ಮುಂಬೈ: ಮಹಾರಾಷ್ಟ್ರದ ಸಂಸದೆ ಹಾಗೂ ನಟಿ ನವನೀತ್ ರಾಣಾಗೆ ಜೀವಬೆದರಿಕೆ ಸಂದೇಶ ಬಂದಿದ್ದು, ಈ ಸಂಬಂಧ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದ ಅಮರಾವತಿ ಸಂಸದೆಯಾಗಿರುವ ನವನೀತ್ ರಾಣಾ ಅವರ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಆಡಿಯೋ ಸಂದೇಶ ಬಂದಿದ್ದು, ಈ ಸಂಬಂಧ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಎಫ್ಐಆರ್ನ ಪ್ರಕಾರ, ಬೆದರಿಕೆ ಆಡಿಯೋ ಸಂದೇಶ ಕಳುಹಿಸಿರುವ ಅಪರಿಚಿತ ವ್ಯಕ್ತಿ ಪಕ್ಷೇತರ ಸಂಸದೆಯಾಗಿರುವ ನವನೀತ್ ರಾಣಾ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿ ಬೆದರಿಕೆ ಹಾಕಿದ್ದಾನೆ.
"ಮಾರ್ಚ್ 3 ರಂದು ರಾಣಾ ಅವರ ಫೋನ್ ಸಂಖ್ಯೆಗೆ ಈ ಬೆದರಿಕೆ ಸಂದೇಶ ಬಂದಿದ್ದು, ನಂತರ ಅವರ ಆಪ್ತ ಸಹಾಯಕ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ನಿನ್ನೆ ಅಂದರೆ ಮಂಗಳವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಆಡಿಯೋ ಕ್ಲಿಪ್ ನಲ್ಲಿ ನವನೀತ್ ರಾಣಾ ಅವರನ್ನು ಗುರಿಯಾಗಿಸಿದ್ದು ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಜೈ ಶ್ರೀರಾಮ್ ಕೂಗಲೇಬೇಕು ಎಂದು ಹೇಳಿದ್ದ ಸಂಸದೆ
ಈ ಹಿಂದೆ ನವನೀತ್ ರಾಣಾ ಅವರು ಸಂಸತ್ ನಲ್ಲಿ ಅಸಾದುದ್ದೀನ್ ಒವೈಸಿ ಅವರಿಗೆ ಪ್ರತಿಕ್ರಿಯಿಸಿತ್ತಾ, ಈ ದೇಶದಲ್ಲಿ ಇರಬೇಕಾದರೆ ಈ ನೆಲದ ಸಂಸ್ಕೃತಿಯನ್ನು ಗೌರವಿಸಬೇಕು. ಶ್ರೀರಾಮ ನಮ್ಮ ಆರಾಧ್ಯ ದೈವ.. ಹೀಗಾಗಿ ಈ ದೇಶದಲ್ಲಿ ಇರಬೇಕು ಎಂದರೆ ಜೈ ಶ್ರೀರಾಮ್ ಕೂಗಲೇ ಬೇಕು ಎಂದು ಹೇಳಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
Advertisement