ರಾಮರಾಜ್ಯ ಅಂದರೆ ಹೇಗಿರಬೇಕು ಗೊತ್ತಾ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದೇನು?
ರಾಮರಾಜ್ಯವನ್ನು ಯಾರಾದರೂ ಊಹಿಸಿಕೊಂಡರೆ, ಅದು ಎಲ್ಲರಿಗೂ ಉತ್ತಮ ಮತ್ತು ಉಚಿತ ಶಿಕ್ಷಣ ಹಾಗೂ ಆರೋಗ್ಯವನ್ನು ಹೊಂದಿರಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
Published: 23rd September 2023 04:37 PM | Last Updated: 23rd September 2023 04:37 PM | A+A A-

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ: ರಾಮರಾಜ್ಯವನ್ನು ಯಾರಾದರೂ ಊಹಿಸಿಕೊಂಡರೆ, ಅದು ಎಲ್ಲರಿಗೂ ಉತ್ತಮ ಮತ್ತು ಉಚಿತ ಶಿಕ್ಷಣ ಹಾಗೂ ಆರೋಗ್ಯ ಸಿಗುವಂತಿರಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸಿಗುವಂತಾಗಬೇಕು. ಎಎಪಿ ನೇತೃತ್ವದ ದೆಹಲಿ ಸರ್ಕಾರವು ಆ ದಿಕ್ಕಿನಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಅವರು ಶನಿವಾರ ದೆಹಲಿ ಸರ್ಕಾರ ನಡೆಸುತ್ತಿರುವ ಅರುಣಾ ಅಸಫ್ ಅಲಿ ಆಸ್ಪತ್ರೆಯ ಹೊಸ ಒಪಿಡಿ ಕಟ್ಟಡವನ್ನು ಉದ್ಘಾಟಿಸಿದರು ಮತ್ತು ಅಲ್ಲಿನ ರೋಗಿಗಳೊಂದಿಗೆ ಸಂವಾದ ನಡೆಸಿದರು.
ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಶಿಕ್ಷಣ ಒದಗಿಸುವುದು ದೆಹಲಿ ಸರ್ಕಾರದ ಕೇಂದ್ರಬಿಂದುವಾಗಿದೆ. ಈ ನಿಟ್ಟಿನಲ್ಲಿಯೇ ಕೆಲಸ ನಡೆಯುತ್ತಿದೆ. ಸದ್ಯ ಎಲ್ಲಾ ನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 10,000 ಹಾಸಿಗೆಗಳಿವೆ ಎಂದರು.
'ಹನ್ನೊಂದು ಹೊಸ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಹಳೆಯ ಸೌಲಭ್ಯಗಳ ಮೂಲಸೌಕರ್ಯ ವ್ಯವಸ್ಥೆಗಳನ್ನು ನವೀಕರಿಸಲಾಗುತ್ತಿದೆ. ಇವುಗಳಿಗೆ 16,000 ಹೊಸ ಹಾಸಿಗೆಗಳನ್ನು ಸೇರಿಸಲಾಗುವುದು' ಎಂದು ಅವರು ಹೇಳಿದರು.
ಮುಂಬರುವ ದಸರಾ ಮತ್ತು ದೀಪಾವಳಿ ಹಬ್ಬಗಳನ್ನು ಉಲ್ಲೇಖಿಸಿದ ಅವರು, 'ನಾವು ಭಗವಾನ್ ರಾಮನನ್ನು ಆರಾಧಿಸುತ್ತೇವೆ'. 'ರಾಮರಾಜ್ಯ'ದ ಬಗ್ಗೆ ಮಾತನಾಡಲಾಗುತ್ತಿದೆ. ನಾವು ಆ 'ರಾಮರಾಜ್ಯ'ದ ಬಳಿ ತಲುಪಬಹುದು ಎಂದು ನಾನು ಹೇಳಲಾರೆ. ಆದರೆ, ನಾವು 'ರಾಮರಾಜ್ಯ' ಹೇಗಿರುತ್ತದೆ ಎಂಬುದನ್ನು ಕಲ್ಪಿಸಿಕೊಂಡರೆ, ಅಲ್ಲಿ ಉತ್ತಮ ಮತ್ತು ಉಚಿತ ಶಿಕ್ಷಣ ಹಾಗೂ ಎಲ್ಲರಿಗೂ ಸಿಗುವಂತಿರಬೇಕು' ಎಂದು ಕೇಜ್ರಿವಾಲ್ ಹೇಳಿದರು.
ಬಡವರಾಗಲಿ ಶ್ರೀಮಂತರಾಗಲಿ ಎಲ್ಲರಿಗೂ ಉತ್ತಮ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ದೊರಕಬೇಕು ಮತ್ತು ನಮ್ಮ ಸರ್ಕಾರವು ಆ ದಿಕ್ಕಿನಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.