ತಂಗಿ ಬಗ್ಗೆ ಅಸೂಯೆ: ಬುರ್ಖಾ ಧರಿಸಿ ಬಂದು ಆಭರಣಗಳ ಕದ್ದ ಸಹೋದರಿ!

ಒಡಹುಟ್ಟಿದ ತಂಗಿ ಬಗ್ಗೆ ಅಸೂಯೆ ಪಟ್ಟ ಸಹೋದರಿಯೊಬ್ಬಳು ಆಕೆಯ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿರುವ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ.
ಬುರ್ಖಾ ಧರಿಸಿ ಹೋಗುತ್ತಿರುವ ಮಹಿಳೆ.
ಬುರ್ಖಾ ಧರಿಸಿ ಹೋಗುತ್ತಿರುವ ಮಹಿಳೆ.

ನವದೆಹಲಿ: ಒಡಹುಟ್ಟಿದ ತಂಗಿ ಬಗ್ಗೆ ಅಸೂಯೆ ಪಟ್ಟ ಸಹೋದರಿಯೊಬ್ಬಳು ಆಕೆಯ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿರುವ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ.

ದೆಹಲಿಯ ಉತ್ತಮ್ ನಗರದ ಸೇವಕ್ ಪಾರ್ಕ್‌ನಲ್ಲಿರುವ ತನ್ನ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿದೆ ಎಂದು ಜನವರಿ 30 ರಂದು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಆರಂಭಿಸಿದ್ದರು.

ತನಿಖೆ ವೇಳೆ ಮನೆಯೊಳಗೆ ಬೀಗ ಮುರಿದಿರುವುದಾಗಲೀ, ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದಾಗಲೀ ಕಂಡು ಬಂದಿರದೇ ಇರುವುದು ಕಂಡು ಬಂದಿತ್ತು. ಇದರಂತೆ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಮನೆಯೊಳಗೆ ಬಂದಿರುವುದು ಕಂಡು ಬಂದಿದೆ. ಇದೇ ವೇಳೆ ದೂರು ನೀಡಿದ ವ್ಯಕ್ತಿಯ ಹಿರಿಯ ಮಗಳು ಸೀಮಾ (ಹೆಸರು ಬದಲಿಸಲಾಗಿದೆ) ಮೇಲೆ ಅನುಮಾನ ವ್ಯಕ್ತವಾಗಿದೆ.

ಇದರಂತೆ ಆಕೆಯನ್ನು ವಿಚಾರಣೆಗೊಳಪಡಿಸಿದಾಗ, ಆಕೆ ತನ್ನ ತಂಗಿಯೆ ಮೇಲೆ ಅಸೂಯೆ ಹಾಗೂ ದ್ವೇಷದ ಭಾವನೆ ಹೊಂದಿರುವುದು ಕಂಡು ಬಂದಿದೆ.

ಸೀಮಾ ಸಾಲವನ್ನು ಮಾಡಿಕೊಂಡಿದ್ದು, ಇದೇ ವೇಳೆ ತಂಗಿಯ ಮದುವೆಗೆಂದು ಪೋಷಕರು ಚಿನ್ನಾಭರಣ ಹಾಗೂ ಹಣವನ್ನು ಮನೆಯಲ್ಲಿ ಇರಿಸಿರುವುದು ತಿಳಿದುಬಂದಿದ್ದು. ಈಗಾಗಲೇ ತಂಗಿಯ ಮೇಲೆ ಅಸೂಯೆ ಪಡುತ್ತಿದ್ದ ಈಕೆ ಹಣ ಹಾಗೂ ಚಿನ್ನಾಭರಣವನ್ನು ಕದ್ದು, ತನ್ನ ಕಷ್ಟ ದೂರಾಗಿಸಿಕೊಳ್ಳಲು ನಿರ್ಧರಿಸಿದ್ದಾಳೆ.

ಇದರಂತೆ ಸಂಚು ರೂಪಿಸಿ ಜನವರಿಯಲ್ಲಿ ಮೋಹನ್ ಗಾರ್ಡನ್‌ನಿಂದ ದೆಹಲಿಯ ಉತ್ತಮ್ ನಗರದ ಸೇವಕ್ ಪಾರ್ಕ್‌ಗೆ ಬಳಿಗೆ ಮನೆಯನ್ನು ಬದಲಿಸಲು ಮುಂದಾಗಿದ್ದಳು. ಈ ವೇಳೆ ಸೀಮಾ ತಾಯಿ ಮನೆ ವಸ್ತುಗಳನ್ನು ಸಾಗಿಸಲು ಸಹಾಯ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಮನೆಯ ಕೀಲಿ ಕೈಯನ್ನು ಕದ್ದಿದ್ದ ಸೀಮಾ ತರಕಾರಿ ತರುವ ನೆಪ ಹೇಳಿ ಹೊರಗೆ ಹೋಗಿದ್ದ ಸೀಮಾ, ಸಾರ್ವಜನಿಕ ಶೌಚಾಲಯದಲ್ಲಿ ಬುರ್ಖಾ ಧರಿಸಿಕೊಂಡು ಬಂದು ಮನೆಯಲ್ಲಿ ಚಿನ್ನಾಭರಣ ಹಾಗೂ ಹಣವನ್ನು ಕದ್ದಿದ್ದಾಳೆ. ಈ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಾಳೆ. ತನ್ನ ತಾಯಿ ತಂಗಿಯ ಬಗ್ಗೆ ಅತೀ ಹೆಚ್ಚು ಪ್ರೀತಿ ತೋರುತ್ತಿದ್ದರಿಂದ ಸೀಮಾ ತಂಗಿಯ ಮೇಲೆ ಅಸೂಯೆ ಪಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com