ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ: ಐತಿಹಾಸಿಕ ಲೇಪಾಕ್ಷಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ

ಅಯೋಧ್ಯೆ ರಾಮಮಂದಿರ ಉದ್ಘಧಾಟನೆಗೆ ಕೇವಲ ಇನ್ನು 6 ದಿನ ಮಾತ್ರ ಬಾಕಿ ಉಳಿದಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಮಯಣದಲ್ಲಿ ಉಲ್ಲೇಖವಾಗಿರುವ ಐತಿಹಾಸಿಕ ಲೇಪಾಕ್ಷಿಯ ವೀರಭದ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಐತಿಹಾಸಿಕ ಲೇಪಾಕ್ಷಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ
ಐತಿಹಾಸಿಕ ಲೇಪಾಕ್ಷಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ

ಅನಂತಪುರ: ಅಯೋಧ್ಯೆ ರಾಮಮಂದಿರ ಉದ್ಘಧಾಟನೆಗೆ ಕೇವಲ ಇನ್ನು 6 ದಿನ ಮಾತ್ರ ಬಾಕಿ ಉಳಿದಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಮಯಣದಲ್ಲಿ ಉಲ್ಲೇಖವಾಗಿರುವ ಐತಿಹಾಸಿಕ ಲೇಪಾಕ್ಷಿಯ ವೀರಭದ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಅಯೋಧ್ಯೆ ರಾಮ ಜನ್ಮಭೂಮಿ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿದ್ದು, ಇದಕ್ಕೂ ಮುನ್ನ ಇಂದು(ಮಂಗಳವಾರ) ರಾಮಾಯಣದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಆಂಧ್ರ ಪ್ರದೇಶದ ಲೇಪಾಕ್ಷಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದ್ದರು. ಈ ವೇಳೆ ಪ್ರಧಾನಿ ಮೋದಿ ತೆಲುಗಿನಲ್ಲಿರುವ ರಂಗನಾಥ ರಾಮಾಯಣದ ಪದ್ಯಗಳನ್ನೂ ಆಲಿಸಿದರು. ಬಳಿಕ ಪ್ರಧಾನಿ ಮೋದಿ ಮಧ್ಯಾಹ್ನ 3:30ರ ಸುಮಾರಿಗೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪಾಲಸಮುದ್ರಂ ತಲುಪಲಿದ್ದಾರೆ.

ಕೆಲ ದಿನಗಳ ಹಿಂದೆ ನಾಸಿಕ್‌ನ ಗೋದಾವರಿ ನದಿಯ ದಡದಲ್ಲಿರುವ ಪಂಚವಟಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಅವರು ಕಲಾರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಮರಾಠಿಯಲ್ಲಿ ರಾಮಾಯಣದಿಂದ ಭಗವಾನ್ ರಾಮನ ಅಯೋಧ್ಯೆ ಆಗಮನಕ್ಕೆ ಸಂಬಂಧಿಸಿದ ಶ್ಲೋಕಗಳನ್ನು ಕೇಳಿದ್ದರು.

2 ದಿನಗಳ ಕೇರಳ-ಆಂಧ್ರ ಪ್ರದೇಶ ಪ್ರವಾಸ
ಆಂಧ್ರಪ್ರದೇಶ ಮತ್ತು ಕೇರಳಕ್ಕೆ ಪ್ರಧಾನಿ ಮೋದಿಯವರ ಎರಡು ದಿನಗಳ ಭೇಟಿಯ ಭಾಗವಾಗಿ ಇಂದು ಐತಿಹಾಸಿಕ ಲೇಪಾಕ್ಷಿ ದೇವಾಲಯಕ್ಕೆ ಭೇಟಿ ನೀಡಲಾಗಿದೆ. ಅವರು ಆಂಧ್ರಪ್ರದೇಶದಲ್ಲಿ ಕಸ್ಟಮ್ಸ್, ಪರೋಕ್ಷ ತೆರಿಗೆಗಳು ಮತ್ತು ಮಾದಕ ದ್ರವ್ಯಗಳ ರಾಷ್ಟ್ರೀಯ ಅಕಾಡೆಮಿಯ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ. ಭಾರತೀಯ ಕಂದಾಯ ಸೇವೆಯ 74 ಮತ್ತು 75 ನೇ ಬ್ಯಾಚ್‌ಗಳ ಅಧಿಕಾರಿ ಟ್ರೈನಿಗಳು ಮತ್ತು ಭೂತಾನ್‌ನ ರಾಯಲ್ ಸಿವಿಲ್ ಸರ್ವಿಸ್‌ನ ಅಧಿಕಾರಿ ಟ್ರೈನಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಲೇಪಾಕ್ಷಿ ಸ್ಥಳಮಹಿಮೆ
ರಾಮಾಯಣ ಹಾಗೂ ಶಿವನ ಕತೆಗಳಿಗೆ ಕುರುಹಾಗಿ ನಿಂತಿರುವ ಲೇಪಾಕ್ಷಿ ಅದ್ಭುತ ಶಿಲ್ಪಕಲೆಗಳ ತವರೂರು. ಆ೦ಧ್ರಪ್ರದೇಶದ ಅನ೦ತಪುರ ಜಿಲ್ಲೆಯಲ್ಲಿರುವ ಹಿ೦ದೂಪುರ್ ನಿ೦ದ 15 ಕಿ.ಮೀ. ಗಳಷ್ಟು ದೂರದಲ್ಲಿ ಮತ್ತು ಬೆ೦ಗಳೂರು ನಗರದಿ೦ದ ಸರಿಸುಮಾರು 120 ಕಿ.ಮೀ. ಗಳಷ್ಟು ದೂರದಲ್ಲಿದೆ ಲೇಪಾಕ್ಷಿ. ತಾಯಿ ಸೀತೆಯನ್ನು ಅಪಹರಿಸುತ್ತಿದ್ದ ರಾವಣನೊಂದಿಗೆ ಹೋರಾಡಿದ ಜಟಾಯು ತೀವ್ರವಾಗಿ ಗಾಯಗೊಂಡ ನಂತರ ಬಿದ್ದ ಸ್ಥಳವೇ ಲೇಪಾಕ್ಷಿ ಎಂದು ಹೇಳಲಾಗುತ್ತದೆ.

