜಿ20 ಶೃಂಗಸಭೆ ಆರಂಭವಾಗಿದೆ. ತಮ್ಮ ಸ್ವಾಗತ ಭಾಷಣದಲ್ಲಿ 'ಒಂದು ಭೂಮಿ' ಧ್ಯೇಯವಾಕ್ಯ ಮೇಲೆ ಮಾತನಾಡುವಾಗ ಪ್ರಧಾನಿ ಮೋದಿ ಹಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ.
ಜಿ 20 ಶೃಂಗಸಭೆ ಆರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ
ಜಿ 20 ಶೃಂಗಸಭೆ ಆರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ

ನವದೆಹಲಿ: ಇಂದು ಶನಿವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ವೋಲ್ಟೇಜ್ ಜಿ20 ಶೃಂಗಸಭೆ ಆರಂಭವಾಗಿದೆ. ತಮ್ಮ ಸ್ವಾಗತ ಭಾಷಣದಲ್ಲಿ 'ಒಂದು ಭೂಮಿ' ಧ್ಯೇಯವಾಕ್ಯ ಮೇಲೆ ಮಾತನಾಡುವಾಗ ಪ್ರಧಾನಿ ಮೋದಿ ಹಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ.

ಹಳೆಯ ಸವಾಲುಗಳಿಗೆ ಹೊಸ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ 21ನೇ ಶತಮಾನದ ಮಹತ್ವವನ್ನು ಒತ್ತಿ ಹೇಳಿ ಜಾಗತಿಕ ಸವಾಲುಗಳನ್ನು ಎದುರಿಸಲು ಮಾನವ ಕೇಂದ್ರಿತ ವಿಧಾನಕ್ಕೆ ಕರೆ ನೀಡಿದರು.

ರಾಷ್ಟ್ರ ರಾಜಧಾನಿಯ ಭಾರತ್ ಮಂಟಪ್ ದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಅವರು, ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಸಂಘರ್ಷಗಳಿಂದ ಉಂಟಾಗುವ ವಿಶ್ವಾಸ ಕೊರತೆಗಳನ್ನು ನಿವಾರಿಸಲು ಮಾನವ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಸೂಚಿಸಿದರು.

"21 ನೇ ಶತಮಾನವು ಜಗತ್ತಿಗೆ ಹೊಸ ದಿಕ್ಕನ್ನು ತೋರಿಸಲು ಪ್ರಮುಖ ಸಮಯವಾಗಿದೆ. ಹಳೆಯ ಸಮಸ್ಯೆಗಳಿಗೆ ನಮ್ಮಿಂದ ಹೊಸ ಪರಿಹಾರಗಳನ್ನು ಹುಡುಕುತ್ತಿರುವ ಸಮಯವಾಗಿದೆ. ಅದಕ್ಕಾಗಿಯೇ ನಾವು ನಮ್ಮ ಜವಾಬ್ದಾರಿಗಳನ್ನು ಮಾನವ ಕೇಂದ್ರಿತ ವಿಧಾನದೊಂದಿಗೆ ಪೂರೈಸಲು ಮುಂದುವರಿಯಬೇಕು" ಎಂದು ಅಭಿಪ್ರಾಯಪಟ್ಟರು.

ನಂಬಿಕೆ ಕೊರತೆಯಿದೆ, ಅದನ್ನು ನಿವಾರಿಸಬೇಕು: "ಕೋವಿಡ್ ಸಾಂಕ್ರಾಮಿಕ ರೋಗದ ನಂತರ ನಂಬಿಕೆಯ ಕೊರತೆಯ ಹೊಸ ಸವಾಲನ್ನು ಎದುರಿಸಿತು ಮತ್ತು ದುರದೃಷ್ಟವಶಾತ್ ಎದುರಿಸಬೇಕಾಯಿತು. ಇದರಿಂದ ಯುದ್ಧಗಳು ನಡೆದವು. ಕೋವಿಡ್ ನಂತಹ ಸಾಂಕ್ರಾಮಿಕವನ್ನೇ ಸೋಲಿಸಿದ ನಾವು, ಈ ನಂಬಿಕೆಯ ಕೊರತೆಯ ಸವಾಲನ್ನು ಹೇಗೆ ಗೆಲ್ಲಬಹುದು ಎಂದು ಯೋಚನೆ ಮಾಡಬೇಕು ಎಂದರು. 

ಉಕ್ರೇನ್‌ ನಲ್ಲಿನ ಯುದ್ಧವು ಜಾಗತಿಕ ಮಟ್ಟದಲ್ಲಿ ನಂಬಿಕೆಯ ಕೊರತೆಯನ್ನು ಉಂಟುಮಾಡಿದೆ ಎಂದು ಪ್ರತಿಪಾದಿಸಿದ ಮೋದಿ, ಎಲ್ಲಾ ಜಿ 20 ಶೃಂಗಸಭೆಯ ನಾಯಕರು ಒಟ್ಟಾಗಿ ಕೆಲಸ ಮಾಡಲು ಕರೆ ನೀಡಿದರು.

