'ಹೆಚ್ಚು ಮಕ್ಕಳನ್ನು ಹುಟ್ಟಿಸಿ, ಭ್ರಷ್ಟಾಚಾರಕ್ಕೆ ನೂಕಿದ್ದೀರಿ'; ಲಾಲು ಯಾದವ್ಗೆ ನಿತೀಶ್ ಕುಮಾರ್ ಟಾಂಗ್!; ತಿರುಗೇಟು ಕೊಟ್ಟ ತೇಜಸ್ವಿ ಯಾದವ್
ಪಾಟ್ನಾ: ಎನ್ ಡಿಎ ಮೈತ್ರಿಕೂಟ ಸೇರಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧ ಕಿಡಿಕಾರಿದ್ದು, ಹೆಚ್ಚು ಮಕ್ಕಳನ್ನು ಹುಟ್ಟಿಸಿ, ಭ್ರಷ್ಟಾಚಾರಕ್ಕೆ ನೂಕಿದ್ದಾರೆ ಎಂದು ಹೇಳಿದ್ದಾರೆ.
ಬಾನ್ಮಂಖಿಯಲ್ಲಿ ನಡೆದ ಪ್ರಚಾರದ ಸಮಾವೇಶದಲ್ಲಿ ಮಾತನಾಡಿದ ನಿತೀಶ್ ಕುಮಾರ್, “ಲಾಲು ಪ್ರಸಾದ್ ಯಾದವ್ ಅವರು ಜೈಲಿಗೆ ಹೋಗುವಾಗ ತಮ್ಮ ಪತ್ನಿಯನ್ನು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿದರು. ಈಗ ಅವರ ಮಕ್ಕಳು ರಾಜಕೀಯದಲ್ಲಿದ್ದಾರೆ.
ಹಾಗೆ ನೋಡಿದರೆ, ಲಾಲು ಪ್ರಸಾದ್ ಯಾದವ್ ಅವರು ತುಂಬ ಮಕ್ಕಳನ್ನು ಹುಟ್ಟಿಸಿದ್ದಾರೆ. ಆದರೆ, ಅವರು ಭ್ರಷ್ಟಾಚಾರದಲ್ಲಿ ಸಿಲುಕುವ ಜತೆಗೆ, ಅವರ ಪುತ್ರರು ಹಾಗೂ ಪುತ್ರಿಯರನ್ನೂ ಸಿಲುಕಿಸಿದ್ದಾರೆ” ಎಂದು ಕಿಡಿಕಾರಿದ್ದಾರೆ.
ತೇಜಸ್ವಿ ಯಾದವ್ ತಿರುಗೇಟು
ಇನ್ನು ನಿತೀಶ್ ಕುಮಾರ್ ಟೀಕೆಗೆ ತಿರುಗೇಟು ನೀಡಿರುವ ಲಾಲು ಪುತ್ರ ತೇಜಸ್ವಿ ಯಾದವ್, 'ಇಂತಹ ವೈಯಕ್ತಿಕ ಟೀಕೆಗಳಿಂದ ಬಿಹಾರದ ಜನರಿಗೆ ಲಾಭವಾಗುತ್ತದೆಯೇ...ಅವರು ನಮಗೆ ಏನು ಬೇಕಾದರೂ ಹೇಳಬಹುದು. ಅವರು ಏನು ಹೇಳಿದರೂ ಅದು ನನಗೆ ಆಶೀರ್ವಾದವಿದ್ದಂತೆ. ಆದರೆ ವಿಷಯವೆಂದರೆ ಅಂತಹ ವೈಯುಕ್ತಿಕ ಟೀಕೆಗಳಿಂದ ಬಿಹಾರದ ಜನರಿಗೆ ಲಾಭವಾಗುತ್ತದೆಯೇ ... ಚುನಾವಣೆಯಲ್ಲಿ, ವಿಷಯಗಳ ಬಗ್ಗೆ ಚರ್ಚೆಯಾಗಬೇಕು ...
ಅವರ ಭಾಷಣೆಗಳನ್ನು ಯಾರು ಬರೆಯುತ್ತಿದ್ದಾರೆ ಎಂದು ನಮಗೆ ಅರ್ಥವಾಗುತ್ತಿಲ್ಲ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ.. ಶಿಕ್ಷಣ, ಉದ್ಯೋಗ ಮತ್ತು ವಲಸೆ ನಿಲ್ಲಿಸುವ ಬಗ್ಗೆ ಮಾತನಾಡಬೇಕೇ ಹೊರತು ವೈಯುಕ್ತಿಕ ಟೀಕೆಗಳನ್ನಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಿತೀಶ್ ಕುಮಾರ್ ಅವರು 2022ರಲ್ಲಿ ಎನ್ಡಿಎ ಮೈತ್ರಿಕೂಟ ತೊರೆದು, ಆರ್ಜೆಡಿ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು. ಆದರೆ, ಕಳೆದ ಜನವರಿಯಲ್ಲಿ ಮತ್ತೆ ಎನ್ಡಿಎ ಮೈತ್ರಿಕೂಟ ಸೇರಿದ್ದಾರೆ.