ಸಾಯುವ ಹಂತದಲ್ಲಿ ಇಲ್ಲಿ ಬಿದ್ದ ಜಟಾಯುವನ್ನು ನೋಡಿದ ರಾಮ, ಸ್ಥಳೀಯ ಭಾಷೆಯಲ್ಲಿ ಎದ್ದೇಳು ಪಕ್ಷಿಯೇ ಎನ್ನಲು 'ಲೇ ಪಕ್ಷಿ' ಎನ್ನುತ್ತಾನೆ. ನಂತರದ ದಿನಗಳಲ್ಲಿ ಇದೇ ಲೇಪಾಕ್ಷಿಯಾಗುತ್ತದೆ. ಅಲ್ಲಿಗೆ ಭೇಟಿ ನೀಡಿದ ರಾಮನಿಗೆ ಮಾ ಸೀತೆಯನ್ನು ರಾವಣನು ದಕ್ಷಿಣಕ್ಕೆ ಕರೆದೊಯ್ದನೆಂದು ಹೇಳಿ ಜಟಾಯುವು ಇದೇ ಜಾಗದಲ್ಲಿ ಮೋಕ್ಷವನ್ನು ಪಡೆಯುತ್ತಾನೆ.

ಇನ್ನು ಇಲ್ಲಿ 8 ಅಡಿ ಉದ್ದದ ಪಾದದ ಗುರುತೊಂದನ್ನು ಕಾಣಬಹುದಾಗಿದ್ದು, ಇದು ಸೀತಾ ಮಾತೆಯ ಪಾದದ ಗುರುತು ಎಂದು ನಂಬಲಾಗಿದೆ. ಗುಪ್ತ ಮೂಲದಿಂದ ಬಂದ ನೀರು ಇಲ್ಲಿ ಯಾವಾಗಲೂ ಇರುತ್ತದೆ.  ಇದೇ ಲೇಪಾಕ್ಷಿ ವೀರಭದ್ರಸ್ವಾಮಿ ದೇವಾಲಯದಲ್ಲಿ ಶಿವ ಪಾರ್ವತಿ ವಿವಾಹಕ್ಕಾಗಿ ನಿರ್ಮಿಸಿದ ಕಲ್ಯಾಣ ಮಂಟಪವನ್ನೂ ಕಾಣಬಹುದು. ಆದರೆ ಕಾರಣಾಂತರಗಳಿಂದ ಇಲ್ಲಿ ವಿವಾಹವಾಗಲಿಲ್ಲ ಎಂದು ಹೇಳಲಾಗಿದೆ. ಇನ್ನು ಇಲ್ಲಿರುವ ಏಳು ಹೆಡೆಯ ನಾಗವು ಶಿವಲಿಂಗಕ್ಕೆ ಸುತ್ತಿರುವಂಥ ನಾಗಲಿಂಗ ಶಿಲ್ಪವು ಜನಪ್ರಿಯವಾಗಿದೆ. ಇವೆಲ್ಲವುಗಳ ಹೊರತಾಗಿ ದೇಶದಲ್ಲೇ ಅತಿ ದೊಡ್ಡ ನಂದಿ ವಿಗ್ರಹವನ್ನು ಕೂಡಾ ಇಲ್ಲಿ ಕಾಣಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com