ಮುಂಬೈ: ಸ್ವತಃ ಬಿಜೆಪಿಯೇ ಬಾಗಿಲು ತೆರೆದು ಸ್ವಾಗತಿಸಿದರೂ ನಾನು NDA ಸೇರುವುದಿಲ್ಲ.. ಬಿಜೆಪಿ 2022ರಲ್ಲಿ ತನ್ನ ಸರ್ಕಾರವನ್ನು ‘ದ್ರೋಹ’ದಿಂದ ಉರುಳಿಸಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಅಲಿಬಾಗ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, “ಬಿಜೆಪಿ 2022ರಲ್ಲಿ ತನ್ನ ಸರ್ಕಾರವನ್ನು ‘ದ್ರೋಹ’ದಿಂದ ಉರುಳಿಸಿದೆ. ಬಿಜೆಪಿಯೇ ತನಗೆ ಬಾಗಿಲು ತೆರೆದರೂ, ನಾನು ತನ್ನ ಹಿಂದಿನ ಮಿತ್ರ ಪಕ್ಷಕ್ಕೆ ಹಿಂತಿರುಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಕೇಂದ್ರದಲ್ಲಿ ‘ಅಂಜುಬುರುಕ’ ಸರ್ಕಾರ ಇರುವುದರಿಂದ ಭಾರತ ಮತ್ತು ಚೀನಾದಲ್ಲಿ ಪಟಾಕಿ ಸಿಡಿಸಲಾಗುವುದು” ಎಂದು ಲೇವಡಿ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಭಾರತದ ಮುಂದಿನ ಪ್ರಧಾನಿಯನ್ನಾಗಿ ಮಾಡಲು ಪಾಕಿಸ್ತಾನ ಉತ್ಸುಕವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಶಿವಸೇನೆ ಮುಖಂಡ, “ಬಿಜೆಪಿ ಮತದಾನದ ಸಮಯದಲ್ಲಿ ಪಾಕಿಸ್ತಾನದ ಹೆಸರನ್ನು ಬಳಸಿಕೊಂಡು ಭಯ ಹುಟ್ಟಿಸಲು, ಪ್ರಚೋದನೆ ಉತ್ತೇಜಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.
ಪೂಂಚ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ ಠಾಕ್ರೆ, “ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅಲ್ಲಿಗೆ ಹೋಗುವುದಿಲ್ಲ. ಮಹಾರಾಷ್ಟ್ರಕ್ಕೆ ಭೇಟಿ ನೀಡುತ್ತಾರೆ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.
ಇನ್ನು ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಮೂರು ವಾರಗಳು ಬಾಕಿ ಇರುವಾಗ ಶನಿವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಬೆಂಗಾವಲು ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು ಓರ್ವ ಯೋಧ ಹುತಾತ್ಮರಾಗಿದ್ದಾರೆ, ನಾಲ್ವರು ಗಾಯಗೊಂಡಿದ್ದಾರೆ.
ಕಳೆದ ವಾರ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ ಅವರು ಉದ್ಧವ್ ಠಾಕ್ರೆ ಅವರನ್ನು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪುತ್ರ ಎಂದು ಗೌರವಿಸುವುದಾಗಿ ಮತ್ತು ಅವರು ಸಂಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡುವ ಮೊದಲ ವ್ಯಕ್ತಿ ಎಂದು ಹೇಳಿದ್ದರು.
Advertisement