ಅಹಮದಾಬಾದ್: "ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿಯನ್ನು ಲಾಂಚ್ ಮಾಡಲು ಹಲವಾರು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅವರ ಎಲ್ಲಾ ಪ್ರಯತ್ನಗಳ ವಿಫಲವಾಗಿವೆ. ನೀವು ಅಂತಹ ವ್ಯಕ್ತಿಗೆ ಏಕೆ ಮತ ಹಾಕಬೇಕು?" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ವಲ್ಸಾದ್ ಲೋಕಸಭಾ ಕ್ಷೇತ್ರದ ವನ್ಸಾದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅರಣ್ಯ(ಬುಡಕಟ್ಟು) ಪ್ರದೇಶಗಳಲ್ಲಿ ನಕ್ಸಲೀಯ ಚಟುವಟಿಕೆಗಳು ಹೆಚ್ಚಾಗಲಿದ್ದು, ಶಾಂತಿಯುತ ವಾತಾವರಣ ಮತ್ತು ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಧವಲ್ ಪಟೇಲ್ಗೆ ಮತ ನೀಡಿ ಎಂದು ಮನವಿ ಮಾಡಿದರು.
ಬಿಜೆಪಿ ಆಡಳಿತದ ಅವಧಿಯಲ್ಲಿ ಬುಡಕಟ್ಟು ಜನಾಂಗದ ಅಭಿವೃದ್ಧಿ ಕುರಿತು ಮಾತನಾಡಿದ ಶಾ, "ಬುಡಕಟ್ಟು ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ಮತ್ತು ನಕ್ಸಲಿಸಂ ತೊಡೆದುಹಾಕಲು, ದೂರದ ಹಳ್ಳಿಯ ಪ್ರತಿ ಮನೆ ಬಾಗಿಲಿಗೆ ನೀರು ಸರಬರಾಜು ಮಾಡುವ ಪಕ್ಷದ ಅಭ್ಯರ್ಥಿಗೆ ನೀವು ಮತ ಹಾಕಬೇಕು ಎಂದರು.
ಎಎಪಿಯನ್ನು "ನಗರ ನಕ್ಸಲ್ ಪಕ್ಷ" ಎಂದು ಟೀಕಿಸಿದ ಅಮಿತ್ ಶಾ, ಕಾಂಗ್ರೆಸ್ ಮತ್ತು ಎಎಪಿ ಮೈತ್ರಿಯನ್ನು ಖಂಡಿಸಿದರು ಮತ್ತು ರಾಹುಲ್ ಗಾಂಧಿಯವರು ಕೋವಿಡ್ ಲಸಿಕೆ ಬಗ್ಗೆ ಬುಡಕಟ್ಟು ಸಮುದಾಯಗಳನ್ನು ತಪ್ಪುದಾರಿಗೆಳೆದಿದ್ದಾರೆ ಎಂದು ಆರೋಪಿಸಿದರು.
Advertisement