
ಬಕ್ಸಾರ್ (ಬಿಹಾರ): ಬಿಹಾರದಲ್ಲಿ ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ ನಡುವಿನ ಮೈತ್ರಿಯನ್ನು 'ಅವಕಾಶವಾದಿ' ಎಂದು ಕರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ನಿತೀಶ್ ಕುಮಾರ್ 'ಖುರ್ಚಿ'ಗಾಗಿ ಮಾತ್ರ ಪಕ್ಷ ಬದಲಾಯಿಸುತ್ತಿದ್ದಾರೆ ಎಂದು ಭಾನುವಾರ ಆರೋಪಿಸಿದ್ದಾರೆ.
ಬಕ್ಸಾರ್ನ ದಲ್ಸಾಗರ್ ಕ್ರೀಡಾಂಗಣದಲ್ಲಿ ನಡೆದ ಪಕ್ಷದ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್' ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಸರ್ಕಾರವನ್ನು ಕಿತ್ತೊಗೆಯುವಂತೆ ರಾಜ್ಯದ ಜನರನ್ನು ಒತ್ತಾಯಿಸಿದರು.
'ನಿತೀಶ್ ಕುಮಾರ್ ಮತ್ತು ಬಿಜೆಪಿ ನಡುವಿನ ಮೈತ್ರಿ ಅವಕಾಶವಾದಿಯಾಗಿದೆ. ಇದು ರಾಜ್ಯದ ಜನರಿಗೆ ಒಳ್ಳೆಯದಲ್ಲ. ನಿತೀಶ್ ಕುಮಾರ್ ಕೇವಲ 'ಖುರ್ಚಿ' (ಮುಖ್ಯಮಂತ್ರಿ ಹುದ್ದೆ) ಗಾಗಿ ಪಕ್ಷ ಬದಲಿಸುತ್ತಾರೆ. ಜೆಡಿಯು ಮುಖ್ಯಸ್ಥರು ಮಹಾತ್ಮ ಗಾಂಧಿಯವರನ್ನು ಕೊಂದ ಸಿದ್ಧಾಂತದೊಂದಿಗೆ ಕೈಜೋಡಿಸಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷರು ಆರೋಪಿಸಿದರು.
'2015ರ ಆಗಸ್ಟ್ 18ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರಕ್ಕೆ 1.25 ಲಕ್ಷ ಕೋಟಿ ರೂ. ಪ್ಯಾಕೇಜ್ ನೀಡುವ ಭರವಸೆ ನೀಡಿದ್ದರು. ಅದು ಏನಾಯಿತು ಎಂದು ಬಿಹಾರದ ಜನರು ನಿತೀಶ್ ಕುಮಾರ್ ಅವರನ್ನು ಕೇಳಬೇಕು. ಮೋದಿ ಜಿ ಸುಳ್ಳಿನ ಕಾರ್ಖಾನೆಯನ್ನು ನಡೆಸುತ್ತಿದ್ದಾರೆ. ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಸರ್ಕಾರವನ್ನು ಕಿತ್ತೊಗೆಯಬೇಕು. ಮುಂದಿನ ರಾಜ್ಯ ಚುನಾವಣೆಯಲ್ಲಿ ಜನರು 'ಮಹಾಘಟಬಂಧನ್' ಪಕ್ಷಗಳಿಗೆ ಮತ ಹಾಕಬೇಕು' ಎಂದು ಖರ್ಗೆ ಆರೋಪಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ಸಲ್ಲಿಸಿದ ಆರೋಪಪಟ್ಟಿಯ ಕುರಿತು ಮಾತನಾಡಿದ ಖರ್ಗೆ, 'ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಇದನ್ನು ಮಾಡಲಾಗಿದೆ. ನಮ್ಮ ನಾಯಕರು ಭಯಪಡಿಲವು ಸಾಧ್ಯವಿಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಆರ್ಎಸ್ಎಸ್ ಮತ್ತು ಬಿಜೆಪಿ ಸಮಾಜದ ದುರ್ಬಲ ವರ್ಗಗಳ ಕಲ್ಯಾಣದ ಪರವಾಗಿಲ್ಲ ಎಂದು ದೂರಿದರು.
ಅವರು ಬಡವರು, ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗಗಳ ವಿರುದ್ಧ ಇದ್ದಾರೆ. ಅವರು (ಆರ್ಎಸ್ಎಸ್-ಬಿಜೆಪಿ) ಸಮಾಜದ ಸುಧಾರಣೆಗಾಗಿ ಯೋಚಿಸಲು ಸಾಧ್ಯವಿಲ್ಲ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವಲ್ಲಿ ಅವರು ನಂಬಿಕೆ ಇಡುತ್ತಾರೆ. ಸಂಸತ್ತು ಅಂಗೀಕರಿಸಿದ ವಕ್ಫ್ (ತಿದ್ದುಪಡಿ) ಮಸೂದೆಯು ಸಮುದಾಯಗಳ ನಡುವೆ ವಿಭಜನೆಯನ್ನು ಸೃಷ್ಟಿಸಲು ಬಿಜೆಪಿ ಮತ್ತು ಆರ್ಎಸ್ಎಸ್ ನಡೆಸಿದ ಪಿತೂರಿಯಾಗಿದೆ ಎಂದು ಅವರು ಆರೋಪಿಸಿದರು.
Advertisement