
ಮಲಪ್ಪುರಂ (ಕೇರಳ): 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿರುವ ಕೇರಳದ ವಯನಾಡ್ ಮತ್ತು ರಾಯ್ ಬರೇಲಿ ಲೋಕಸಭಾ ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬ ಸಂದಿಗ್ಧತೆಗೆ ಸಿಲುಕಿರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಆದರೆ, ತಾವು ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಎರಡೂ ಲೋಕಸಭಾ ಕ್ಷೇತ್ರಗಳ ಜನರು ಒಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ಸತತ ಎರಡನೇ ಬಾರಿಗೆ ವಯನಾಡ್ ಲೋಕಸಭಾ ಕ್ಷೇತ್ರದಿಂದ ಭಾರಿ ಅಂತರದಿಂದ ಗೆದ್ದ ನಂತರ ಅವರು ರಾಜ್ಯದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಲೋಕಸಭೆಗೆ ಎರಡನೇ ಅವಧಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ವಯನಾಡ್ ಜನತೆಗೆ ಧನ್ಯವಾದ ಅರ್ಪಿಸಿದರು.
'ನಾನು ವಯನಾಡ್ ಸಂಸದನಾಗಬೇಕೇ ಅಥವಾ ರಾಯ್ಬರೇಲಿಯ ಸಂಸದನಾಗಬೇಕೇ ಎಂಬ ಸಂದಿಗ್ಧತೆ ನನ್ನ ಮುಂದಿದೆ. ವಯನಾಡ್ ಮತ್ತು ರಾಯ್ಬರೇಲಿ ಎರಡೂ ಕ್ಷೇತ್ರಗಳು ನನ್ನ ನಿರ್ಧಾರದಿಂದ ಸಂತೋಷವಾಗಿರುತ್ತವೆ ಎಂದು ನಾನು ಭಾವಿಸುತ್ತೇನೆ' ಎಂದು ಇಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕ ಹೇಳಿದರು.
ಪ್ರಧಾನಿಯಾಗಿ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದರ ಕುರಿತು ಅವರು ದೇವರಿಂದ ಯಾವುದೇ ನಿರ್ದೇಶನಗಳನ್ನು ಸ್ವೀಕರಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿಯನ್ನು ಲೇವಡಿ ಮಾಡಿದ ಕಾಂಗ್ರೆಸ್ ನಾಯಕ, ದೇಶದ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಅದಾನಿಗೆ ಹಸ್ತಾಂತರಿಸುವಂತೆ ದೇವರು ಪ್ರಧಾನಿಗೆ ನಿರ್ದೇಶಿಸುತ್ತಾನೆ. ಆದರೆ, ನಾನು ಮನುಷ್ಯ. ನನ್ನ ದೇವರು ದೇಶದ ಬಡ ಜನರು. ಆದ್ದರಿಂದ, ನನಗೆ ಇದು ಸುಲಭವಾಗಿದೆ. ನಾನು ಜನರೊಂದಿಗೆ ಮಾತನಾಡುತ್ತೇನೆ ಮತ್ತು ಅವರು ಏನು ಮಾಡಬೇಕೆಂದು ನನಗೆ ಹೇಳುತ್ತಾರೆ ಎಂದು ಹೇಳಿದರು.
2024ರ ಲೋಕಸಭೆ ಚುನಾವಣೆಯ ಹೋರಾಟವು ಭಾರತದ ಸಂವಿಧಾನದ ರಕ್ಷಣೆಗಾಗಿ ನಡೆಯಿತು. ಆ ಹೋರಾಟದಲ್ಲಿ ದ್ವೇಷವನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ, ವಿನಯದಿಂದ, ಅಹಂಕಾರವನ್ನು ಮಾನವೀಯತೆಯಿಂದ ಸೋಲಿಸಲಾಗಿದೆ. ಭಾರತದ ಜನರು ಅವರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿರುವುದರಿಂದ ಪ್ರಧಾನಿ ಮೋದಿ ಈಗ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಕೇಂದ್ರದಲ್ಲಿ ರಚನೆಯಾದ ಸರ್ಕಾರವು ವಿಕಲಾಂಗ ಸರ್ಕಾರವಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.
Advertisement