ಸರ್ಕಾರ ತಕ್ಷಣವೇ 10 ವರ್ಷಗಳಿಗೊಮ್ಮೆ ನಡೆಸುವ ಜನಗಣತಿ ಜೊತೆಗೆ ಜಾತಿಗಣತಿ ಪ್ರಾರಂಭಿಸಬೇಕು: ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ

1881 ರಿಂದ ಭಾರತ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸುತ್ತಿದೆ. ಯುದ್ಧಗಳು, ತುರ್ತು ಪರಿಸ್ಥಿತಿಗಳು ಅಥವಾ ಇತರ ಬಿಕ್ಕಟ್ಟುಗಳ ಸಮಯದಲ್ಲಿಯೂ ಸಹ ಇದನ್ನು ನಡೆಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: 10 ವರ್ಷಗಳಿಗೊಮ್ಮೆ ನಡೆಸುವ ಜನಗಣತಿ ಮತ್ತು ಜಾತಿಗಣತಿಯನ್ನು ತಕ್ಷಣವೇ ಪ್ರಾರಂಭಿಸಬೇಕು. ವಿಳಂಬದಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಕಲ್ಯಾಣ ಯೋಜನೆಗಳಿಂದ ಹೊರಗುಳಿಯುತ್ತಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸದನದಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, 1881 ರಿಂದ ಭಾರತ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸುತ್ತಿದೆ. ಯುದ್ಧಗಳು, ತುರ್ತು ಪರಿಸ್ಥಿತಿಗಳು ಅಥವಾ ಇತರ ಬಿಕ್ಕಟ್ಟುಗಳ ಸಮಯದಲ್ಲಿಯೂ ಸಹ ಇದನ್ನು ನಡೆಸಲಾಗಿದೆ ಎಂದರು.

1931ರಲ್ಲಿ, ಜನಗಣತಿಯ ಜೊತೆಗೆ ಜಾತಿಗಣತಿಯನ್ನು ನಡೆಸಲಾಗುತ್ತಿತ್ತು. 1931ರ ಜನಗಣತಿಗೆ ಸ್ವಲ್ಪ ಮೊದಲು, ಮಹಾತ್ಮಾ ಗಾಂಧಿಯವರು 'ನಮ್ಮ ಆರೋಗ್ಯದ ಸ್ಥಿತಿಗತಿ ತಿಳಿಯಲು ನಿಯಮಿತ ವೈದ್ಯಕೀಯ ತಪಾಸಣೆಗಳಂತೆಯೇ, ಜನಗಣತಿಯು ಒಂದು ರಾಷ್ಟ್ರಕ್ಕೆ ಅತ್ಯಂತ ಮುಖ್ಯವಾದ ತಪಾಸಣೆಯಾಗಿದೆ' ಎಂದು ಹೇಳಿದ್ದರು ಎಂದು ಖರ್ಗೆ ಹೇಳಿದರು.

ಜನಗಣತಿಯು ಒಂದು ನಿರ್ಣಾಯಕ ಪ್ರಕ್ರಿಯೆಯಾಗಿದ್ದು, ಜನಸಂಖ್ಯೆಯ ಬಗ್ಗೆ ಮಾತ್ರವಲ್ಲದೆ ಉದ್ಯೋಗ, ಕುಟುಂಬ ರಚನೆಗಳು, ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಮತ್ತು ಇತರ ಹಲವಾರು ಪ್ರಮುಖ ಅಂಶಗಳ ಬಗ್ಗೆಯೂ ಡೇಟಾವನ್ನು ಸಂಗ್ರಹಿಸುವ ಹೆಚ್ಚಿನ ಸಂಖ್ಯೆಯ ಜನರನ್ನು ಇದು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

ಎರಡನೇ ಮಹಾಯುದ್ಧ ಮತ್ತು 1971-72ರ ಭಾರತ-ಪಾಕಿಸ್ತಾನ ಯುದ್ಧದಂತಹ ಪ್ರಮುಖ ಘಟನೆಗಳ ಸಮಯದಲ್ಲಿಯೂ ಸಹ ಜನಗಣತಿಯನ್ನು ನಡೆಸಲಾಯಿತು. ಆದರೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ಜನಗಣತಿ ನಡೆಸುವಲ್ಲಿ ದಾಖಲೆಯ ವಿಳಂಬ ಮಾಡಿರುವುದು ದುರದೃಷ್ಟಕರ ಎಂದರು.

