NEET-UG paper leak case
ನೀಟ್ ಯುಜಿ ಪೇಪರ್ ಲೀಕ್ ಪ್ರಕರಣ

NEET-UG paper leak case: ಧನ್‌ಬಾದ್‌ನ ಬಾವಿಯಲ್ಲಿ ಮೊಬೈಲ್‌ ತುಂಬಿದ ಚೀಲ CBI ವಶಕ್ಕೆ

ದನ್‌ಬಾದ್‌ನ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಂಬೈನ್ಡ್ ಬಿಲ್ಡಿಂಗ್ ಏರಿಯಾದಲ್ಲಿ ಬಾವಿಯಲ್ಲಿ ಶೋಧ ನಡೆಸಿ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ದಾಖಲೆಗಳನ್ನು ಒಳಗೊಂಡ ಗೋಣಿಚೀಲವನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು.
Published on

ರಾಂಚಿ: ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ಇಂದು ಮೊಬೈಲ್ ಗಳು ತುಂಬಿದ ಚೀಲವನ್ನು ಬಾವಿಯಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದಿದೆ.

ಜಾರ್ಖಂಡ್ ನ ಧನಬಾದ್‌ನ ಜಿಲ್ಲಾ ಕೇಂದ್ರದಿಂದ ಸುಮಾರು 20 ಕಿಮೀ ದೂರದಲ್ಲಿರುವ ಸುಗಮ್ದಿಹ್‌ನಲ್ಲಿರುವ ಬಾವಿಯಲ್ಲಿ ಅಡಗಿಸಿಡಲಾಗಿದ್ದ ಮೊಬೈಲ್ ಫೋನ್‌ಗಳ ಚೀಲವನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದಲ್ಲಿ ಬಂಧಿತ ಶಂಕಿತ ಆರೋಪಿ ಪವನ್ ಕುಮಾರ್ ಎಂಬಾತ ನೀಡಿದ ಮಾಹಿತಿ ಮೇರೆಗೆ ದನ್‌ಬಾದ್‌ನ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಂಬೈನ್ಡ್ ಬಿಲ್ಡಿಂಗ್ ಏರಿಯಾದಲ್ಲಿ ಬಾವಿಯಲ್ಲಿ ಶೋಧ ನಡೆಸಿ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದೇ ವೇಳೆ ದಾಖಲೆಗಳನ್ನು ಒಳಗೊಂಡ ಗೋಣಿಚೀಲವನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು.

NEET-UG paper leak case
NEET-UG ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ; ಟಾಪರ್‌ಗಳ ಸಂಖ್ಯೆ 61ಕ್ಕೆ ಇಳಿಕೆ

ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಸಿಬಿಐ ಅಧಿಕಾರಿಗಳು ನಿರಾಕರಿಸಿದ್ದು, ಗೋಣಿಚೀಲದಲ್ಲಿ ದಾಖಲೆಗಳ ಜೊತೆಗೆ ಕನಿಷ್ಠ ಏಳು ಮೊಬೈಲ್ ಫೋನ್‌ಗಳಿವೆ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ, ಸಿಬಿಐ ಕನಿಷ್ಠ ಐವರು ಯುವಕರನ್ನು ಧನ್‌ಬಾದ್‌ನಿಂದ ವಶಕ್ಕೆ ಪಡೆದುಕೊಂಡಿದ್ದು, ಅವರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣದಲ್ಲಿ ಸಿಬಿಐ ಈಗಾಗಲೇ ರವೀಂದ್ರ ಅಲಿಯಾಸ್ ಅಮನ್ ಸಿಂಗ್ ಮತ್ತು ಆತನ ಸಹಚರ ಬಂಟಿಯನ್ನು ಧನ್‌ಬಾದ್‌ನಿಂದ ಬಂಧಿಸಿದೆ. ಪೇಪರ್ ಸೋರಿಕೆಯಲ್ಲಿ ಅಮನ್ ಸಿಂಗ್ ಪ್ರಮುಖ ಸಂಚುಕೋರ ಎನ್ನಲಾಗಿದೆ.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ರಾಕಿಗೆ ಅಮನ್ ಸಿಂಗ್ ಆಪ್ತ ಎನ್ನಲಾಗಿದೆ. ರಾಕಿ ಸಂಜೀವ್ ಮುಖಿಯಾ ಅವರ ಸೋದರಳಿಯನಾಗಿದ್ದು, ಇಬ್ಬರೂ ರಾಂಚಿಯಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ NEET ಪತ್ರಿಕೆಗೆ ಉತ್ತರಗಳನ್ನು ಸಿದ್ಧಪಡಿಸಲು ರಾಕಿ ಉತ್ತರಗಳ ಪಟ್ಟಿಯನ್ನು ವ್ಯವಸ್ಥೆಗೊಳಿಸಿದ್ದ ಎನ್ನಲಾಗಿದೆ. ರಾಕಿ ಜಾರ್ಖಂಡ್‌ನ ಸಂಜೀವ್ ಮುಖಿಯಾ ಗ್ಯಾಂಗ್‌ನ ವಿಶೇಷ ಏಜೆಂಟ್ ಆಗಿದ್ದು, ರಾಂಚಿ ಮತ್ತು ಪಾಟ್ನಾದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಉತ್ತರ ಪಟ್ಟಿ ಸಿದ್ಧ ಮಾಡಲು ಬಳಸಲಾಯಿತು.

NEET-UG paper leak case
ಕೇಂದ್ರದ NEET ಪರೀಕ್ಷೆ ರದ್ಧುಗೊಳಿಸುವ ನಿರ್ಣಯಕ್ಕೆ ಉಭಯ ಸದನಗಳಲ್ಲೂ ಅಂಗೀಕಾರ

ಇಲ್ಲಿಯವರೆಗೆ, ಓಯಸಿಸ್ ಶಾಲೆಯ ಪ್ರಾಂಶುಪಾಲ ಎಹ್ಸಾನುಲ್ ಹಕ್ ಸೇರಿದಂತೆ ಜಾರ್ಖಂಡ್‌ನಿಂದ 13 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಉಪ-ಪ್ರಾಂಶುಪಾಲರು ಮತ್ತು ಕೇಂದ್ರದ ಸಂಯೋಜಕ ಇಮ್ತಿಯಾಜ್ ಆಲಂ; ಪತ್ರಕರ್ತ ಜಮಾಲುದ್ದೀನ್; ಮತ್ತು ಹಜಾರಿಬಾಗ್‌ನ ಅತಿಥಿ ಗೃಹದ ಮಾಲೀಕ ರಾಜ್ ಕುಮಾರ್ ಸಿಂಗ್. ಹೆಚ್ಚುವರಿಯಾಗಿ, ರಾಂಚಿಯ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಸುರ್ಭಿ ಕುಮಾರಿ, ಅಮನ್ ಸಿಂಗ್ ಮತ್ತು ಧನ್‌ಬಾದ್‌ನ ಬಂಟಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ಜೂನ್ 23 ರಂದು, ಬಿಹಾರದ EOU ತಂಡವು ದಿಯೋಘರ್‌ನಿಂದ ಆರು ಜನರನ್ನು ಬಂಧಿಸಿತು, ಇದರಲ್ಲಿ ಬಿಹಾರದ ನಾಲ್ವರು ಶಂಕಿತರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com