ಪಂಜಾಬ್: ಗರ್ಭಿಣಿಯನ್ನು ಮಂಚಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ ಪತಿ, ಕ್ರಮಕ್ಕೆ ಮಹಿಳಾ ಆಯೋಗ ಒತ್ತಾಯ
ಅಮೃತಸರ: ಪಂಜಾಬ್ನಲ್ಲಿ ಶುಕ್ರವಾರ ನಡೆದ ಭೀಕರ ಘಟನೆಯೊಂದರಲ್ಲಿ, ಜಗಳದ ನಂತರ ಅವಳಿ ಮಕ್ಕಳೊಂದಿಗಿನ ಗರ್ಭಿಣಿ ಪತ್ನಿಗೆ ಪತಿಯೇ ಬೆಂಕಿ ಹಚ್ಚಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ 23 ವರ್ಷದ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿತ್ತು, ನಂತರ ವ್ಯಕ್ತಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದ ಪಿಂಕಿಯನ್ನು ಹಾಸಿಗೆಗೆ ಕಟ್ಟಿ ಕೋಪದ ಭರದಲ್ಲಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೃತಸರ ಸಮೀಪದ ಬುಲ್ಲೇನಂಗಲ್ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ವರದಿಯಾಗಿದೆ.
ಸುಖದೇವ್ ಮತ್ತು ಪಿಂಕಿ ಸಂಬಂಧ ಹಳಸಿದ್ದು, ವಿವಿಧ ವಿಚಾರಗಳಿಗೆ ಆಗ್ಗಾಗ್ಗೆ ಜಗಳವಾಡುತ್ತಿದ್ದರು. ಶುಕ್ರವಾರವೂ ಅವರ ನಡುವೆ ಜಗಳ ನಡೆದಿದೆ. ನಂತರ ಸುಖದೇವ್ ಪಿಂಕಿಯನ್ನು ಕೊಂದು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ (NCW) ಪಂಜಾಬ್ ಪೊಲೀಸರಿಂದ ವಿವರವಾದ ವರದಿ ಕೇಳಿದೆ. 'ಅಮೃತಸರದಲ್ಲಿ ಪುರುಷನೊಬ್ಬ ತನ್ನ ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ ಭೀಕರ ಘಟನೆಯಿಂದ ದಿಗ್ಭ್ರಮೆಯಾಗಿದೆ. ಈ ಕೃತ್ಯದ ಕ್ರೌರ್ಯವನ್ನು ಊಹಿಸಲು ಸಾಧ್ಯವಿಲ್ಲ. ಎನ್ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ ಅವರು ಅಪರಾಧಿಯನ್ನು ಬಂಧಿಸಬೇಕು ಮತ್ತು ಮೂರು ದಿನಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ಪಂಜಾಬ್ ಡಿಜಿಪಿಗೆ ಪತ್ರ ಬರೆದಿದ್ದಾರೆ ಎಂದು ಮಹಿಳಾ ಆಯೋಗ ಎಕ್ಸ್ನಲ್ಲಿ ತಿಳಿಸಿದೆ.
ಘಟನೆ ನಂತರ ಪರಾರಿಯಾಗಿದ್ದ ಸುಖದೇವ್ನನ್ನು ನಿನ್ನೆ ಸಂಜೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.