
ಮೆಗಾಸ್ಟಾರ್ ಚಿರಂಜೀವಿಯ ಮಾಜಿ ಅಳಿಯ ಶಿರೀಶ್ ಭಾರಧ್ವಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಿರೀಶ್, ಮೆಗಾಸ್ಟಾರ್ ಚಿರಂಜೀವಿಯ ಪುತ್ರಿ ಶ್ರೀಜಾ ಕೊನಿಡೆಲಾ ಅವರನ್ನು ವಿವಾಹವಾಗಿದ್ದರು.
ಅಸಲಿಗೆ ಈ ವಿವಾಹಕ್ಕೆ ಚಿರಂಜೀವಿ ಅವರ ತೀವ್ರ ವಿರೋಧವಿತ್ತು, ಹಾಗಾಗಿ ಕುಟುಂಬಕ್ಕೆ ತಿಳಿಯದೆ ಶಿರೀಶ್ ಹಾಗೂ ಶ್ರೀಜಾ ವಿವಾಹವಾಗಿದ್ದರು. ಆದರೆ ಬಳಿಕ ಶ್ರಿಜಾ, ಶೀರೀಶ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು, ಇಂದು ಬೆಳಿಗ್ಗೆ ಶಿರೀಶ್ ನಿಧನ ಹೊಂದಿದ್ದಾರೆ.
ಶಿರೀಶ್ ಕಳೆದ ಕೆಲವು ತಿಂಗಳಿನಿಂದಲ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರಂತೆ. ಆದರೆ ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಶಿರೀಶ್ ಹಾಗೂ ಶ್ರೀಜಾ ಕುಟುಂಬದವರನ್ನು ಎದುರು ಹಾಕಿಕೊಂಡು ವಿವಾಹವಾಗಿದ್ದು ಭಾರಿ ವಿವಾದ ಎಬ್ಬಿಸಿತ್ತು. ಆ ಸಮಯದಲ್ಲಿ ಪವನ್ ಕಲ್ಯಾಣ್ ಸೇರಿದಂತೆ ಕೆಲವರಿಂದ ತಮಗೆ ಬೆದರಿಕೆ ಇರುವುದಾಗಿ ಶ್ರೀಜಾ ದೂರು ಸಹ ದಾಖಲಿಸಿದ್ದರು. ಶ್ರೀಜಾ ಹಾಗೂ ಶಿರೀಶ್ ವಿವಾಹದ ಹಿಂದೆ ರಾಜಕೀಯ ಒತ್ತಡವೂ ಇತ್ತು ಎನ್ನಲಾಗಿತ್ತು.
ಶ್ರೀಜಾ ಹಾಗೂ ಶಿರೀಶ್ ಮದುವೆಯಾದ ಕೆಲ ವರ್ಷಗಳಲ್ಲಿ ಅವರಿಗೆ ಮಗಳೊಬ್ಬಳು ಜನಿಸಿದಳು. ಅದಾದ ಬಳಿಕ ಶ್ರೀಜಾ ಶಿರೀಶ್ ಅವರಿಂದ ವಿಚ್ಛೇದನ ಪಡೆದು ಮರು ಮದುವೆ ಆದರು. ಆ ಬಳಿಕ ಶಿರೀಶ್ ಸಹ ಮತ್ತೊಂದು ಮದುವೆಯಾದರು. ವೃತ್ತಿಯಲ್ಲಿ ವಕೀಲರಾಗಿದ್ದ ಶಿರೀಶ್, ಬಿಜೆಪಿ ಪಕ್ಷ ಸೇರ್ಪಡೆಗೊಂಡು ರಾಜಕೀಯ ಪಯಣವನ್ನೂ ಸಹ ಆರಂಭಿಸಿದ್ದರು. ಆದರೆ ರಾಜಕೀಯದಲ್ಲಿ ಹೆಚ್ಚಿಗೇನು ಸಾಧಿಸಲಾಗಲಿಲ್ಲ.
Advertisement