ಕೋಲ್ಕತ್ತಾ: ಇ.ಡಿ ಅಧಿಕಾರಿಗಳ ತಂಡದ ಮೇಲೆ ನಡೆಸಿದ ದಾಳಿ ತನಿಖೆಗೆ ಸಂಬಂಧಿಸಿದಂತೆ ಶುಕ್ರವಾರ ಅಮಾನತುಗೊಂಡಿರುವ ಟಿಎಂಸಿ ನಾಯಕ ಶಾಜಹಾನ್ ಶೇಖ್ ಅವರ ಸಂದೇಶ್ಖಾಲಿಯಲ್ಲಿರುವ ನಿವಾಸವನ್ನು ಸಿಬಿಐ ಅಧಿಕಾರಿಗಳು ಶೋಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ಸರ್ಬೇರಿಯಾದ ಅಕುಂಚಿಪಾರಾ ಪ್ರದೇಶದ ಅವರ ಮನೆಯ ಸಮೀಪವಿರುವ ಪ್ರದೇಶಗಳಿಗೂ ಭೇಟಿ ನೀಡಿತು.
ಜನವರಿ 5ರಂದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ಖಾಲಿಯಲ್ಲಿ ಇ.ಡಿ ಅಧಿಕಾರಿಗಳ ಮೇಲೆ ನಡೆಸಿದ ಗುಂಪು ದಾಳಿ ಪ್ರಕರಣದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನಿಂದ ಅಮಾನತುಗೊಂಡಿರುವ ಶೇಖ್ ಅವರನ್ನು ಬಂಧಿಸಲಾಯಿತು. ಪ್ರಕರಣ ಸಂಬಂಧ ಫೆಬ್ರುವರಿ 29ರಂದು ಪಶ್ಚಿಮ ಬಂಗಾಳ ಪೊಲೀಸರು ಶೇಖ್ ಅವರನ್ನು ಬಂಧಿಸಲಾಗಿತ್ತು.
ಸಿಬಿಐ ತಂಡದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಇ.ಡಿ ಅಧಿಕಾರಿಗಳು ಇದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳ ರಕ್ಷಣೆಗಾಗಿ ಕೇಂದ್ರೀಯ ಪಡೆಗಳ ದೊಡ್ಡ ತುಕಡಿಯನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಅಧಿಕಾರಿಗಳು ಶೇಖ್ ಅವರ ಮನೆಯ ಆವರಣವನ್ನು ಪ್ರವೇಶಿಸಲು ಇ.ಡಿ ಹಾಕಿದ್ದ ಸೀಲ್ ಅನ್ನು ತೆರೆದರು. ಅವರು ತಮ್ಮ ತನಿಖೆಗಾಗಿ ವಿಡಿಯೋಗ್ರಫಿ ಮತ್ತು ಈ ಪ್ರದೇಶವನ್ನು ಮ್ಯಾಪಿಂಗ್ ಮಾಡುತ್ತಿದ್ದಾರೆ.
ಗುರುವಾರ, ಶೇಖ್ ಅವರನ್ನು ಕಸ್ಟಡಿಗೆ ಪಡೆದ ನಂತರ, ಸಿಬಿಐ ಸಂದೇಶ್ಖಾಲಿಯಲ್ಲಿರುವ ಅವರ ಮನೆ ಮತ್ತು ಕಚೇರಿಗೆ ಭೇಟಿ ನೀಡಿತು. ಎರಡೂ ಆವರಣಗಳಿಗೆ ಬೀಗ ಹಾಕಿರುವುದನ್ನು ಕಂಡು, ತಂಡವು ಹೊರಡುವ ಮೊದಲು ಹೊರಗಿನಿಂದ ಫೋಟೊ ತೆಗೆದುಕೊಂಡಿತು.
ಅಮಾನತುಗೊಂಡಿರುವ ಟಿಎಂಸಿ ನಾಯಕ ಶಾಹಜಾನ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂದೇಶ್ಖಾಲಿಯ ಹಲವು ಮಹಿಳೆಯರು ಆರೋಪಿಸಿದ್ದು, ಅಕ್ರಮವಾಗಿ ರೈತರ ಭೂಮಿ ವಶಪಡಿಸಿಕೊಂಡ ಆರೋಪವೂ ಅವರ ಮೇಲಿದೆ. ಹೈಕೋರ್ಟ್ ಆದೇಶದ ಮೇರೆಗೆ ಶೇಖ್ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ.
Advertisement