
ನವದೆಹಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್ನ ಆಶ್ರಮದಲ್ಲಿ ತಮ್ಮ ಮಕ್ಕಳನ್ನು ಅಕ್ರಮವಾಗಿ ಇಟ್ಟಕೊಳ್ಳಲಾಗಿದೆ ಎನ್ನುವ ಕುರಿತು ಸದ್ಗುರು ಜಗ್ಗಿ ವಾಸುದೇವ್ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ತಮ್ಮ ಮಕ್ಕಳಿಬ್ಬರಿಗೆ ಮಂಕು ಬೂದಿ ಎರಚಿ, ಆಶ್ರಮದಲ್ಲಿ ಜಗ್ಗಿ ವಾಸುದೇವ್ ಅಕ್ರಮವಾಗಿ ಇರಿಸಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು (ಮಕ್ಕಳ ತಾಯಿ) ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಮದ್ರಾಸ್ ಹೈಕೋರ್ಟ್ನಲ್ಲೂ ದೂರು ದಾಖಲಿಸಿದ್ದರಿಂದ ದಾಳಿಗೆ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸದ್ಗುರು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು. ಕೋರ್ಟ್ಗೆ ಸಲ್ಲಿಕೆಯಾದ ವರದಿ ಪ್ರಕಾರ ಪ್ರಕರಣವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಸದ್ಗುರು ಅವರು ಕೊಯಮತ್ತೂರಿನ ಇಶಾ ಫೌಂಡೇಶನ್ಗೆ ಸೇರಿದ ಆಶ್ರಮದಲ್ಲಿ ಯಾರನ್ನೂ ಅಕ್ರಮವಾಗಿ ಇರಿಸಿಲ್ಲ ಎನ್ನುವುದು ಅಲ್ಲಿನ ವಾಸಿಗಳೇ ಖುದ್ದು ನೀಡಿರುವ ಹೇಳಿಕೆಯಿಂದ ಖಚಿತವಾಗಿದೆ. ಅಕ್ರಮವಾಗಿ ಇರಿಸಿರುವ ಬಗ್ಗೆ ಪೂರಕ ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಪ್ರಕರಣ ವಜಾಗೊಳಿಸಲಾಗಿದೆ ಎಂದು ಆದೇಶ ತಿಳಿಸಿದೆ.
ನನ್ನ ಹಿರಿಯ ಮಕಳು ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಪಿಜಿ ಪದವಿ ಪಡೆದಿದ್ದು, ಕಿರಿಯ ಪುತ್ರಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾಳೆ. ಇಬ್ಬರೂ ಯೋಗ ತರಗತಿಗಳಿಗೆ ಹೋದಾಗ ಬ್ರೈನ್ ವಾಶ್ ಮಾಡಿ ಇಶಾ ಫೌಂಡೇಶನ್ ಇರಿಸಿಕೊಂಡಿದೆ. ಅವರ ತಲೆಯನ್ನು ಕೆಡಿಸಿ ಮಾನಸಿಕವಾಗಿ ನಿಯಂತ್ರಿಸುವ ಮೂಲಕ ಸನ್ಯಾಸಿಗಳನ್ನಾಗಿ ಮಾಡಲಾಗಿದೆ. ನಾವು ಅವರನ್ನು ಸಂಪರ್ಕಿಸದಂತೆ ಮಾಡಲಾಗಿದೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದರು.
ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ತಮಿಳುನಾಡು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು. ಆನಂತರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿತ್ತು. ಇದನ್ನು ಪ್ರಶ್ನಿಸಿ ಇಶಾ ಫೌಂಡೇಶನ್ ಸುಪ್ರೀಂಕೋರ್ಟ್ ಮೆಟ್ಟಿಲು ಏರಿತ್ತು.
ಅರ್ಜಿ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದೂ ಅಲ್ಲದೇ ವರದಿಯನ್ನು ಸಲ್ಲಿಸುವಂತೆ ಕೊಯಮತ್ತೂರು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿತ್ತು. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಆಶ್ರಮಕ್ಕೆ ತೆರಳಿದ್ದ ಪೊಲೀಸರು ವರದಿಯನ್ನು ಪಡೆದಿದ್ದರು. ಅಲ್ಲಿ ಇರುವವರ ಹೇಳಿಕೆ ದಾಖಲಿಸಿಕೊಂಡಿದ್ದರು.
ಅಲ್ಲಿದ್ದವರಲ್ಲಿ ಬಹುತೇಕರು ಸ್ವಇಚ್ಛೆಯಿಂದ ಬಂದಿರುವುದಾಗಿ ಹೇಳಿಕೆ ನೀಡಿದ್ದರು. ಮಹಿಳೆಯ ಇಬ್ಬರು ಪುತ್ರಿಯರೂ ಕೂಡ ಹೇಳಿಕೆ ದಾಖಲಿಸಿದ್ದರು. ಆಶ್ರಮದಲ್ಲಿ ಸುರಕ್ಷಿತ ಹಾಗೂ ಆರೋಗ್ಯದಿಂದ ಇದ್ದಾರೆ ಎನ್ನುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಲ್ಲದೇ ಫೌಂಡೇಶನ್ ನಲ್ಲಿ ಒಂದೂವರೆ ದಶಕದಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣಗಳು, ಅದರಲ್ಲಿ ಐದು ಪ್ರಕರಣ ವಿಲೇವಾರಿ ಆಗಿರುವುದು, ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿ ಈವರೆಗೂ ಕಾಣೆಯಾಗಿರುವ ಅಂಶವನ್ನೂ ಪ್ರಸ್ತಾಪಿಸಲಾಗಿತ್ತು.
ವಸ್ತುಸ್ಥಿತಿಯ ವರದಿ ಆಧರಿಸಿ ಮದ್ರಾಸ್ ಹೈಕೋರ್ಟ್ನಲ್ಲಿ ದಾಖಲಾಗಿದ್ದ ಎಲ್ಲಾ ಕ್ರಿಮಿನಲ್ ಮೊಕದ್ದಮೆ ಸೇರಿ ಇತರೆ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಇದರಿಂದ ಕೆಲ ದಿನಗಳಿಂದ ಇಶಾ ಫೌಂಡೇಶನ್ನಲ್ಲಿ ಉಂಟಾಗಿದ್ದ ಆತಂಕಕ್ಕೆ ತೆರೆ ಬಿದ್ದಂತಾಗಿದೆ.
Advertisement