ಪಾಳು ಬಿದ್ದ ಮನೆಯಲ್ಲಿ ಅನಾಥವಾಗಿದ್ದ ಪುಟ್ಟ ಕಂದಮ್ಮನ ರಕ್ಷಿಸಿದ ನಟಿ Disha Patani ಸಹೋದರಿ! Video

ದಿಶಾ ಪಟಾಣಿ ಅವರ ಬರೇಲಿ ನಿವಾಸದಲ್ಲಿ ಸಹೋದರಿ ಕುಶ್ಬೂ ಮತ್ತು ಅವರ ತಂದೆ ನಿವೃತ್ತ ಪೊಲೀಸ್ ವೃತ್ತ ಅಧಿಕಾರಿ ಜಗದೀಶ್ ಪಟಾನಿ ಅವರೊಂದಿಗೆ ವಾಸಿಸುತ್ತಿದ್ದಾರೆ.
Actor Disha Patani's sister rescues abandoned child
ಮಗುವನ್ನು ರಕ್ಷಿಸಿದ ನಟಿ ದಿಶಾ ಪಟಾನಿ ಸಹೋದರಿ ಖುಶ್ಬೂ ಪಟಾನಿ
Updated on

ಬರೇಲಿ: ಪಾಳು ಬಿದ್ದ ಮನೆಯಲ್ಲಿ ಅನಾಥವಾಗಿ ಬಿದ್ದಿದ್ದ ಪುಟ್ಟ ಕಂದಮ್ಮನನ್ನು ಖ್ಯಾತ ಬಾಲಿವುಡ್ ನಟಿ ದಿಶಾಪಟಾನಿ (Disha Patani) ಸಹೋದರಿ ಖುಷ್ಪೂ ಪಟಾನಿ ರಕ್ಷಿಸಿದ್ದಾರೆ.

ಉತ್ತರ ಪ್ರದೇಶದ ಬರೇಲಿಯಲ್ಲಿ ಭಾನುವಾರ ಬೆಳಿಗ್ಗೆ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ ಖುಷ್ಬೂ ಪಟಾನಿ ಅವರು ಶಿಥಿಲಗೊಂಡ ಕಟ್ಟಡದಿಂದ ಸುಮಾರು ಒಂಬತ್ತರಿಂದ 10 ತಿಂಗಳ ವಯಸ್ಸಿನ ಅನಾಥ ಶಿಶುವನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ರಕ್ಷಿಸಲು ಖುಷ್ಬೂ ಗೋಡೆ ಹತ್ತಿ ಹರಸಾಹಸವನ್ನೇ ಮಾಡಿದ್ದು, ಜನರೇ ಇಲ್ಲದ ಪಾಳು ಬಿದ್ದ ಮನೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಮಗುವನ್ನು ರಕ್ಷಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದಿಶಾ ಪಟಾಣಿ ಅವರ ಬರೇಲಿ ನಿವಾಸದಲ್ಲಿ ಸಹೋದರಿ ಕುಶ್ಬೂ ಮತ್ತು ಅವರ ತಂದೆ ನಿವೃತ್ತ ಪೊಲೀಸ್ ವೃತ್ತ ಅಧಿಕಾರಿ ಜಗದೀಶ್ ಪಟಾನಿ ಅವರೊಂದಿಗೆ ವಾಸಿಸುತ್ತಿದ್ದಾರೆ. ಭಾನುವಾರ ಬೆಳಗ್ಗೆ ವಾಕಿಂಗ್ ಮಾಡುವಾಗ ಮನೆಯ ಹಿಂಬದಿಯಲ್ಲಿರುವ ಪಾಳು ಬಿದ್ದ ಕಟ್ಟಡದಿಂದ ಮಗು ಅಳುತ್ತಿರುವ ಶಬ್ದಕೇಳಿಸಿದೆ.

