ಶ್ರೀನಗರ: ಶಂಕಿತ ಉಗ್ರರು ಬಿಹಾರ ಮೂಲದ ವಲಸೆ ಕಾರ್ಮಿಕನನ್ನು ಗುಂಡಿಕ್ಕಿ ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದ್ದಾರೆ ಎಂದು ಕಾಶ್ಮೀರ ಪೊಲೀಸರು ಹೇಳಿದ್ದಾರೆ.
ಅನಂತನಾಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೃತ ಕಾರ್ಮಿಕನನ್ನು ರಾಜು ಶಾ ಎಂದು ಗುರುತಿಸಲಾಗಿದೆ. ಶಂಕಿತ ಉಗ್ರರು ರಾಜು ಶಾ ಮೇಲೆ ಗುಂಡು ಹಾರಿಸಿದ್ದರು. ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗೆ ರಾಜು ಶಾ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಳವಳಕಾರಿ ಸಂಗತಿಯೆಂದರೆ, 10 ದಿನಗಳ ಅಂತರದಲ್ಲಿ ನಡೆದ ಎರಡನೇ ಕಾರ್ಮಿಕನ ಹತ್ಯೆಯಾಗಿದೆ. ಏಪ್ರಿಲ್ 8 ರಂದು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸ್ಥಳೀಯರಲ್ಲದ ಚಾಲಕನನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದರು. ಇದು ಕಾಶ್ಮೀರದಲ್ಲಿನ ವಲಸಿಗರನ್ನು ಆತಂಕಕ್ಕೀಡು ಮಾಡಿದೆ.
ಉನ್ನತ ಪೊಲೀಸ್ ಅಧಿಕಾರಿಗಳ ಪ್ರಕಾರ, ಬಿಹಾರಿ ಕಾರ್ಮಿಕ ರಾಜಾ ಇಲ್ಲಿ ವಸ್ತುಗಳ ಮಾರಾಟ ಕೆಲಸ ಮಾಡಿಕೊಂಡಿದ್ದ. ಉಗ್ರರು ಈತನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ತೀರಾ ಹತ್ತಿರದಿಂದ (ಪಾಯಿಂಟ್ ಬ್ಲಾಕ್ ರೇಂಜ್) ಬುಲೆಟ್ ಹಾರಿಸಲಾಗಿದೆ. ಇದರಿಂದ ಕಾರ್ಮಿಕನ ಹೊಟ್ಟೆ ಮತ್ತು ಕುತ್ತಿಗೆಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮೃತಪಟ್ಟಿದ್ದಾರೆ. ಘಟನೆಯ ನಂತರ, ದಾಳಿಕೋರರ ಪತ್ತೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿವೆ.
ವಲಸಿಗ ಕಾರ್ಮಿಕರ ಮೇಲೆ ನಡೆಯುತ್ತಿರುವ ದಾಳಿಯನ್ನು ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವರು ಖಂಡಿಸಿದ್ದಾರೆ. "ಇದೊಂದು ಅವಿವೇಕದ ಹಿಂಸಾಚಾರವಾಗಿದೆ. ಕಾರ್ಮಿಕನನ್ನು ಕಳೆದುಕೊಂಡ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಮೆಹಬೂಬಾ ಮುಫ್ತಿ ಅವರು ಹೇಳಿದ್ದಾರೆ.
Advertisement