ರಾಜಸ್ಥಾನ: 'ದಲಿತ ಯುವಕನ ಮೇಲೆ ಹಲ್ಲೆ, ಮೂತ್ರ ವಿಸರ್ಜಿಸಿ, ಲೈಂಗಿಕ ದೌರ್ಜನ್ಯ'

ಬಲವಂತವಾಗಿ ಬಟ್ಟೆಗಳನ್ನು ಬಿಚ್ಚಿಸಿ ಆತನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಜೈಪುರ: ರಾಜಸ್ಥಾನದ ಸಿಕಾರ್ ಜಿಲ್ಲೆಯ 19 ವರ್ಷದ ದಲಿತ ಯುವಕನೊಬ್ಬ, ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿ, ಮೂತ್ರ ವಿಸರ್ಜಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಏಪ್ರಿಲ್ 8 ರಂದು ಸಿಕಾರ್‌ನ ಫತೇಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಆದರೆ ಯುವಕನ ಕುಟುಂಬ ದೂರು ನೀಡಿದ ನಂತರ ಏಪ್ರಿಲ್ 16 ರಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

"ಈ ವಿಷಯದಲ್ಲಿ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಯುವಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ(ಡಿಎಸ್‌ಪಿ) ಅರವಿಂದ್ ಕುಮಾರ್ ಹೇಳಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೂರಿನ ಪ್ರಕಾರ, ಏಪ್ರಿಲ್ 8 ರಂದು ತನ್ನ ಗ್ರಾಮದಲ್ಲಿ ಮದುವೆ ಮೆರವಣಿಗೆ ವೀಕ್ಷಿಸಲು ಯುವಕ ಹೊರಬಂದಾಗ, ಇಬ್ಬರು ಆರೋಪಿಗಳು ಕೆಲಸದ ನೆಪದಲ್ಲಿ ಆತನನ್ನು ಬಸ್ ನಿಲ್ದಾಣಕ್ಕೆ ಕರೆದಿದ್ದಾರೆ.

ಸಾಂದರ್ಭಿಕ ಚಿತ್ರ
ಹರಿಯಾಣ: ಪೈಶಾಚಿಕ ಕೃತ್ಯ; ICU ವೆಂಟಿಲೇಟರ್‌ನಲ್ಲಿದ್ದ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!

ನಂತರ ಇಬ್ಬರೂ ಯುವಕನನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಆತನ ಖಾಸಗಿ ಭಾಗಗಳು ಸೇರಿದಂತೆ ಎಲ್ಲಾ ಭಾಗಗಳಿಗೆ ಹೊಡೆದಿದ್ದಾರೆ. ಬಲವಂತವಾಗಿ ಬಟ್ಟೆಗಳನ್ನು ಬಿಚ್ಚಿಸಿ ಆತನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

"ಅವರು ಕುಡಿದಿದ್ದರು. ಅವರು ನನಗೆ ಬಾಟಲಿಯಿಂದ ಹೊಡೆದರು, ನನ್ನ ಮೇಲೆ ಮೂತ್ರ ವಿಸರ್ಜಿಸಿದರು ಮತ್ತು ಜಾತಿ ನಿಂದನೆ ಮಾಡಿದರು" ಎಂದು ಸಂತ್ರಸ್ತ ಯುವಕ ಆರೋಪಿಸಿದ್ದಾರೆ. ಆರೋಪಿಗಳು ತಮ್ಮ ಕೃತ್ಯವನ್ನು ವಿಡಿಯೋ ಮಾಡಿದ್ದಾರೆ ಮತ್ತು ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದಾಗಿ "ಬೆದರಿಸಿದ್ದಾರೆ" ಎಂದು ಯುವಕ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ವಿರೋಧ ಪಕ್ಷದ ನಾಯಕ ಟಿಕಾ ರಾಮ್ ಜುಲ್ಲಿ ಘಟನೆಯನ್ನು ಖಂಡಿಸಿದ್ದು, ಈ ಘಟನೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿ ಇಲ್ಲ ಎಂಬುದನ್ನು ಬಹಿರಂಗಪಡಿಸುತ್ತದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com