"ಇಂದು, ಜಿ 20ಯ ಅಧ್ಯಕ್ಷರಾಗಿ, ಜಾಗತಿಕ ನಂಬಿಕೆ ವಿಶ್ವಾಸದ ಕೊರತೆಯನ್ನು ನಂಬಿಕೆ ಮತ್ತು ಅವಲಂಬನೆಯಾಗಿ ಪರಿವರ್ತಿಸಲು ಭಾರತವು ಒಟ್ಟಾಗಿ ಜಗತ್ತಿಗೆ ಕರೆ ನೀಡುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಸಾಗಬೇಕಾದ ಸಮಯವಿದು. ಈ ಸಮಯದಲ್ಲಿ, 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಯಾಸ್' ಎಂಬ ಮಂತ್ರವು ನಮಗೆ ಜ್ಯೋತಿ ತರಬಲ್ಲದು ಎಂದರು. 

ಉತ್ತರ ಮತ್ತು ದಕ್ಷಿಣದ ನಡುವಿನ ವಿಭಜನೆ, ಪೂರ್ವ ಮತ್ತು ಪಶ್ಚಿಮ ನಡುವಿನ ಅಂತರ, ಆಹಾರ ಮತ್ತು ಇಂಧನ ನಿರ್ವಹಣೆ, ಭಯೋತ್ಪಾದನೆ, ಸೈಬರ್ ಭದ್ರತೆ, ಆರೋಗ್ಯ, ಇಂಧನ ಅಥವಾ ನೀರಿನ ಭದ್ರತೆ, ಭವಿಷ್ಯಕ್ಕಾಗಿ ನಾವು ಇದಕ್ಕೆ ದೃಢವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ಆಫ್ರಿಕಾ ಒಕ್ಕೂಟ ಸೇರ್ಪಡೆ: ಮಹತ್ವದ ಬೆಳವಣಿಗೆಯಲ್ಲಿ,  ಆಫ್ರಿಕನ್ ಯೂನಿಯನ್ ನ್ನು ಜಿ20 ರ ಗುಂಪಿನ ಖಾಯಂ ಸದಸ್ಯವಾಗಿ ಸೇರ್ಪಡೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಒಕ್ಕೂಟ ಅಧ್ಯಕ್ಷ ಅಜಾಲಿ ಅಸ್ಸೌಮಾನಿ ಪ್ರತಿನಿಧಿಸುವ AU ನ್ನು ಖಾಯಂ ಸದಸ್ಯರಾಗಿ G20 ನಾಯಕರ ಆಸನದಲ್ಲಿ ಕುಳಿತುಕೊಳ್ಳಲು ಆಹ್ವಾನಿಸಿದರು.

ತಮ್ಮ ಭಾಷಣದ ಆರಂಭದಲ್ಲಿ, ಇಂದು ಮುಂಜಾನೆ ಭೂಕಂಪದಿಂದ ಮೊರಾಕೊದಲ್ಲಿ ಜೀವ ಕಳೆದುಕೊಂಡವರ ಬಗ್ಗೆ ದುಃಖ ವ್ಯಕ್ತಪಡಿಸಿದರು. "ನಾವು ಜಿ 20 ನ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೊದಲು, ಮೊರಾಕೊದಲ್ಲಿ ಭೂಕಂಪದಿಂದಾಗಿ ಜೀವಹಾನಿಯ ಬಗ್ಗೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಎಲ್ಲಾ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸೋಣ. ಮೊರಾಕೊಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದರು. 

ಭಾರತವು ಕಳೆದ ವರ್ಷ ಡಿಸೆಂಬರ್ 1 ರಂದು G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತು. G20 ಗೆ ಸಂಬಂಧಿಸಿದ ಸುಮಾರು 200 ಸಭೆಗಳನ್ನು ದೇಶಾದ್ಯಂತ 60 ನಗರಗಳಲ್ಲಿ ಆಯೋಜಿಸಲಾಗಿದೆ. 18ನೇ G20 ಶೃಂಗಸಭೆಯು ಎಲ್ಲಾ G20 ಪ್ರಕ್ರಿಯೆಗಳು ಮತ್ತು ಮಂತ್ರಿಗಳು, ಹಿರಿಯ ಅಧಿಕಾರಿಗಳು ಮತ್ತು ನಾಗರಿಕ ಸಮಾಜಗಳ ನಡುವೆ ವರ್ಷವಿಡೀ ನಡೆದ ಸಭೆಗಳ ಪರಾಕಾಷ್ಠೆಯಾಗಿದೆ.

ಶೃಂಗಸಭೆಯಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ಅತಿಥಿ ದೇಶಗಳು ಮತ್ತು 14 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com