ಮಲ್ಲಿಕಾರ್ಜುನ ಖರ್ಗೆ
ಬಜೆಟ್‌ನಲ್ಲಿ ಕೇವಲ 574 ಕೋಟಿ ರೂ ಹಂಚಿಕೆ; ಈ ವರ್ಷವೂ ಜನಗಣತಿ ಅನುಮಾನ

ಸರ್ಕಾರವು ಈಗಾಗಲೇ ಪರಿಶಿಷ್ಟ ಜಾತಿಗಳು (SC) ಮತ್ತು ಪರಿಶಿಷ್ಟ ಪಂಗಡಗಳ (ST) ದತ್ತಾಂಶವನ್ನು ಸಂಗ್ರಹಿಸುತ್ತಿರುವುದರಿಂದ ಸಾಮಾನ್ಯ ಜನಗಣತಿಯ ಜೊತೆಗೆ ಜಾತಿ ಜನಗಣತಿಯೂ ಸಾಧ್ಯವಾಗುತ್ತದೆ. ಇದರಿಂದ ಇತರ ಜಾತಿಗಳ ದತ್ತಾಂಶವನ್ನೂ ಸಂಗ್ರಹಿಸಬಹುದು. ಆದರೆ, ಸರ್ಕಾರ ಜನಗಣತಿ ಮತ್ತು ಜಾತಿ ಜನಗಣತಿ ಎರಡರ ಬಗ್ಗೆಯೂ ಮೌನವಾಗಿದೆ ಎಂದು ಖರ್ಗೆ ಹೇಳಿದರು.

ಕೋವಿಡ್ ಹೊರತಾಗಿಯೂ ವಿಶ್ವದ ಶೇ 81ರಷ್ಟು ದೇಶಗಳು ಜನಗಣತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಭಾರತದಲ್ಲಿ ಜನಗಣತಿಗೆ ಸಂಬಂಧಿಸಿದಂತೆ ಸರ್ಕಾರವು ಯಾವುದೇ ಸ್ಪಷ್ಟ ಹೇಳಿಕೆಯನ್ನು ನೀಡುತ್ತಿಲ್ಲ ಎಂದು ದೂರಿದರು.

ಈ ವರ್ಷದ ಬಜೆಟ್‌ನಲ್ಲಿ ಜನಗಣತಿಗೆ ಕೇವಲ 575 ಕೋಟಿ ರೂ.ಗಳನ್ನು ಮಾತ್ರ ಮೀಸಲಿಡಲಾಗಿದೆ. ಇದು ಸರ್ಕಾರಕ್ಕೆ ಜನಗಣತಿ ನಡೆಸಲು ಇಷ್ಟವಿಲ್ಲ ಎಂಬುದನ್ನು ತೋರಿಸುತ್ತದೆ. ಜನಗಣತಿ ನಡೆಸುವುದನ್ನು ವಿಳಂಬ ಮಾಡುವುದು ಗಂಭೀರ ಪರಿಣಾಮಗಳಿಗೆ ಕಾಣವಾಗುತ್ತದೆ. ನಿಖರ ಮತ್ತು ನವೀಕರಿಸಿದ ಡೇಟಾ ಇಲ್ಲದೆ, ನೀತಿಗಳು ಅನಿಯಂತ್ರಿತ ಮತ್ತು ನಿಷ್ಪರಿಣಾಮಕಾರಿಯಾಗುತ್ತವೆ ಎಂದು ಅವರು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ
ಸರ್ಕಾರ ಆದಷ್ಟು ಬೇಗ ಜನಗಣತಿ ನಡೆಸಬೇಕು: ರಾಜ್ಯಸಭೆಯಲ್ಲಿ ಸೋನಿಯಾ ಗಾಂಧಿ ಆಗ್ರಹ

ಗ್ರಾಹಕ ಸಮೀಕ್ಷೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ, ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮದಂತಹ ಹಲವಾರು ನಿರ್ಣಾಯಕ ಸಮೀಕ್ಷೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳು ಜನಗಣತಿ ದತ್ತಾಂಶವನ್ನು ಅವಲಂಬಿಸಿವೆ. ಜನಗಣತಿಯಲ್ಲಿನ ವಿಳಂಬದಿಂದಾಗಿ, ಹೆಚ್ಚಿನ ಸಂಖ್ಯೆಯ ಜನರು ಕಲ್ಯಾಣ ಯೋಜನೆಗಳಿಂದ ಹೊರಗುಳಿಯುತ್ತಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರ ವಿಶ್ವಾಸಾರ್ಹ ಮತ್ತು ನವೀಕೃತ ದತ್ತಾಂಶವಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆದ್ದರಿಂದ, 10 ವರ್ಷಗಳಿಗೊಮ್ಮೆ ನಡೆಸುವ ಜನಗಣತಿಯನ್ನು ತಕ್ಷಣವೇ ಪ್ರಾರಂಭಿಸಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಜಾತಿ ಜನಗಣತಿ ಮತ್ತು ಜನಗಣತಿಯನ್ನು ಆದಷ್ಟು ಬೇಗ ನಡೆಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com