ಈ ಬಾರಿ ಕೂಡ ಚುನಾವಣೆಯಲ್ಲಿ ಗೆದ್ದರೆ ಮೋದಿ ಪುಟಿನ್ ರೀತಿ ವರ್ತಿಸಬಹುದು: ಮಲ್ಲಿಕಾರ್ಜುನ ಖರ್ಗೆ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿಯಂತೆ ವರ್ತಿಸಬಹುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಭುವನೇಶ್ವರದಲ್ಲಿ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ
ಭುವನೇಶ್ವರದಲ್ಲಿ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ
Updated on

ಭುವನೇಶ್ವರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿಯಂತೆ ವರ್ತಿಸಬಹುದು. ಹೀಗಾಗಿ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕೆಂದರೆ 2024ರ ಲೋಕಸಭೆ ಚುನಾವಣೆಯು ಜನರಿಗೆ ಕೊನೆಯ ಅವಕಾಶವಾಗಿದೆ, ಪ್ರಜಾಪ್ರಭುತ್ವ ಬೇಕೊ, ಇಲ್ಲ ಸರ್ವಾಧಿಕಾರಿಯಂತೆ ವರ್ತಿಸುವ ಆಡಳಿತ ಬೇಕೊ ಎಂದು ಜನ ತೀರ್ಮಾನ ಮಾಡಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ಭಾರತೀಯ ಜನತಾ ಪಕ್ಷ ಮತ್ತು ಅದರ ಸಿದ್ಧಾಂತವಾದಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ದೂರವಿರಲು ಅವರು ದೇಶದ ಜನರನ್ನು ಒತ್ತಾಯಿಸಿದ್ದು ಆರ್ ಎಸ್ ಎಸ್ ವಿಷವಿದ್ದಂತೆ ಎಂದಿದ್ದಾರೆ. 

"ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಜನರಿಗೆ ಇದು ಕೊನೆಯ ಅವಕಾಶವಾಗಿದೆ, ನರೇಂದ್ರ ಮೋದಿ ಮತ್ತೊಂದು ಚುನಾವಣೆಯಲ್ಲಿ ಗೆದ್ದರೆ, ದೇಶದಲ್ಲಿ ಸರ್ವಾಧಿಕಾರ ರೀತಿಯ ಆಡಳಿತ ನಡೆಸಬಹುದು. ರಷ್ಯಾದಲ್ಲಿ ಪುಟಿನ್ ಅವರಂತೆ ಬಿಜೆಪಿ ಭಾರತವನ್ನು ಆಳಬಹುದು ಎಂದು ಪಕ್ಷದ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಖರ್ಗೆ ಹೇಳಿದರು. 

ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, ಮೋದಿ ನೇತೃತ್ವದ ಪ್ರಸ್ತುತ ಸರ್ಕಾರವು ರಾಜ್ಯಗಳು ಮತ್ತು ಪ್ರತಿಪಕ್ಷಗಳ ನಾಯಕರನ್ನು ಬೆದರಿಸುವ ತಂತ್ರ ಅನುಸರಿಸುತ್ತಿವೆ. ವಿರೋಧ ಪಕ್ಷಗಳ ನಾಯಕರಿಗೆ ತನಿಖಾ ಸಂಸ್ಥೆಗಳ ಮೂಲಕ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಇಡಿ ಮತ್ತು ಆದಾಯ ತೆರಿಗೆ ರಾಜಕೀಯ ವಿರೋಧಿಗಳನ್ನು ಮೆಟ್ಟಿ ನಿಲ್ಲುವ ಅಸ್ತ್ರಗಳಾಗಿ ಮಾರ್ಪಟ್ಟಿವೆ ಎಂದ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತಗಳ ಬಗ್ಗೆ ಜನತೆ ಜಾಗೃತರಾಗಿರಬೇಕು ಎಂದು ಹೇಳಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ವಿರೋಧಿಸಿದರೆ ಪಕ್ಷ, ದೋಸ್ತಿ, ಮೈತ್ರಿ ತೊರೆಯುವುದಾಗಿ ನಾಯಕರಿಗೆ ಬೆದರಿಕೆ ಹಾಕಲಾಗುತ್ತಿದೆ. ಬಿಜೆಪಿ ಮತ್ತು ಆರೆಸ್ಸೆಸ್ ನ್ನು ವಿರೋಧಿಸುತ್ತಿರುವ ರಾಹುಲ್ ಗಾಂಧಿಗೆ ಪದೇ ಪದೇ ಬೆದರಿಕೆ ಹಾಕಲಾಗುತ್ತಿದೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com