
ಭೋಪಾಲ್: ಭಾರತದ ಪ್ರಾಣಿಪ್ರಿಯರಿಗೆ ಸಿಹಿಸುದ್ದಿಯೊಂದಿದ್ದು, ದಕ್ಷಿಣ ಆಫ್ರಿಕಾ ದೇಶದಿಂದ ಭಾರತಕ್ಕೆ ಮತ್ತೆ 8 ಚೀತಾಗಳು ಆಗಮಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಬೊಟ್ಸ್ವಾನದಿಂದ ಮತ್ತೆ 8 ಚೀತಾಗಳನ್ನು ಭಾರತಕ್ಕೆ ತರಲು ನಿರ್ಧರಿಸಲಾಗಿದ್ದು, ಭಾರತದ ಚೀತಾ ಯೋಜನೆ ಅಡಿ ಈ ಚಿರತೆಗಳನ್ನು ಎರಡು ಹಂತದಲ್ಲಿ ಕರೆತರಲಾಗುವುದು ಎಂದು ಮಧ್ಯ ಪ್ರದೇಶ ಸರ್ಕಾರ ತಿಳಿಸಿದೆ. ಈ ಯೋಜನೆಯ ಭಾಗವಾಗಿ ಮೇ ತಿಂಗಳಲ್ಲಿ ನಾಲ್ಕು ಚೀತಾಗಳು ಆಗಮಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ಶುಕ್ರವಾರ ನಡೆದ ಚೀತಾ ಯೋಜನೆಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ.
ಕೀನ್ಯಾ ಮತ್ತು ಬೊಟ್ಸ್ ವಾನದಿಂದ ಹೆಚ್ಚಿನ ಚೀತಾಗಳನ್ನು ಭಾರತಕ್ಕೆ ಕರೆತರುವ ಪ್ರಯತ್ನಗಳು ಸಾಗಿದೆ. ಎರಡು ಹಂತದಲ್ಲಿ 8 ಚೀತಾಗಳನ್ನು ತರಲಾಗುವುದು. ಮೇ ತಿಂಗಳಲ್ಲಿ ನಾಲ್ಕು ಚೀತಾಗಳು ಬೊಟ್ಸ್ ವಾನದಿಂದ ಬರಲಿದ್ದು, ಇದಾದ ಬಳಿಕ ಮತ್ತೆ ನಾಲ್ಕು ಚೀತಾಗಳು ಆಗಮಿಸಲಿವೆ. ಸದ್ಯ ಈ ಸಂಬಂಧ ಭಾರತ ಮತ್ತು ಕೀನ್ಯಾ ನಡುವೆ ಒಪ್ಪಂದದ ಕುರಿತು ಅಂತಿಮ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಸ್ ಟಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.
ಕುನೋ ಬಳಿಕ ಆಫ್ರಿಕನ್ ಚೀತಾಗಳಿಗೆ 2ನೇ ನೆಲೆ
ಕುನೋ ರಾಷ್ಟ್ರೀಯ ಉದ್ಯಾನವನ (ಕೆಎನ್ಪಿ) ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆ ದೇಶದಲ್ಲಿ ಆಫ್ರಿಕನ್ ಚೀತಾಗಳಿಗೆ ಮೊದಲ ನೆಲೆಯಾದ ಎರಡೂವರೆ ವರ್ಷಗಳ ನಂತರ, ಮಂದ್ಸೌರ್ ಜಿಲ್ಲೆಯ ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯ (ಜಿಎಸ್ಡಬ್ಲ್ಯೂಎಸ್) ಅವುಗಳ ಎರಡನೇ ನೆಲೆಯಾಗಲಿದೆ. ಮೂಲಗಳ ಪ್ರಕಾರ ಇದೇ ಕೆಎನ್ಪಿಯಿಂದ ಎರಡು ವಯಸ್ಕ ಚೀತಾಗಳನ್ನು ಬಹುಶಃ ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಪ್ರಭಾಸ್ ಮತ್ತು ಪಾವಕ್ ಎಂಬ ಚೀತಾಗಳನ್ನು ಏಪ್ರಿಲ್ 20 ರಂದು ಜಿಎಸ್ಡಬ್ಲ್ಯೂಎಸ್ (ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯ)ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಈಗಾಗಲೇ ಕಳೆದ ಬೇಸಿಗೆಯಿಂದ, ಚೀತಾ ಆವಾಸಸ್ಥಾನಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಇಲ್ಲಿ ಸಿದ್ಧಪಡಿಸುತ್ತಿದೆ. ಇದು 64 ಚದರ ಕಿ.ಮೀ ಪ್ರದೇಶದಲ್ಲಿ ಅವುಗಳಿಗಾಗಿ ಮೂರು ದೊಡ್ಡ ಆವರಣಗಳನ್ನು ನಿರ್ಮಿಸಿದೆ. "KNP ಯಿಂದ ಆಗಮಿಸುವ ಮೊದಲ ಎರಡು ಚೀತಾಗಳನ್ನು ಒಂದು ದೊಡ್ಡ ಆವರಣದಲ್ಲಿ ಒಟ್ಟಿಗೆ ಇರಿಸಲಾಗುವುದು. ಬಳಿಕ ಹೆಚ್ಚಿನ ಚೀತಾಗಳನ್ನು ಹಂತ ಹಂತವಾಗಿ ಅಲ್ಲಿಗೆ ಸ್ಥಳಾಂತರಿಸಲಾಗುವುದು. ಎಂದು ಅಭಯಾರಣ್ಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
