ಆನ್ ಲೈನ್ ನಿಂದನೆಯಿಂದ ಬೇಸತ್ತ ಐಪಿಎಸ್ ದಂಪತಿ, ಕ್ರಮದ ಎಚ್ಚರಿಕೆ
ತಿರುಚ್ಚಿ: ತನ್ನ ಕುಟುಂಬದ ಸದಸ್ಯರ ಮೇಲೆ ಆನ್ಲೈನ್ ನಿಂದನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿರುಚ್ಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ ವರುಣ್ ಕುಮಾರ್ ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಆನ್ಲೈನ್ ದುರ್ಬಳಕೆಯನ್ನು ಸಹಿಸುವುದಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಹಿಂದೆ ನಾಮ್ ತಮಿಳರ್ ಕಚ್ಚಿ ನಾಯಕ ಸೀಮಾನ್ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ನೋಟಿಸ್ ದಾಖಲಿಸಿದ್ದೆ. ನಂತರ NTK ಪಕ್ಷದ ಮೂವರ ವಿರುದ್ಧ ತಿರುಚ್ಚಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾಗಿ ವರುಣ್ ಕುಮಾರ್ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ತಮ್ಮ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಿರ್ದಿಷ್ಟ ಪಕ್ಷದ ಸದಸ್ಯರಿಂದ ನಿಂದನೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ತನ್ನ ಮಾನನಷ್ಟ ಮೊಕದ್ದಮೆಯ ನಂತರ, ತನ್ನ ಮಕ್ಕಳು ಮತ್ತು ಕುಟುಂಬ ಸದಸ್ಯರ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ರಾಜಕೀಯ ಪಕ್ಷವೊಂದರ ಕೈವಾಡವಿರುವ ಬಗ್ಗೆ ಬಲವಾಗಿ ಶಂಕಿಸಲಾಗಿದೆ.
ನಿರ್ದಿಷ್ಟ ಪಕ್ಷವೊಂದರ ಸಂಘಟಕರು ನಿರ್ವಹಿಸುತ್ತಿರುವ ನಕಲಿ ಖಾತೆಗಳಿಂದ ಅಕ್ಷೇಪಾರ್ಹ ಅಂಶಗಳನ್ನು ಫೋಸ್ಟ್ ಮಾಡಲಾಗುತ್ತಿದೆ. ವಿದೇಶದಲ್ಲಿ ನೆಲೆಸಿರುವ ತಮಿಳು ಮಾತನಾಡುವ ವ್ಯಕ್ತಿಗಳಿಗೆ ಹಣ ಪಾವತಿಸಿ ಅಶ್ಲೀಲ ವಿಷಯವನ್ನು ಪೋಸ್ಟ್ ಮಾಡಲು ಹಲವು ನಕಲಿ ಖಾತೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ ಎಂದು ಅವರು 8 ಪುಟಗಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವಿಷಯ ಕುರಿತು ತಾನು ಮತ್ತು ತನ್ನ ಪತ್ನಿ ವಂದಿತಾ ಪಾಂಡೆ ಅನಗತ್ಯ ಸಂವಾದದಲ್ಲಿ ತೊಡಗಬೇಕಾಗಿಬರುವುದರಿಂದ ಸಾಮಾಜಿಕ ಮಾಧ್ಯಮಗಳಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುವುದಾಗಿ ವರುಣ್ ಘೋಷಿಸಿದ್ದಾರೆ. ಸೀಮಾನ್ ಮತ್ತು ವರುಣ್ ನಡುವಿನ ವಿವಾದದ ನಡುವೆ ಎರಡು ಕಡೆಯವರ ನಡುವೆ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