ನವದೆಹಲಿ: ಧ್ರುವ ರಥೀ ಪ್ರಕರಣದಲ್ಲಿ ರಿಟ್ವೀಟ್ ಮಾಡಿದ್ದಕ್ಕಾಗಿ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ದೂರುದಾರರಿಗೆ ಕ್ಷಮೆಯಾಚಿಸಲು ಬಯಸುತ್ತೀರಾ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಳಿದೆ.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, "ನೀವು ಕ್ಷಮೆಯಾಚಿಸಲು ಬಯಸಿದರೆ, ನಿಮ್ಮ ಹಕ್ಕುಗಳು ಮತ್ತು ಅಸಮ್ಮತಿಯನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಪ್ರಸಾರ ಮಾಡಬಹುದು ಎಂದು ಕೇಜ್ರಿವಾಲ್ ಪರ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರನ್ನು ಕೇಳಿತು.
ಇಲ್ಲದಿದ್ದರೆ ಕೇವಲ ರಿಟ್ವೀಟ್ ಮಾಡುವುದು ಕ್ರಿಮಿನಲ್ ಅಪರಾಧವೇ ಅಥವಾ ಅಲ್ಲವೇ ಎಂಬ ಕಾನೂನು ಸಮಸ್ಯೆಯನ್ನು ಪರಿಶೀಲಿಸುವುದಾಗಿ ಪೀಠ ಇದೇ ವೇಳೆ ಸ್ಪಷ್ಟಪಡಿಸಿತು. ಸಮಸ್ಯೆಗೆ ಸರಿಯಾದ ವಿಚಾರಣೆ ಇರುತ್ತದೆ. ನಂತರ ನಾವು ಕಾನೂನು ಅಂಶವನ್ನು ಪರಿಶೀಲಿಸುತ್ತೇವೆ ಎಂದು ಪೀಠ ಹೇಳಿದೆ.
ಬಿಜೆಪಿ ಐಟಿ ಸೆಲ್ ವಿರುದ್ಧ ಆರೋಪ ಮಾಡುವ ವಿಡಿಯೋ ರಿಟ್ವೀಟ್ ಮಾಡಿದ್ದಕ್ಕೆ ಕೇಜ್ರಿವಾಲ್ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಮಧ್ಯಂತರ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಮೇ 13 ರವರೆಗೆ ವಿಸ್ತರಿಸಿದೆ.
ಸೋಮವಾರ ನಡೆದ ವಿಚಾರಣೆ ವೇಳೆ ದೂರುದಾರರ ಪರ ವಕೀಲರು ಆರೋಪಿ ಕೇಜ್ರಿವಾಲ್ ಸಾರ್ವಜನಿಕ ವೇದಿಕೆಯಲ್ಲಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಕಕ್ಷಿದಾರರ ಎಲ್ಲಾ ವಾದಗಳನ್ನು ಗಮನಿಸಿದ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಮೇ 13ಕ್ಕೆ ನಿಗದಿಪಡಿಸಿದೆ.
Advertisement