ಅಯೋಧ್ಯೆ: ಸೋಮವಾರ ಪ್ರಾಣಪ್ರತಿಷ್ಠಾಪಿತನಾದ ಅಯೋಧ್ಯೆ ಶ್ರೀರಾಮನ ವಿಗ್ರಹವನ್ನು ಮಂಗಳವಾರ ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಗಿದ್ದು, ಮೊದಲ ದಿನೇ ಶ್ರೀರಾಮನ ದರ್ಶನ ಮಾಡಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದು, ಈ ವೇಳೆ ನೂಕುನುಗ್ಗಲು ಉಂಟಾಗಿತ್ತು.
ಇದೇ ವೇಳೆ ಜನಸಂದಣಿ ನಿಯಂತ್ರಿಲಾಗದೆ ಉತ್ತರಪ್ರದೇಶ ಪೊಲೀಸರು ಸುಸ್ತಾಗಿ ಹೋಗಿದ್ದು, ಸದ್ಯಕ್ಕೆ ಅಯೋಧ್ಯೆಯತ್ತ ಬರದಂತೆ ಭಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಭಕ್ತರ ಸಂದಣಿ ನಿಯಂತ್ರಿಸಲು ರಾಮಮಂದಿರಕ್ಕೆಂದೇ ಒಬ್ಬ ಐಎಎಸ್ ದರ್ಜೆಯ ಮ್ಯಾಜಿಸ್ಟ್ರೇಟರನ್ನೂ ನೇಮಿಸಲಾಗಿದೆ. ಮೊದಲ ದಿನ ಮಧ್ಯಾಹ್ನದ ವೇಳೆ ಸುಮಾರು 2.5 ರಿಂದ 3 ಲಕ್ಷ ಜನರು ದರ್ಶನ ಮಾಡಿದ್ದು, ರಾತ್ರಿ ವೇಳೆ ಅಂದಾಜು 5 ಲಕ್ಷ ಜನರು ಮೊದಲ ದಿನ ರಾಮನ ದರ್ಶನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಕೆಲವು ಸಂಚಾರ ಮಾರ್ಗಗಳಲ್ಲಿ ಬದಲಾವಣೆ ತಂದಿದ್ದಾರೆ.
ಲಖನೌನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಬಾರಾಬಂಕಿಯಿಂದ ಅಯೋಧ್ಯೆ ಕಡೆಗಿನ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ. ಈ ಮಧ್ಯೆ, ''ಮೊದಲ ದಿನವೇ ರಾಮಲಲ್ಲಾನ ದರ್ಶನ ಪಡೆಯಬೇಕು ಎಂಬ ಆತುರಬೇಡ. ಮಂದಿರದ ಆವರಣದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸರತಿ ಸಾಲಿಗೆ ಅಡ್ಡಿಪಡಿಸಬೇಡಿ. ಸಾಧ್ಯವಾದಷ್ಟು ದಿನ ಅಯೋಧ್ಯೆ ಭೇಟಿ ಮುಂದೂಡಿ,'' ಎಂದು ಉ.ಪ್ರದೇಶ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
Advertisement