
ನವದೆಹಲಿ: ಲೊಕೋ ಪೈಲಟ್ ಗಳ ಅತಿ ವೇಗದ ಚಾಲನೆ ಕಳವಳಕಾರಿಯಾಗಿ ಪರಿಣಮಿಸಿದ್ದು, ರೈಲ್ವೆ ಮಂಡಳಿ ಈ ರೀತಿಯ ಘಟನೆಗಳ ಮೇಲೆ ಕಣ್ಣಿಡುವುದಕ್ಕೆ ಸಮಿತಿ ರಚನೆ ಮಾಡಿದೆ.
ನಿಗದಿತ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ರೈಲು ಚಾಲನೆ ಮಾಡುವುದಕ್ಕೆ ಕಾರಣವಾಗುವ ಅಂಶಗಳನ್ನು ಪತ್ತೆ ಮಾಡುವುದಕ್ಕೆ ಸಮಿತಿಗೆ ಸೂಚನೆ ನೀಡಲಾಗಿದೆ. ವೇಗದ ಮಿತಿಗಳ ಉಲ್ಲಂಘನೆ ರೈಲು ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.
ರೈಲ್ವೇ ಮೂಲವೊಂದು, ನದಿ ಸೇತುವೆಯ ಮೇಲೆ ವರದಿಯಾದ ವೇಗದ ಮಿತಿ ಉಲ್ಲಂಘನೆಯ ಪ್ರಕರಣವನ್ನು ಉಲ್ಲೇಖಿಸಿದೆ. ಅಲ್ಲಿ ಚಾಲಕರೊಬ್ಬರು 20 kmph ವೇಗದ ನಿರ್ಬಂಧವನ್ನು ಉಲ್ಲಂಘಿಸಿ 100 kmph ವೇಗದಲ್ಲಿ ರೈಲನ್ನು ಚಾಲನೆ ಮಾಡಿದ್ದಾರೆ. ಸೇತುವೆ ನಿರ್ವಹಣಾ ಹಂತದಲ್ಲಿದ್ದ ಕಾರಣ ದೊಡ್ಡ ಅಪಘಾತವಾಗುವ ಸಾಧ್ಯತೆ ಇತ್ತು.
ಭಾರತದ ಮೊದಲ ಸೆಮಿ-ಹೈ ಸ್ಪೀಡ್ ರೈಲಾಗಿರುವ ಗತಿಮಾನ್ ಎಕ್ಸ್ಪ್ರೆಸ್ನ ಚಾಲಕ ಮತ್ತು ಸಹಾಯಕ ಲೋಕೋ ಪೈಲಟ್ ದೆಹಲಿಯ ಹಜರತ್ ನಿಜಾಮುದ್ದೀನ್ ಮತ್ತು ಯುಪಿಯ ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ ಜಂಕ್ಷನ್ ನಡುವೆ ಗಂಟೆಗೆ 160 ಕಿಮೀ ವೇಗದಲ್ಲಿ ಓಡಿಸಿದ ಮತ್ತೊಂದು ಘಟನೆಯನ್ನು ಮೂಲಗಳು ಉಲ್ಲೇಖಿಸಿವೆ.
ಅದೇ ರೀತಿ, ಕತ್ರಾ ಮತ್ತು ಇಂದೋರ್ ನಡುವೆ ಓಡುವ ಮಾಲ್ವಾ ಎಕ್ಸ್ಪ್ರೆಸ್ನ ಚಾಲಕರು ಕೂಡ ವೇಗದ ಮಿತಿಯನ್ನು ಉಲ್ಲಂಘಿಸಿದ್ದಾರೆ. ಮಂಡಳಿಯು ಜೂನ್ 3 ರಂದು ಎಲ್ಲಾ ವಲಯಗಳಿಗೆ ಸುತ್ತೋಲೆ ಹೊರಡಿಸಿದ್ದು, ಚಾಲಕರು ಮತ್ತು ರೈಲು ನಿರ್ವಾಹಕರಿಗೆ (ಗಾರ್ಡ್) ಎಚ್ಚರಿಕೆಯ ಆದೇಶಗಳನ್ನು ಪರಿಶೀಲಿಸಲು ರಚಿಸಲಾದ ಸಮಿತಿಯ ಸದಸ್ಯರು ಕ್ಷೇತ್ರ ಮಟ್ಟದಲ್ಲಿ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ವೀಡಿಯೊ ಕಾನ್ಫರೆನ್ಸ್ ಮೂಲಕ ಲೋಕೋ ಪೈಲಟ್ಗಳೊಂದಿಗೆ ಸಂವಾದ ನಡೆಸುತ್ತಾರೆ ಎಂದು ಹೇಳಿದೆ.
ಜೂನ್ 5 ರಂದು ನಡೆದ ಸಭೆಯಲ್ಲಿ 180 ಕ್ಕೂ ಹೆಚ್ಚು ಲೋಕೋ ಪೈಲಟ್ಗಳು ಮತ್ತು ಲೋಕೋ ಇನ್ಸ್ಪೆಕ್ಟರ್ಗಳು ಭಾಗವಹಿಸಿದ್ದರು. "ವರ್ಚುವಲ್ ಸಭೆಯಲ್ಲಿ, ಹೆಚ್ಚಿನ ಸಲಹೆಗಳು ಮತ್ತು ಕಾರಣಗಳನ್ನು ಸಂಗ್ರಹಿಸಲಾಗಿದೆ" ಎಂದು ಮೂಲವೊಂದು ತಿಳಿಸಿದೆ, ಚಾಲಕರು ವೇಗದ ಮಿತಿಗಳನ್ನು ಕಡೆಗಣಿಸಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ, ಹಳಿಗಳು ಅಥವಾ ಸೇತುವೆಗಳ ದುರಸ್ತಿ ನಡೆಯುತ್ತಿರುವಾಗ ಮಾತ್ರ ರೈಲು ಮಾರ್ಗಗಳಲ್ಲಿ ವೇಗದ ನಿರ್ಬಂಧಗಳನ್ನು ವಿಧಿಸಲಾಗುತ್ತದೆ ಮತ್ತು ರೈಲ್ವೆಯು ಲೊಕೊ ಪೈಲಟ್ಗಳಿಗೆ ಸಂಪೂರ್ಣ ಮಾರ್ಗ ಚಾರ್ಟ್ಗಳನ್ನು ಒದಗಿಸುತ್ತದೆ.
ವೇಗದ ಮಿತಿಗಳ ಪ್ರಾರಂಭದ ಹಂತಕ್ಕಿಂತ 3 ಕಿಮೀ ಮೊದಲು ವಾಕಿ-ಟಾಕಿಯಲ್ಲಿ ಚಾಲಕನಿಗೆ ರೈಲು ಸಿಬ್ಬಂದಿ ನೆನಪಿಸಬೇಕೆಂದು ಕೆಲವು ಚಾಲಕರು ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement