ಬಿಹಾರ: ಹೊಸದಾಗಿ ನಿರ್ಮಿಸಿದ್ದ ಸೇತುವೆ ಕುಸಿತ; ಯಾವುದೇ ಪ್ರಾಣ ಹಾನಿ ಇಲ್ಲ
ಅರಾರಿಯಾ: ಬಿಹಾರದ ಅರಾರಿಯಾ ಜಿಲ್ಲೆಯ ಪರಾರಿಯಾ ಗ್ರಾಮದಲ್ಲಿ ಬಾಕ್ರಾ ನದಿಗೆ ಹೊಸದಾಗಿ ನಿರ್ಮಿಸಿದ್ದ ಸೇತುವೆಯ ಒಂದು ಭಾಗವು ಮಂಗಳವಾರ ಕುಸಿದಿದೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಸರಕಾರ 12 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆಯನ್ನು ಸಾರ್ವಜನಿಕರ ಸಂಚಾರಕ್ಕೆ ಇನ್ನೂ ಮುಕ್ತವಾಗಿರಲಿಲ್ಲ. ಸೇತುವೆ ಸಂಪರ್ಕಿಸುವ ರಸ್ತೆಗಳು ಇನ್ನೂ ನಿರ್ಮಾಣವಾಗಿಲ್ಲ. ಈ ಸೇತುವೆಯು ಅರಾರಿಯಾ ಜಿಲ್ಲೆಯ ಕುರ್ಸಾ ಕಾಂತಾ ಮತ್ತು ಸಿಕ್ತ್ಯ ಪ್ರದೇಶಗಳನ್ನು ಸಂಪರ್ಕಿಸುತ್ತದೆ.
ಬಾಕ್ರಾ ನದಿಯನ್ನು ವ್ಯಾಪಿಸಿರುವ ಸೇತುವೆ ಕುಸಿಯುವ ಮೊದಲು ಒಂದು ಬದಿಗೆ ವಾಲಿತ್ತು ಎಂದು ವರದಿಯಾಗಿದೆ. ನದಿ ದಡದಲ್ಲಿ ಜಮಾಯಿಸಿದ್ದ ಜನರ ಗುಂಪು ಸೇತುವೆ ಕುಸಿತ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದಿದೆ.
ಪಿಟಿಐ ಜೊತೆ ಮಾತನಾಡಿದ ಅರಾರಿಯಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಮಿತ್ ರಂಜನ್, ಬಾಕ್ರಾ ನದಿಗೆ ಹೊಸದಾಗಿ ನಿರ್ಮಿಸಿದ್ದ ಸೇತುವೆಯ ಒಂದು ಭಾಗವು ಕುಸಿದಿದೆ. ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದರು.
ಘಟನೆ ಕುರಿತು ಪ್ರತಿಕ್ರಿಯಿಸಿದ ಸಿಕ್ತಿ ಶಾಸಕ ವಿಜಯ್ ಕುಮಾರ್ ಮಂಡಲ್, ಸೇತುವೆ ಕುಸಿತಕ್ಕೆ ನಿರ್ಮಾಣ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು. ನಿರ್ಮಾಣ ಸಂಸ್ಥೆಯ ಮಾಲೀಕರ ನಿರ್ಲಕ್ಷ್ಯದಿಂದ ಸೇತುವೆ ಕುಸಿದಿದ್ದು, ಆಡಳಿತ ಮಂಡಳಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ಸೇತುವೆ ಕುಸಿತದ ಪ್ರಕರಣಗಳು ಸಂಭವಿಸಿವೆ. ಮಾರ್ಚ್ನಲ್ಲಿ ಸುಪೌಲ್ ಜಿಲ್ಲೆಯಲ್ಲಿ ಕೋಸಿ ನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದರು ಮತ್ತು 10 ಜನರು ಗಾಯಗೊಂಡರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