112 ಕೋಟಿ ವ್ಯಯ
ಇನ್ನು ದೇಶದಲ್ಲಿ ಇದುವರೆಗೆ ಚೀತಾ ಯೋಜನೆಗೆ 112 ಕೋಟಿ ರೂ. ವ್ಯಯ ಮಾಡಲಾಗಿದ್ದು, ಅದರಲ್ಲಿ ಶೇ 67ರಷ್ಟು ಮಧ್ಯಪ್ರದೇಶದಲ್ಲಿ ಚೀತಾಗಳ ಪುನರ್ವಸತಿಗೆ ಹೋಗಿದೆ. ಚೀತಾ ಯೋಜನೆ ಅಡಿಯಲ್ಲಿ ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ಚೀತಾಗಳನ್ನು ಈಗ ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು. ಈ ಅಭಯಾರಣ್ಯವೂ ರಾಜಸ್ಥಾನದ ಗಡಿಗೆ ಹೊಂದಿಕೊಂಡಿರುವ ಹಿನ್ನೆಲೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ನಡುವೆ ಅಂತಾರಾಜ್ಯ ಚಿರತೆ ಸಂರಕ್ಷಣೆ ಪ್ರದೇಶ ಒಪ್ಪಂದಕ್ಕೆ ಮುಂದಾಗಲಾಗುವುದು. ಚೀತಾಗಳ ಸಾಮರ್ಥ್ಯವನ್ನು ಹೆಚ್ಚಿಸಲು ಕುನೋ ರಾಷ್ಟ್ರೀಯ ಉದ್ಯಾನವನ ಮತ್ತು ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
26 ಚೀತಾಗಳಿವೆ
ಪ್ರಸ್ತುತ ಭಾರತದಲ್ಲಿ 26 ಚೀತಾಗಳಿದ್ದು, ಕುನೋ ರಾಷ್ಟ್ರೀಯ ಪಾರ್ಕ್ ನಲ್ಲಿ ಇವುಗಳಿಗೆ ಆವಾಸ ಕಲ್ಪಿಸಲಾಗಿದೆ. ಈ 26 ಚೀತಾಗಳ ಪೈಕಿ 16 ಮುಕ್ತ ಅರಣ್ಯದಲ್ಲಿದ್ದರೆ, 10 ಪುನರ್ವಸತಿ ಕೇಂದ್ರದಲ್ಲಿವೆ. ಚೀತಾಗಳನ್ನು ಸಾಟಲೈಟ್ ಕಾಲರ್ ಐಡಿ ಬಳಸಿ 24 ಗಂಟೆ ಟ್ರ್ಯಾಕ್ ಮಾಡಲಾಗುತ್ತಿದೆ. ಅಂತೆಯೇ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಜ್ವಾಲ, ಆಶಾ, ಗಮಿನಿ ಮತ್ತು ವೀರಾ ಹೆಣ್ಣು ಚೀತಾಗಳು ಮರಿಗಳಿಗೆ ಜನ್ಮ ನೀಡಿದ್ದು, ಕಳೆದೆರಡು ವರ್ಷಗಳಲ್ಲಿ ಕುನೋ ರಾಷ್ಟ್ರೀಯ ಪಾರ್ಕ್ನಲ್ಲಿ ಚೀತಾ ಸಂಖ್ಯೆ ದುಪ್ಪಟ್ಟಾಗಿದೆ.
ಚೀತಾ ಸಫಾರಿಗೆ ಮನವಿ
ಇದೇ ವೇಳೆ ಕುನೋದಲ್ಲಿ ಚೀತಾ ಸಫಾರಿಗೆ ಅನುಮತಿ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ. ಅರಣ್ಯದಲ್ಲಿ ಅಥವಾ ಪರಿಸರ ಸೂಕ್ಷ್ಮ ವಲಯದಲ್ಲಿ ಚೀತಾ ಸಫಾರಿಗೆ ಈ ಅನುಮತಿ ಅಗತ್ಯವಾಗಿದೆ. ಈ ಅರ್ಜಿ ಇನ್ನೂ ಬಾಕಿ ಉಳಿದಿದೆ ಎಂದರು.
ದಕ್ಷಿಣ ಆಫ್ರಿಕಾ ದೇಶ ನಮಿಬಿಯಾದಿಂದ 2022ರ ಸೆಪ್ಟೆಂಬರ್17ರಂದು ಏಂಟು ಚೀತಾಗಳನ್ನು ಮೊದಲ ಬಾರಿಗೆ ಭಾರತದ ಕುನೋ ಅರಣ್ಯ ಪ್ರದೇಶಕ್ಕೆ ಕರೆ ತರಲಾಗಿತ್ತು. 2023ರ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳನ್ನು ತರಲಾಗಿತ್ತು.
ಆರಂಭದಲ್ಲಿ ಕೆಲವು ಚೀತಾಗಳು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲಾಗದೇ ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದರೂ ಉಳಿದ ಚೀತಾಗಳು ಸಂತಾನ ವೃದ್ದಿಸಿಕೊಂಡಿವೆ. ಪರಿಣಾಮ ಇದೀಗ ಮರಿಗಳು ಸೇರಿ ದೇಶದಲ್ಲಿ ಇದೀಗ ಒಟ್ಟು 26 ಚೀತಾಗಳು ನೆಲೆಸುವಂತಾಗಿದೆ.
Advertisement