ಇಂಡಿಯಾ ಮೈತ್ರಿಕೂಟ: ಎಎಪಿ ಜೊತೆ ಸೀಟು ಹಂಚಿಕೆಯ ಮಾತುಕತೆ ಸಕಾರಾತ್ಮಕವಾಗಿದೆ- ಕಾಂಗ್ರೆಸ್

ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಡುವಿನ ಮೊದಲ ಔಪಚಾರಿಕ ಸೀಟು ಹಂಚಿಕೆ ಮಾತುಕತೆ ಸೋಮವಾರ ಸಕಾರಾತ್ಮಕವಾಗಿ ಆರಂಭಗೊಂಡಿದ್ದು, ದೆಹಲಿ ಮತ್ತು ಪಂಜಾಬ್‌ನಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಒಟ್ಟಾಗಿ ಹೋರಾಡಲು ನಿರ್ಧರಿಸಿವೆ.
ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕರು
ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕರು

ನವದೆಹಲಿ: ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಡುವಿನ ಮೊದಲ ಔಪಚಾರಿಕ ಸೀಟು ಹಂಚಿಕೆ ಮಾತುಕತೆ ಸೋಮವಾರ ಸಕಾರಾತ್ಮಕವಾಗಿ ಆರಂಭಗೊಂಡಿದ್ದು, ದೆಹಲಿ ಮತ್ತು ಪಂಜಾಬ್‌ನಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಒಟ್ಟಾಗಿ ಹೋರಾಡಲು ನಿರ್ಧರಿಸಿವೆ.

ಎರಡೂ ಪಕ್ಷಗಳು ಮೊದಲ ಸುತ್ತಿನ ಮಾತುಕತೆಯನ್ನು 'ಸಕಾರಾತ್ಮಕ ಮತ್ತು ಫಲಪ್ರದ' ಎಂದು ಬಣ್ಣಿಸಿದ್ದು, ಒಪ್ಪಂದವನ್ನು ಅಂತಿಮಗೊಳಿಸಲು ಮತ್ತೊಮ್ಮೆ ಭೇಟಿಯಾಗುವುದಾಗಿ ಹೇಳಿವೆ.

ಮೂಲಗಳ ಪ್ರಕಾರ, ಸೋಮವಾರ ನಡೆದ ಸಭೆಯಲ್ಲಿ ವಿವಿಧ ರಾಜ್ಯಗಳಲ್ಲಿ ಮೈತ್ರಿಯ ಅನಿಶ್ಚಿತತೆಗಳ ಮೇಲೆ ಹೆಚ್ಚು ಗಮನಹರಿಸಿದ್ದು, ಮುಂದಿನ ಸಭೆಗಳಲ್ಲಿ ಸೀಟು ಹಂಚಿಕೆ ಸೂತ್ರವನ್ನು ನಿರ್ಧರಿಸುವ ಸಾಧ್ಯತೆಯಿದೆ.

ಸಭೆಯಲ್ಲಿ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ, ಪಕ್ಷದ ರಾಷ್ಟ್ರೀಯ ಮೈತ್ರಿ ಸಮಿತಿ (ಎನ್‌ಎಸಿ) ಸದಸ್ಯರಾದ ಮುಕುಲ್ ವಾಸ್ನಿಕ್ ಮತ್ತು ಅಶೋಕ್ ಗೆಹ್ಲೋಟ್ ಉಪಸ್ಥಿತರಿದ್ದರು. ಎಎಪಿ ನಿಯೋಗದಲ್ಲಿ ದೆಹಲಿ ಕ್ಯಾಬಿನೆಟ್ ಸಚಿವರಾದ ಅತಿಶಿ ಮರ್ಲೆನಾ, ಸೌರಭ್ ಭಾರದ್ವಾಜ್ ಮತ್ತು ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಇದ್ದರು.

ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಕುಲ್ ವಾಸ್ನಿಕ್, ಸೀಟು ಹಂಚಿಕೆ ಮತ್ತು ಮುಂಬರುವ ಚುನಾವಣೆಯ ಇತರ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಶೀಘ್ರದಲ್ಲೇ ಅಂತಿಮ ಸೂತ್ರವನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು. 

'ನಾವು ನಡೆಸಿದ ಸಭೆಯು ತುಂಬಾ ಉತ್ತಮವಾಗಿ ಮೂಡಿಬಂದಿದೆ. ಅರವಿಂದ್ ಕೇಜ್ರಿವಾಲ್ ಪರವಾಗಿ ನಮ್ಮೊಂದಿಗೆ ಚರ್ಚೆಗೆ ಹಿರಿಯ ಆಪ್ ನಾಯಕರನ್ನು ಕಳುಹಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷರು ರಚಿಸಿರುವ ಎನ್‌ಎಸಿಯು ಎಎಪಿ ನಾಯಕರೊಂದಿಗೆ ಚರ್ಚೆ ನಡೆಸಿದ್ದು, ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ವಾಸ್ನಿಕ್ ಹೇಳಿದ್ದಾರೆ. 

ಎಎಪಿ ನಾಯಕ ಭಾರದ್ವಾಜ್ ಮಾತನಾಡಿ, 'ಇಂಡಿಯಾ ಮೈತ್ರಿಕೂಟದ ಸ್ಥಾನಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಈ ಬಗ್ಗೆ ನಾವು ಸಂಪೂರ್ಣ  ಸಕಾರಾತ್ಮಕವಾಗಿದ್ದೇವೆ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com