
ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ರಾಯಭಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಕೆನಡಾ ಸರ್ಕಾರದ ನಡೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಇದೀಗ ಈ ವಿಚಾರವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಕೆನಡಾದ ಹೈಕಮಿಷನ್ಗೆ ಸಮನ್ಸ್ ನೀಡಿದೆ.
ಈ ವಿಚಾರವಾಗಿ ಕೆನಡಾದ ರಾಯಭಾರಿ ಕಚೇರಿ ಸಮರ್ಥನೆ, ಸ್ಪಷ್ಟನೆ ನೀಡಲು ಮುಂದಾಗಿದ್ದು, ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರು ತನಿಖೆಯಲ್ಲಿ 'ಹಿತಾಸಕ್ತ ವ್ಯಕ್ತಿಗಳು' ಎಂದು ಸೂಚಿಸುವ ಕೆನಡಾ ಸಂವಹನವನ್ನು ತಿರಸ್ಕರಿಸಿದೆ. ಇದಕ್ಕೂ ಮುನ್ನ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೆನಡಾದಲ್ಲಿ ನಡೆದ ತನಿಖೆಯ ಸಂದರ್ಭದಲ್ಲಿ ಭಾರತೀಯ ರಾಯಭಾರಿ ಸಂಜಯ್ ಕುಮಾರ್ ವರ್ಮಾ ವಿರುದ್ಧ ಟ್ರೂಡೊ ಸರ್ಕಾರವು ಕೆಲವು ಅಸಂಬದ್ಧ ಆರೋಪಗಳನ್ನು ಮಾಡಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ತೀವ್ರವಾಗಿ ಟೀಕಿಸಿದ್ದರು. ಇದೀಗ ವಿದೇಶಾಂಗ ಸಚಿವಾಲಯ ಕೆನಡಾದ ಡೆಪ್ಯುಟಿ ಹೈಕಮಿಷನರ್ ಸ್ಟೀವರ್ಟ್ ವೀಲರ್ ಅವರನ್ನು ಕರೆಸಿ ಸ್ಪಷ್ಟನೆ ಕೇಳಿದೆ.
ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರು ಮತ್ತು ಹಿಂದೂ ಸಮುದಾಯದ ಮುಖಂಡರಿಗೆ ಕಿರುಕುಳ ನೀಡುವ, ಬೆದರಿಕೆ ಹಾಕುವ ಉಗ್ರಗಾಮಿಗಳು ಮತ್ತು ಭಯೋತ್ಪಾದಕರಿಗೆ ಟ್ರೂಡೊ ಸರ್ಕಾರವು ವೇದಿಕೆ ಒದಗಿಸುತ್ತಿದೆ ಎಂದು MEA ಆರೋಪಿಸಿದೆ.
ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್ 2023ರಲ್ಲಿ ಕೆಲವು ಆರೋಪಗಳನ್ನು ಮಾಡಿದ ನಂತರ, ಕೆನಡಾ ಸರ್ಕಾರಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಹಂಚಿಕೊಳ್ಳುವಂತೆ ಪದೇ ಪದೇ ವಿನಂತಿಸಿದರೂ ಭಾರತದೊಂದಿಗೆ ಪುರಾವೆಗಳನ್ನು ಹಂಚಿಕೊಳ್ಳಲು ಕೆನಡಾ ವಿಫಲವಾಗಿದೆ. ಇತ್ತೀಚಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲದ ಆರೋಪಗಳನ್ನು ಮಾಡುವುದನ್ನು ಕೆನಡಾ ಅನುಸರಿಸುತ್ತದೆ. ಇದು ತನಿಖೆಯ ನೆಪದಲ್ಲಿ, ರಾಜಕೀಯ ಲಾಭಕ್ಕಾಗಿ ಭಾರತಕ್ಕೆ ಮಸಿ ಬಳಿಯುವ ಉದ್ದೇಶಪೂರ್ವಕ ತಂತ್ರವಾಗಿದೆ ಎಂಬ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ ಎಂದು ಎಂಇಎ ಹೇಳಿದೆ.
ಭಾರತದ ಬಗ್ಗೆ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹಗೆತನವು ಸ್ವಲ್ಪ ಸಮಯದಿಂದ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಭಾರತ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 2018ರಲ್ಲಿ ಟ್ರುಡೊ ಭಾರತ ಭೇಟಿಯು ನಿರ್ದಿಷ್ಟ ಮತದಾರರ ಗುಂಪುಗಳೊಂದಿಗೆ ಒಲವು ತೋರುವ ಗುರಿಯನ್ನು ಹೊಂದಿತ್ತು. ಆದರೆ ಅದಕ್ಕೆ ಅಂತಿಮವಾಗಿ ಹಿನ್ನಡೆಯಾಯಿತು. ಇದಲ್ಲದೆ, ಅವರ ಸಂಪುಟವು ಭಾರತಕ್ಕೆ ಸಂಬಂಧಿಸಿದ ಉಗ್ರಗಾಮಿ ಮತ್ತು ಪ್ರತ್ಯೇಕತಾವಾದಿ ಅಜೆಂಡಾಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡಿದೆ ಎಂದು ಎಂಇಎಂ ಆರೋಪಿಸಿದೆ.
ಇತ್ತೀಚಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಗಣನೀಯವಾಗಿ ಹೆಚ್ಚಿದೆ. ಇತ್ತೀಚಿನ ವಿವಾದದ ನಂತರ, ಮತ್ತೊಮ್ಮೆ ಎರಡೂ ದೇಶಗಳ ನಡುವಿನ ಸಂಬಂಧವು ಅಸಹಜವಾಗಿ ಹದಗೆಡುತ್ತಿದೆ.
Advertisement