
ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಲ್ಲೇ ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, YSRP ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ನಟ ಅಲ್ಲು ಅರ್ಜುನ್ ವಿರುದ್ದ ಆಂಧ್ರ ಪ್ರದೇಶ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
ನಾಳೆ ನಡೆಯಲಿರುವ ಮತದಾನಕ್ಕೆ ನಿನ್ನೆಯೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ನಿನ್ನೆ ವೈಎಸ್ ಆರ್ ಪಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರವಿಚಂದ್ರ ಕಿಶೋರ್ ರೆಡ್ಡಿ ಪರ ಪ್ರಚಾರ ನಡೆಸಿದ್ದರು. ಶನಿವಾರ ಅಲ್ಲು ಅರ್ಜುನ್ ಅವರು ಆಂಧ್ರಪ್ರದೇಶದ ನಂದ್ಯಾಲ ಕ್ಷೇತ್ರದಿಂದ ವೈಎಸ್ಆರ್ಸಿಪಿಯ ಅಭ್ಯರ್ಥಿಯಾಗಿರುವ ರವಿಚಂದ್ರ ಕಿಶೋರ್ ರೆಡ್ಡಿ ಅವರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ನಂದ್ಯಾಲಕ್ಕೆ ತೆರಳಿದ್ದರು.
ಈ ವೇಳೆ ಅಲ್ಲು ಅರ್ಜುನ್ ಅಭಿಮಾನಿಗಳೂ ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದೇ ವಿಚಾರವಾಗಿ ಆಂಧ್ರಪ್ರದೇಶದಲ್ಲಿ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಪೂರ್ವಾನುಮತಿಯಿಲ್ಲದೇ ಚುನಾವಣೆ ಸಮಯದಲ್ಲಿ ಇಷ್ಟು ಜನ ಸೇರಿಸುವುದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಅಧಿಕಾರಿಗಳ ಆದೇಶ ಮೇರೆಗೆ ನಂದ್ಯಾಲ ಗ್ರಾಮೀಣ ತಹಶಿಲ್ದಾರ್ ಅವರು ಅಲ್ಲು ಅರ್ಜುನ್ ಹಾಗೂ ರವಿಚಂದ್ರ ಕಿಶೋರ್ ರೆಡ್ಡಿ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿರುವುದನ್ನು ನಂದ್ಯಾಲ್ ಗ್ರಾಮೀಣ ತಹಶಿಲ್ದಾರ್ ಅವರು ಖಚಿತಪಡಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಕುರಿತು ಮಾತನಾಡಿದ ನಟ ಅಲ್ಲು ಅರ್ಜುನ್, ನಾನು ಯಾವುದೇ ಪಕ್ಷದ ಪರ ಅಲ್ಲ. ಕಿಶೋರ್ ರೆಡ್ಡಿ ನನ್ನ ಸ್ನೇಹಿತರಾಗಿರುವುದರಿಂದ ಪ್ರಚಾರಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಮೇ 13ರಂದು ಅಂದರೆ ನಾಳೆ ಮತದಾನ ನಡೆಯಲಿದೆ.
Advertisement