ಆರಂಭದಲ್ಲೇ ಯಾರದ್ದೋ ಮನೆಯಲ್ಲಿ ಮಗು ಅಳುತ್ತಿದೆ ಎಂದು ಖುಶ್ಬೂ ಕುಟುಂಬಸ್ಥರು ಸುಮ್ಮನಾಗಿದ್ದರು. ಆದರೆ ಮಗುವಿನ ಅಳು ನಿಲ್ಲದ ಕಾರಣ ಅನುಮಾನಗೊಂಡ ಖುಷ್ಬೂ ಕುಟುಂಬಸ್ಥರು ಒಮ್ಮೆ ನೋಡೋಣ ಎಂದು ಪಾಳು ಬಿದ್ದ ಮನೆ ಬಳಿ ಬಂದಿದ್ದಾರೆ.

ಎತ್ತರದ ಗೋಡೆಗಳಿದ್ದ ಕಾರಣ ಅಲ್ಲಿ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲದೆ ಕೆಲ ಗೋಡೆಗಳು ಕುಸಿದಿದ್ದ ಕಾರಣ ಆರಂಭದಲ್ಲಿ ಖುಷ್ಬೂ ಅವರು ಹಿಂದೇಟು ಹಾಕಿದ್ದರು. ಆದರೆ ಮಗುವಿನ ಅಳು ಪದೇ ಪದೇ ಕೇಳಿಸುತ್ತಿದ್ದರಿಂದ ಧೈರ್ಯ ಮಾಡಿದ ಖುಶ್ಬೂ ಅವರು ಹರಸಾಹಸ ಪಟ್ಟು ಗೋಡೆ ಏರಿದ್ದಾರೆ.

ಬಳಿಕ ಒಳಗೆ ಪಾಳುಬಿದ್ದ ಕೊಠಡಿಯ ಮಣ್ಣಿನ ನೆಲದ ಮೇಲೆ ಮಗುವೊಂದು ನಿತ್ರಾಣವಾಗಿ ಬಿದ್ದಿರುವುದು ಕಣ್ಣಿಗೆ ಬಿದ್ದಿದೆ. ಕೂಡಲೇ ಖುಶ್ಬೂ ಅವರು ಮಗುವನ್ನು ಎತ್ತಿಕೊಂಡು ಹೊರಗೆ ತಂದಿದ್ದಾರೆ. ಬಳಿಕ ಮನೆ ಸುತ್ತಮುತ್ತ ವಿಚಾರಿಸಿದ್ದ ಮಗುವಿನ ಪೋಷಕರು ಪತ್ತೆಯಾಗಿಲ್ಲ. ಮಗು ಈ ಪಾಳು ಬಿದ್ದ ಕಟ್ಟಡಕ್ಕೆ ಹೇಗೆ ಬಂತು... ಯಾರು ಇಲ್ಲಿ ಬಿಟ್ಟು ಹೋದರು ಎಂಬ ಮಾಹಿತಿ ಲಭ್ಯವಾಗಿಲ್ಲ.

Actor Disha Patani's sister rescues abandoned child
Amit Mishra: 'ಅನೈತಿಕ ಸಂಬಂಧ, ವರದಕ್ಷಿಣೆ ಕಿರುಕುಳ'; ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ವಿರುದ್ಧ ಪತ್ನಿ ಪೊಲೀಸ್ ದೂರು

ಮಗು ನಿರಂತರವಾಗಿ ಅತ್ತ ಕಾರಣ ಮಗುವಿನ ಗಂಟಲು ಗಾಯವಾಗಿತ್ತು. ಅಲ್ಲದೆ ಮಗುವಿನ ಬಾಯಿಂದ ಶಬ್ಧ ಕೂಡ ಬರುತ್ತಿರಲಿಲ್ಲ. ಅಲ್ಲದೆ ಮುಖದ ಮೇಲೆ ಕೆಲ ಗಾಯಗಳಾಗಿತ್ತು ಎಂದು ವೃತ್ತ ಅಧಿಕಾರಿ (ನಗರ-I) ಪಂಕಜ್ ಶ್ರೀವಾಸ್ತವ ಹೇಳಿದ್ದಾರೆ.

ಬಳಿಕ ಮಗುವನ್ನು ಮನೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಕುಟುಂಬವು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆಂದು ಗುರುತಿಸಲು ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com