
ಕೋಲ್ಕತ್ತಾ: ರಾಜ್ಯದಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಜೈನ ಸಮುದಾಯದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಜನರು ಮತ್ತು ಅವರ ಆಸ್ತಿಯನ್ನು ರಕ್ಷಿಸುವುದಾಗಿ ಹೇಳಿದ್ದಾರೆ.
'ವಕ್ಫ್ ಕಾಯ್ದೆ ಜಾರಿಗೆ ಬಂದಿರುವುದರಿಂದ ನೀವು ನೊಂದಿದ್ದೀರಿ ಎಂದು ನನಗೆ ತಿಳಿದಿದೆ. ನಮ್ಮ ಮೇಲೆ ನಂಬಿಕೆ ಇಡಿ. ಬಂಗಾಳದಲ್ಲಿ ಒಡೆದು ಆಳುವಂತಹ ಯಾವುದೇ ಘಟನೆ ನಡೆಯುವುದಿಲ್ಲ. ಬಾಂಗ್ಲಾದೇಶದ ಪರಿಸ್ಥಿತಿಯನ್ನು ನೋಡಿ. ಈ (ವಕ್ಫ್ ಮಸೂದೆ) ಈಗ ಅಂಗೀಕಾರವಾಗಬಾರದಿತ್ತು' ಎಂದು ಅವರು ಹೇಳಿದರು.
ಸಂಸತ್ತಿನ ಎರಡೂ ಸದನಗಳಲ್ಲಿ ನಡೆದ ಸರಣಿ ಚರ್ಚೆಗಳ ನಂತರ ಲೋಕಸಭೆಯಲ್ಲಿ ಗುರುವಾರ (ಏ. 03) ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು ಮತ್ತು ಶುಕ್ರವಾರ (ಏ. 04) ಮುಂಜಾನೆ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಮಸೂದೆಗೆ ತಮ್ಮ ಒಪ್ಪಿಗೆ ನೀಡಿದರು.
Advertisement