
ನವದೆಹಲಿ: ಭಾರತ, ಭಾರತೀಯ ಸೈನಿಕರು ಮತ್ತು ಹಿಂದೂ ಧರ್ಮದ ಕುರಿತು ಟೀಕೆ ಮಾಡಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಮುನೀರ್ ಗೆ ತಿರುಗೇಟು ನೀಡಿರುವ ಭಾರತೀಯ ವಿದೇಶಾಂಗ ಇಲಾಖೆ, 'ಖಾಲಿ ಮಾಡುವುದೊಂದೇ ನಿಮಗೂ ಕಾಶ್ಮೀರಕ್ಕೂ ಇರುವ ಸಂಬಂಧ' ಎಂದು ಖಡಕ್ ತಿರುಗೇಟು ನೀಡಿದೆ.
ಕಾಶ್ಮೀರ ಇಸ್ಲಾಮಾಬಾದ್ನ "ಕಣ್ಣಿನ ರಕ್ತನಾಳ" ಎಂದು ಹೇಳಿಕೊಂಡ ಪಾಕಿಸ್ತಾನಿ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಭಾರತ ತಳ್ಳಿಹಾಕಿದ್ದು, ಪಾಕಿಸ್ತಾನದ "ಕಾಶ್ಮೀರದೊಂದಿಗಿನ ಏಕೈಕ ಸಂಬಂಧ" ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶವನ್ನು ಖಾಲಿ ಮಾಡುವುದು ಮಾತ್ರವೇ ಎಂದು ವಿದೇಶಾಂಗ ಸಚಿವಾಲಯ (MEA) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಕಣ್ಣಿನ ರಕ್ತನಾಳದಲ್ಲಿ ವಿದೇಶಿಯರಿರುವುದು ಹೇಗೆ ಸಾಧ್ಯ? ಇದು ಭಾರತದ ಕೇಂದ್ರಾಡಳಿತ ಪ್ರದೇಶ. ಪಾಕಿಸ್ತಾನದೊಂದಿಗಿನ ಅದರ ಏಕೈಕ ಸಂಬಂಧವು ಆ ದೇಶವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ತೊರೆಯುವುದು ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.
ಇಂದು ಪಾಕಿಸ್ತಾನದಲ್ಲಿ ನಡೆದ ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿಯರ ಕುರಿತ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜನರಲ್ ಮುನೀರ್, '1947 ರಲ್ಲಿ ವಿಭಜನೆಗೆ ಆಧಾರವಾಗಿದ್ದ ಎರಡು ರಾಷ್ಟ್ರಗಳ ಸಿದ್ಧಾಂತದ ಆಧಾರದ ಮೇಲೆ ಪಾಕಿಸ್ತಾನ ರಚನೆಯಾಗಿದೆ. ಇದಕ್ಕಾಗಿ ಸಾಕಷ್ಟು ತ್ಯಾಗ ಬಲಿದಾನಗಳಾಗಿವೆ.
ನೀವು ನಿಮ್ಮ ಮಕ್ಕಳಿಗೆ ಈ ಕಥೆಗಳನ್ನು ಹೇಳಲೇಬೇಕು. ನಾವು ಹಿಂದೂಗಳಿಗಿಂತ ಭಿನ್ನರು ಎಂದು ಹೇಳಿದ್ದ ಮುನೀರ್, 'ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದೂಗಳಿಗಿಂತ ಭಿನ್ನರು ಎಂದೇ ಭಾವಿಸಿದ್ದರು. ನಮ್ಮ ಧರ್ಮ ಬೇರೆ, ಪದ್ಧತಿಗಳು, ಸಂಸ್ಕೃತಿಗಳೆಲ್ಲವೂ ಬೇರೆ ಬೇರೆ. ಇದು ಎರಡು ರಾಷ್ಟ್ರಗಳ ಅಡಿಪಾಯದ ಸಿದ್ಧಾಂತವಾಗಿತ್ತು ಎಂದಿದ್ದರು.
ಅಂತೆಯೇ ಭಾರತೀಯ ಸೇನೆ ಕುರಿತು ವ್ಯಂಗ್ಯ ಮಾಡಿರುವ ಮುನೀರ್, 'ಭಯೋತ್ಪಾದನೆ ಮುಂದಿಟ್ಟುಕೊಂಡು ಪಾಕಿಸ್ತಾನವನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಆದರೆ 13 ಲಕ್ಷ ಭಾರತೀಯ ಸೈನಿಕರೇ ಪಾಕಿಸ್ತಾನವನ್ನೂ ಏನೂ ಮಾಡಲಾಗಿಲ್ಲ. ಬೆರಳಣಿಕೆಯಷ್ಟು ಇರುವ ಭಯೋತ್ಪಾದಕರು ಏನು ಮಾಡುತ್ತಾರೆ, ಪಾಕಿಸ್ತಾನ ತನ್ನ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದ್ದರು.
Advertisement