ಗುಜರಾತ್: ಆಟವಾಡಲು ಕಾರಿಗೆ ಹತ್ತಿದ್ದ ನಾಲ್ವರು ಮಕ್ಕಳು ಉಸಿರುಗಟ್ಟಿ ದುರಂತ ಸಾವು!
ಗುಜರಾತ್ನ ಅಮ್ರೇಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಕಾರಿನೊಳಗೆ ನಾಲ್ಕು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ಸೂತಕ ಛಾಯೆ ಮೂಡಿಸಿದೆ. ಘಟನೆ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ರಂಧಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕೃಷಿ ಕೂಲಿ ಕಾರ್ಮಿಕ ದಂಪತಿಯ ಮಕ್ಕಳು ಬಲಿಯಾಗಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಚಿರಾಗ್ ದೇಸಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೆಳಗ್ಗೆ 7.30ರ ಸುಮಾರಿಗೆ ಕಾರು ನಿಲ್ಲಿಸಿ ಭರತ್ ಮಂದಾನಿ ಎಂಬುವವರ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದರು. ಇದೇ ವೇಳೆ ನಾಲ್ವರು ಮಕ್ಕಳು ತಮ್ಮ ಮನೆ ಬಳಿ ನಿಲ್ಲಿಸಿದ್ದ ತೋಟದ ಮಾಲೀಕರ ಕಾರಿಗೆ ಹತ್ತಿದ್ದಾರೆ. ನಾಲ್ವರು 2 ರಿಂದ 7 ವರ್ಷದೊಳಗಿನವರಾಗಿದ್ದು, ಕಾರನ್ನು ಒಳಗಿನಿಂದ ಲಾಕ್ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಾರು ನಿಲ್ಲಿಸಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಶನಿವಾರ ಸಂಜೆ ಮಕ್ಕಳ ಪೋಷಕರು ಮತ್ತು ಕಾರು ಮಾಲೀಕರು ಹಿಂದಿರುಗಿದಾಗ ಮೃತದೇಹಗಳನ್ನು ಕಂಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಅಮ್ರೇಲಿ (ತಾಲೂಕಾ) ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