'ಕಚ್ಚತೀವು' ಮುಗಿದ ಅಧ್ಯಾಯ, ಪದೇ ಪದೇ ಕೆದಕುವುದರಿಂದ ಶ್ರೀಲಂಕಾ ತಮಿಳರ ಹಿತಾಸಕ್ತಿಗೆ ಧಕ್ಕೆ: ಕಾಂಗ್ರೆಸ್ ನಾಯಕ P Chidambaram
ಚೆನ್ನೈ: ಕಚ್ಚತೀವು ದ್ವೀಪ ವಿಷಯ ಮುಗಿದು ಹೋದ ಅಧ್ಯಾಯ. ಚುನಾವಣೆ ಸಮೀಪಿಸುತ್ತಿರುವಾಗ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದು, ಇದರಿಂದ ಶ್ರೀಲಂಕಾದಲ್ಲಿರುವ ತಮಿಳರ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ.
ಪಿಟಿಎ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಪಿ ಚಿದಂಬರಂ, 'ಕಚ್ಚತೀವು ದ್ವೀಪ ವಿಷಯ ಮುಗಿದು ಹೋದ ಅಧ್ಯಾಯ. ಚುನಾವಣೆ ಸಮೀಪಿಸುತ್ತಿರುವಾಗ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಗಡಿಯಲ್ಲಿ ಭಾರತದ ಭೂಪ್ರದೇಶಗಳನ್ನು ಚೀನಾ ಆಕ್ರಮಿಸಿಕೊಳ್ಳುತ್ತಿದ್ದು ದೇಶದ ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಕಚ್ಚತೀವು ದ್ವೀಪದ ವಿಷಯವನ್ನು ಚುನಾವಣೆ ಕಾರಣಗಳಿಗೆ ಎತ್ತುತ್ತಿದೆ.
ಈ ವಿಷಯ ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯ ಹಾಗೂ ಅಲ್ಲಿನ ತಮಿಳು ಭಾಷಿಕರ ಮೇಲೂ ಗಂಭೀರ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.
ಶ್ರೀಲಂಕಾ ಸರ್ಕಾರ ಮತ್ತು ಸಿಂಹಳೀಯರು ಮತ್ತು ತಮಿಳರ ನಡುವೆ ಘರ್ಷಣೆಯ ಪರಿಸ್ಥಿತಿಯನ್ನು ಸೃಷ್ಟಿಸಿದರೆ ಶ್ರೀಲಂಕಾದಲ್ಲಿ ವಾಸಿಸುವ ಲಕ್ಷಾಂತರ ತಮಿಳು ಮಾತನಾಡುವ ಜನರ ಹಿತಾಸಕ್ತಿಗಳಿಗೆ ಅವರು ಗಂಭೀರ ಹಾನಿಯನ್ನುಂಟುಮಾಡುತ್ತಾರೆ ಎಂದು ಮೋದಿ ಮತ್ತು ಅವರ ಮಂತ್ರಿಗಳಿಗೆ ತಿಳಿದಿದೆ. ಆದರೂ ಸ್ಪಷ್ಟ ರಾಜಕೀಯ ಮತ್ತು ಚುನಾವಣಾ ಕಾರಣಗಳಿಗಾಗಿ ಈಗಾಗಲೇ ಮುಚ್ಚಿಹೋಗಿರುವ ಸಮಸ್ಯೆಯನ್ನು ಅವರು ಕೆದಕುತ್ತಿದ್ದಾರೆ. ಇದು ನಿಜಕ್ಕೂ ದುಃಖದ ವಿಚಾರ ಮತ್ತು ಖಂಡನೀಯ ಎಂದು ಚಿದಂಬರಂ ಹೇಳಿದರು.
ಅಂತೆಯೇ ಕಚ್ಚತೀವು ದ್ವೀಪದ ವಿಷಯ ಮುಗಿದು ಹೋದ ಅಧ್ಯಾಯವಾಗಿದೆ. 50 ವರ್ಷಗಳ ಹಿಂದೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ 2014ರಿಂದ ಅಧಿಕಾರದಲ್ಲಿದ್ದಾರೆ. ಕಳೆದ 10 ವರ್ಷಗಳಲ್ಲಿ ಅವರು ಈ ವಿಷಯವನ್ನು ಏಕೆ ಎತ್ತಲಿಲ್ಲ?.. ಲಂಕಾದಲ್ಲಿರುವ ತಮಿಳು ಭಾಷಿಕರ ಮೇಲೆ ಗಂಭೀರ ಪರಿಣಾಮಗಳಾಗಲಿವೆ ಎಂಬುದು ಮೋದಿ ಮತ್ತು ಮಂತ್ರಿಗಳಿಗೆ ಗೊತ್ತಿದ್ದರೂ ಅವರು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದು ಖಂಡನೀಯ ಎಂದು ಚಿದಂಬರಂ ಹೇಳಿದ್ದಾರೆ.
2019ಕ್ಕಿಂತ 2024ರಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ
ಇದೇ ವೇಳೆ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಚಿದಂಬರಂ, ಕಾಂಗ್ರೆಸ್ ಪಕ್ಷ 2019ರ ಲೋಕಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚು ಸ್ಥಾನ ಪಡೆಯಲಿದ್ದು, ಇಂಡಿಯಾ ಮೈತ್ರಿಕೂಟ ತಮಿಳುನಾಡು ಮತ್ತು ಕೇರಳದಲ್ಲೂ ಭರ್ಜರಿ ಜಯಗಳಿಸಲಿದೆ ಎಂದು ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳಲ್ಲಿ ಜಯಗಳಿಸಿತ್ತು. ಈ ಬಾರಿ ಹರ್ಯಾಣ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ದೆಹಲಿಯಲ್ಲಿ ಹೆಚ್ಚಿನ ಗೆಲುವು ಸಾಧಿಸುವ ಗುರಿಯನ್ನು ಇಂಡಿಯಾ ಮೈತ್ರಿಕೂಟ ಹೊಂದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ, ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಪ್ರಮುಖ ಪ್ಲೇಯರ್ ಆಗಿದ್ದಾರೆ. ನಾನು ಎಲ್ಲಾ ರಾಜ್ಯಗಳ ಬಗ್ಗೆ ಮಾತನಾಡುವುದಿಲ್ಲ, ಆದರೆ ತಮಿಳುನಾಡಿನಲ್ಲಿ ಇಂಡಿಯಾ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಲಿದೆ ಎಂದರು.
ಅಂತೆಯೇ ಕೇರಳದಲ್ಲಿ ಯುಡಿಎಫ್ ಮತ್ತು ಎಲ್ ಡಿಎಫ್ 20 ಸ್ಥಾನಗಳನ್ನು ಹಂಚಿಕೊಂಡಿದೆ. ಇಲ್ಲಿ ಬಿಜೆಪಿಗೆ ಯಾವುದೇ ಅವಕಾಶ ಇಲ್ಲ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಜನಪ್ರಿಯ ಕಾಂಗ್ರೆಸ್ ಸರ್ಕಾರವಿದ್ದು, 2019ಕ್ಕಿಂತ ಹೆಚ್ಚಿನ ಸ್ಥಾನ ಗಳಿಸಲಿದೆ. ಹಿಂದೂ ಧರ್ಮವಾಗಲಿ ಅಥವಾ ಹಿಂದೂಗಳಾಗಲಿ ಯಾವುದೇ ಬೆದರಿಕೆಗೆ ಒಳಗಾಗಿಲ್ಲ. ಪ್ರಧಾನಿ ಮೋದಿ ಅವರನ್ನು ಹಿಂದೂಗಳ ಸಂರಕ್ಷಕ ಎಂದು ಬಿಂಬಿಸಲು ವಿಪಕ್ಷಗಳನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿರುವುದು ಬಿಜೆಪಿಯ ಲೆಕ್ಕಾಚಾರದ ತಂತ್ರಗಾರಿಕೆಯಾಗಿದೆ ಎಂದು ಚಿದಂಬರಂ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